ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಗಣರಾಜ್ಯದಲ್ಲಿನ ಅವಿವೇಕ ಮತ್ತು ಅದೃಷ್ಟ

ಪ್ರಧಾನಿ ಮೋದಿ ಅವರು ರೈತರನ್ನು ಭೇಟಿಯಾಗಿ, ಅವರ ಆತಂಕಗಳಿಗೆ ಕಿವಿಗೊಡಬೇಕು
Last Updated 2 ಡಿಸೆಂಬರ್ 2021, 20:00 IST
ಅಕ್ಷರ ಗಾತ್ರ

ಒಂದು ವರ್ಷದ ಹಿಂದೆ ಶುರುವಾದ ರೈತರ ಪ್ರತಿಭಟನೆಯು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಭರವಸೆ ನೀಡಿ (ಅವುಗಳನ್ನು ಹಿಂಪಡೆಯುವ ಮಸೂದೆಗೆ ಸಂಸತ್ತು ಅನುಮೋದನೆ ನೀಡಿದೆ), ಕ್ಷಮೆ ಯಾಚಿಸಿದ ನಂತರವೂ ಮುಂದುವರಿದಿದೆ. 2014ರಲ್ಲಿ ತಮ್ಮ ಪಕ್ಷಕ್ಕೆ ಜಯ ತಂದುಕೊಟ್ಟು, ಪ್ರಧಾನಿ ಗದ್ದುಗೆಗೆ ಏರಿದ ನಂತರ ನರೇಂದ್ರ ಮೋದಿ ಅವರು ಎದುರಿಸುತ್ತಿರುವ ಅತ್ಯಂತ ತೀವ್ರವಾದ ಸವಾಲಿನ ಸಂದರ್ಭ ಇದಾಗಿರಬೇಕು. ಕೃಷಿಗೆ ಸಂಬಂಧಿಸಿದ ಮೂರು ಕಾನೂನುಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿದ್ದು, ನಂತರ ಅವುಗಳಿಗೆ ಸಂಬಂಧಿಸಿದ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿದ್ದು ಮೋದಿ ಅವರು ಮಾಡಿದ ಅತಿದೊಡ್ಡ ತಪ್ಪು ಎಂದು ಈಗ ಇಷ್ಟೆಲ್ಲ ವಿದ್ಯಮಾನಗಳು ನಡೆದ ನಂತರದಲ್ಲಿ ಹೇಳಬಹುದು. ಹೀಗಿದ್ದರೂ, ಈಗಿನ ಸಂದರ್ಭದಲ್ಲಿ ಮೂರು ಕಾಯ್ದೆಗಳನ್ನು ಹಿಂಪಡೆಯುವ ತೀರ್ಮಾನ ಹಾಗೂ ಕ್ಷಮೆ ಯಾಚನೆಯು (ಕಾಯ್ದೆಗಳ ಸದುದ್ದೇಶದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗದ್ದಕ್ಕೆ) ಅವರು ಇರಿಸಬಹುದಾಗಿದ್ದ ಅತ್ಯಂತ ವಿವೇಕದ ನಡೆಗಳು. ಈ ಕ್ರಮವು ರೈತರ ಜೊತೆ ಚರ್ಚೆ, ಮಾತುಕತೆಗಳಿಗೆ ಬಾಗಿಲು ತೆರೆದಿರಿಸಿದೆ.‌

ಅಧಿಕಾರದ ಮಹಲಿನ ತುದಿಯಲ್ಲಿ ಕುಳಿತಿರುವ, ತಳಮಟ್ಟದ ವಾಸ್ತವಗಳಿಂದ ದೂರ ಸಾಗಿರುವ ರಾಜಕೀಯ ನಾಯಕರ ದೃಷ್ಟಿ ಮಂಜಾಗುತ್ತದೆ. ಅವರಿಗೆ ಅತ್ಯಂತ ಸ್ಪಷ್ಟವಾಗಿರುವ ಸಂದೇಶವನ್ನೂ ಓದಲು ಆಗುವುದಿಲ್ಲ. ರಾಜಕೀಯ ಲೆಕ್ಕಾಚಾರಗಳು ಇಲ್ಲದೆಯೇ ಅವರು ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಅವರ ಒಂದು ಕಣ್ಣು ಸದಾ ಚುನಾವಣೆಗಳ ಮೇಲೆಯೇ ಇರುತ್ತದೆ. ಇದರ ಜೊತೆಗೆ, ಅಹಂಕಾರವು ಅವರು ಸತ್ಯಕ್ಕೆ ಎದುರಾಗದಂತೆ ಮಾಡುತ್ತದೆ. ಮೋದಿ ಅವರು ಕೂಡ ಈ ಪ್ರವೃತ್ತಿಗೆ ಹೊರತಾದ ವ್ಯಕ್ತಿಯಲ್ಲ. ಗಡಿಯಲ್ಲಿ ಚೀನಾ ಸೇನೆಯ ಜಮಾವಣೆ ಕುರಿತ ವರದಿಗಳ ಬಗ್ಗೆ ಜವಾಹರಲಾಲ್ ನೆಹರೂ ಅವರು ಕಿವುಡಾಗಿದ್ದರು. ನಂತರದಲ್ಲಿ, ದೇಶದ ಮೇಲೆ ಚೀನಾದವರು ವಿನಾಶಕಾರಿ ದಾಳಿ ನಡೆಸಿದರು. ಇಂದಿರಾ ಗಾಂಧಿ ಅವರು ಸಂಸ್ಥೆಗಳ ಸ್ವಾಯತ್ತೆಯನ್ನು ಹಾಳುಮಾಡಿಬಿಟ್ಟರು. ನರಸಿಂಹ ರಾವ್ ಅವರು ಧರ್ಮನಿರಪೇಕ್ಷ ನಿಲುವು ಹೊಂದಿದ್ದರಾದರೂ, ಹಿಂದೂಗಳ ಓಲೈಕೆಗಾಗಿ ಬಾಬರಿ ಮಸೀದಿ ಧ್ವಂಸಕ್ಕೆ ನೆರವಾದರು. ರಾಜೀವ್ ಗಾಂಧಿ ಅವರು ಶಾ ಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪಾಲಿಸಲಿಲ್ಲ. ಮುಸ್ಲಿಂ ಮತಬ್ಯಾಂಕ್‌ ಮೇಲೆ ಅವರಿಗೆ ಒಂದು ಕಣ್ಣಿತ್ತು. ಇಂತಹ ಅಪರಾಧಗಳ‍ಪಟ್ಟಿ ದೊಡ್ಡದಾಗಿದೆ.

ಗಣರಾಜ್ಯ ದೇಶವೊಂದರ ಸರ್ಕಾರವನ್ನು ಮುನ್ನಡೆಸುವ, ರಾಜಕೀಯ ಪಕ್ಷವೊಂದರ ಬಲಿಷ್ಠ ನಾಯಕನ ಸುತ್ತ ಆಪ್ತರ ಸಣ್ಣ ಗುಂಪೊಂದು ಯಾವಾಗಲೂ ಇರುತ್ತದೆ. ಈ ಗುಂಪಿನಲ್ಲಿನ ಜನ ಭಟ್ಟಂಗಿಗಳಾಗಿ ಪರಿವರ್ತಿತರಾಗುತ್ತಾರೆ. ಅವರು ಹೊರಜಗತ್ತಿನ ಸಂಪರ್ಕಕ್ಕೆ ನಾಯಕ ಬಾರದಂತೆ ನೋಡಿಕೊಳ್ಳುತ್ತಾರೆ. ಮಹಾರಾಜನೊಬ್ಬ ಮೂರ್ಖತನಕ್ಕೆ ಯಾವ ರೀತಿಯಲ್ಲಿ ಬಲಿಯಾಗಬಲ್ಲನೋ ಅದೇ ರೀತಿಯಲ್ಲಿ ಈ ನಾಯಕನೂ ಬಲಿಯಾಗಬಲ್ಲ. ಈ ನಾಯಕ ಜನಸಾಮಾನ್ಯರ ಜೊತೆ ಬೆರೆಯಬಲ್ಲ ಸಾಮರ್ಥ್ಯ ಕಳೆದುಕೊಳ್ಳುತ್ತಾನೆ.

ಈಗ ನಡೆದಿರುವ ರೈತರ ಪ್ರತಿಭಟನೆಯಂತಹ ಜನಸಾಮಾನ್ಯರ ಪ್ರತಿಭಟನೆಯು ಮಾಮೂಲಿ ರಾಜಕೀಯ ಪ್ರತಿಭಟನೆಗಳಂತೆ ಅಲ್ಲ. ಇದು ರಾಜಕೀಯಕ್ಕೆ ಹೊರತಾದುದು. ಸಮಾನ ಹಿತಾಸಕ್ತಿಗಳ ಕಾರಣದಿಂದಾಗಿ ನಡೆಯುವ ಇಂತಹ ಪ್ರತಿಭಟನೆಗಳು ವಿಫಲವಾಗುವ ಸಾಧ್ಯತೆ ಇಲ್ಲ. ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲ ಒಂದಾದ ನಂತರ ಒಂದರಂತೆ ಬರುವುದು, ಬಿತ್ತನೆ ಮತ್ತು ಕೊಯ್ಲಿನಲ್ಲಿ ಇರುವ ಲಯ, ಕೃಷಿ ಚಟುವಟಿಕೆಗಳ ಜೊತೆ ನಂಟು ಹೊಂದಿರುವ ಸಾಕುಪ್ರಾಣಿಗಳೊಂದಿಗಿನ ಒಡನಾಟ, ತಾವು ನಿಭಾಯಿಸಬೇಕಿರುವ ಕರ್ತವ್ಯ ಹಾಗೂ ತಮ್ಮ ಮೇಲಿರುವ ಸಾಲದ ಹೊರೆ... ಇವುಗಳ ಕಾರಣದಿಂದಾಗಿ ರೈತರು ನೆಲದ ಜೊತೆ ಸದಾ ನಂಟು ಹೊಂದಿರುತ್ತಾರೆ. ರೈತರು ನಡೆಸಿದ ಇಂತಹ ಚಳವಳಿ ಗಣರಾಜ್ಯವೊಂದರ ಪಾಲಿನ ಅದೃಷ್ಟವೆಂದು ನೋಡಬೇಕು. ರೂಪಿಸಿದ ಕಾನೂನುಗಳ ಹಿಂದೆ ಒಳ್ಳೆಯ ಆಶಯ ಇದ್ದರೂ, ಪ್ರಗತಿಪರವಾದ ಸುಧಾರಣೆಗಳು ಜಾರಿಗೆ ಬಂದಿದ್ದರೂ, ಪ್ರಜಾತಾಂತ್ರಿಕ ಪ್ರಕ್ರಿಯೆಯ ಪಾಲನೆ ಆಗಿಲ್ಲವೆಂದಾದರೆ ಹಾಗೂ ಸಂಬಂಧಪಟ್ಟ ಸಮುದಾಯಗಳ ಜೊತೆ ಸಮಾಲೋಚನೆ ನಡೆಸಲಿಲ್ಲವೆಂದಾದರೆ ಪ್ರತಿರೋಧ ಎದುರಾಗುತ್ತದೆ ಎಂಬ ಸಂದೇಶವನ್ನು ಈ ಚಳವಳಿಯು ಆಳುವವರಿಗೆ ಸ್ಪಷ್ಟವಾಗಿ ರವಾನಿಸುತ್ತದೆ. ಗುರಿ ಎಷ್ಟು ಪವಿತ್ರವೋ ಮಾರ್ಗವೂ ಅಷ್ಟೇ ಪವಿತ್ರ. ಈಗಿನ ಸಂದರ್ಭದಲ್ಲಿ ರೈತರು ನಡೆಸಿರುವ ಚಳವಳಿಯು ನಮ್ಮ ಪ್ರಜಾತಂತ್ರಕ್ಕೆ ಸಿಕ್ಕಿರುವ ದೃಢೀಕರಣ ಪತ್ರ ಇದ್ದಂತೆ. ಇದು ಸಂಭ್ರಮಿಸ ಬೇಕಾದುದು.

ಕ್ಯಾಪ್ಟನ್ ಜಿ.ಆರ್.ಗೋಪಿನಾಥ್
ಕ್ಯಾಪ್ಟನ್ ಜಿ.ಆರ್.ಗೋಪಿನಾಥ್

ಗೆದ್ದುಕೊಳ್ಳುವುದು ಆಡಳಿತ ನಡೆಸುವುದಕ್ಕಿಂತಲೂ ಸುಲಭದ್ದು. ಸಾಮ್ರಾಜ್ಯಗಳನ್ನು ಆಳಿದವರಿಗೆ ಈ ಸಂಗತಿಯು ತಾವು ಯುದ್ಧ ಗೆದ್ದುಕೊಂಡ ನಂತರದಲ್ಲಿ ಗೊತ್ತಾಗಿದ್ದಿದೆ. ಇದು ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಗೊತ್ತಾಗಿರಬಹುದು. ಚುನಾವಣೆಗಳನ್ನು ಗೆಲ್ಲುವ ಕಲೆಯನ್ನು, ಬೇರೆ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ಆಡಳಿತಾರೂಢ ಪಕ್ಷಗಳಲ್ಲಿನ ಆಂತರಿಕ ಭಿನ್ನಮತದಿಂದಾಗಿ ಅಸ್ಥಿರತೆ ಮೂಡಿದಾಗ ಅಲ್ಲಿ ಅಧಿಕಾರ ಕಸಿದುಕೊಳ್ಳುವ ಕಲೆಯನ್ನು ಇವರಿಬ್ಬರೂ ಕರಗತ ಮಾಡಿಕೊಂಡಿದ್ದಾರೆ. ಆದರೆ, ಇದನ್ನು ಮಾಡುವುದೇ ಬೇರೆ; ಸಮಾನ ಅಭಿವೃದ್ಧಿಯನ್ನು ಸಾಧಿಸುವ, ಸ್ಥಿರತೆ ಮತ್ತು ಕೋಮು ಸೌಹಾರ್ದವನ್ನು ತರುವ ಆಡಳಿತವನ್ನು ನೀಡುವುದೇ ಬೇರೆ.‌

ಅಂತರರಾಷ್ಟ್ರೀಯ ಸಂಬಂಧದ ಜೊತೆ ಬೆಸೆದುಕೊಂಡಿರುವ ರಾಜಕಾರಣ ಮತ್ತು ಜಾಗತೀಕರಣದ ನಡುವಿನ ಸಂಬಂಧ ಹೆಚ್ಚುತ್ತಿರು
ವಂತೆಯೇ ಆರ್ಥಿಕತೆಗೆ ಸಂಬಂಧಿಸಿದ ಸಂಗತಿಗಳು ಹೆಚ್ಚು ಸಂಕೀರ್ಣವಾಗುತ್ತಿವೆ. ಈ ವಿಚಾರದಲ್ಲಿ ಪಂಡಿತರ ಮಾತುಗಳನ್ನು ಆಲಿಸುವುದು ಒಳ್ಳೆಯದೇ. ಆದರೆ, ಅವರ ಅಭಿಪ್ರಾಯಗಳು ಹಲವು ಬಾರಿ ಭಿನ್ನವಾಗಿರುತ್ತವೆ. ಎಲ್ಲ ಅರ್ಥಶಾಸ್ತ್ರಜ್ಞರನ್ನು ಒಂದೆಡೆ ಸೇರಿಸಿದರೆ ಎಲ್ಲರೂ ಒಂದೊಂದು ದಿಕ್ಕಿನತ್ತ ಬೆರಳು ತೋರಿಸುತ್ತಿರುತ್ತಾರೆ ಎಂದು ಜಾರ್ಜ್ ಬರ್ನಾರ್ಡ್ ಶಾ ಒಮ್ಮೆ ಹೇಳಿದ್ದರು. ಸಂಕೀರ್ಣ ಸಮಸ್ಯೆಗಳಿಗೆ ಸುಲಭದ ಪರಿಹಾರ ಇರುವುದಿಲ್ಲ. ಅಂತಿಮವಾಗಿ ಬೇಕಿರುವುದು, ರಾಜಕೀಯ ಇಚ್ಛಾಶಕ್ತಿ ಮತ್ತು ಸಂಬಂಧಪಟ್ಟವರ ಜೊತೆ ವ್ಯಾಪಕ ಚರ್ಚೆ. ಇವೆರಡು ಇದ್ದರೆ ಸಮ್ಮತಿ ಮೂಡಬಹುದು.

ಈಗ ಹಿಂದಕ್ಕೆ ಪಡೆದಿರುವ ಮೂರು ಕಾಯ್ದೆಗಳು ಲಕ್ಷಾಂತರ ಜನ ರೈತರಿಗೆ ಒಳಿತು ಮಾಡಬಲ್ಲವಾಗಿದ್ದವು. ಆದರೆ, ಈ ಕಾಯ್ದೆಗಳಿಂದಾಗಿ ಎ‍ಪಿಎಂಸಿ ವ್ಯವಸ್ಥೆ ಕುಸಿದುಬೀಳಬಹುದು ಎಂಬ ಆತಂಕ ಮೂಡಿದ್ದರಲ್ಲಿ ಹುರುಳಿಲ್ಲದಿಲ್ಲ. ಆ ರೀತಿ ಆಗಿದ್ದರೆ ರೈತರು ಎಂಎನ್‌ಸಿಗಳ, ಭಾರತದ ಕಾರ್ಪೊರೇಟ್ ಕಂಪನಿಗಳ ಮರ್ಜಿಗೆ ಸಿಲುಕಬೇಕಾಗುತ್ತದೆ ಎಂಬ ಆತಂಕವೂ ಇತ್ತು. ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮಸೂದೆಯನ್ನು ಚರ್ಚೆಯೇ ಇಲ್ಲದೆ ಅಂಗೀಕರಿಸಿದ ಬಗೆಯು ಪ್ರಧಾನಿಯವರು ತಾವು ಸಂಪಾದಿಸಿದ್ದ ಒಂದಿಷ್ಟು ವಿಶ್ವಾಸವನ್ನು ಹಾಳುಮಾಡಿತು. ವಿಸ್ತೃತ ಚರ್ಚೆ ಸಾಧ್ಯವಾಗಿದ್ದಿದ್ದರೆ, ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದ ಅನುಮಾನಗಳಿಗೆ ಸ್ಪಷ್ಟನೆ ಸಿಗುತ್ತಿತ್ತು. ಎಲ್ಲರ ಅಭಿಪ್ರಾಯವನ್ನೂ ಆಲಿಸಿ, ಹೊಸ ಕಾಯ್ದೆ ರೂಪಿಸಲು ಹಾದಿ ಸುಗಮವಾಗುತ್ತಿತ್ತು.

ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಮೋದಿ ಅವರು ಮಾಡಿದ ಘೋಷಣೆಯು ಸಮಷ್ಟಿಯಲ್ಲಿ ಸಮಾಧಾನದ ನಿಟ್ಟುಸಿರೊಂದು ಹೊರಡುವಂತೆ ಮಾಡಿತು. ಮೋದಿ ಅವರು ಪೂರ್ಣ ಪ್ರಮಾಣದಲ್ಲಿ ಕ್ಷಮೆ ಯಾಚಿಸಲಿಲ್ಲವಾದರೂ, ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇರಿಸುವವರೇ ಅಲ್ಲ ಎಂಬ ಹೆಗ್ಗಳಿಕೆ ಹೊತ್ತಿರುವ ಅವರು ತುಸು ಔದಾರ್ಯ ತೋರಿಸಿದರು. ರೈತರ ಜೊತೆ ಚರ್ಚೆ ಹಾಗೂ ಮಾತುಕತೆಗೆ ಬಾಗಿಲು ತೆರೆದರು. ರೈತರು ತಮ್ಮ ಹೊಲಗಳಿಗೆ ಮರಳುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಈಗ ರೈತರು ಇನ್ನೊಂದಿಷ್ಟು ಹೊಸ ಬೇಡಿಕೆಗಳನ್ನು ಇರಿಸಿದ್ದಾರೆ. ಬೇಡಿಕೆಗಳು ಈಡೇರುವವರೆಗೂ ವಾಪಸ್ ಹೋಗುವುದಿಲ್ಲ ಎಂದಿದ್ದಾರೆ.

ಇದನ್ನು ಮೋದಿ ಅವರು ತಮ್ಮ ಅಧಿಕಾರಕ್ಕೆ ಸವಾಲು ಎಂದು ಭಾವಿಸಬಾರದು. ಮೋದಿ ಅವರು ಹೊಂದಾಣಿಕೆಯ ಹೆಜ್ಜೆ ಇರಿಸಬೇಕು. ಅವರು ರೈತರನ್ನು ಭೇಟಿಯಾಗಿ, ಅವರ ಆತಂಕಗಳಿಗೆ ಕಿವಿಗೊಡಬೇಕು. ‘ಭಯದಿಂದ ನಾವು ಹೊಂದಾಣಿಕೆ ಮಾಡಿಕೊಳ್ಳ
ಬೇಕಾಗಿಲ್ಲ. ಆದರೆ, ಹೊಂದಾಣಿಕೆಗೆ ಭಯಪಡಬೇಕಾದ ಅಗತ್ಯವೂ ಇಲ್ಲ’ ಎಂದು ಜಾನ್ ಎಫ್. ಕೆನಡಿ ಹೇಳಿದ್ದ ಮಾತನ್ನು ಮೋದಿ ಅವರು ನೆನಪಿನಲ್ಲಿ ಇರಿಸಿಕೊಂಡರೆ ಚೆನ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT