ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಜಡತ್ವ ಬೇಡ: ಸನ್ನದ್ಧತೆ ಅಗತ್ಯ

ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯ ವೃದ್ಧಿಯು ಈ ದುರಿತ ಕಾಲದಲ್ಲಿನ ಅತ್ಯುತ್ತಮ ಕಾರ್ಯ
Last Updated 20 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಕೋವಿಡ್ ಸೋಂಕಿನ ವಿರುದ್ಧ ಈಗಾಗಲೇ ನಡೆಯುತ್ತಿರುವ ಹೋರಾಟದಲ್ಲಿ ಓಮೈಕ್ರಾನ್ ರೂಪಾಂತರ ತಳಿಯ ಹೊಸ ಸವಾಲನ್ನು ನಾವೀಗ ಎದುರುಗೊಂಡಿದ್ದೇವೆ. ಭಾರತದಲ್ಲಿ ಓಮೈಕ್ರಾನ್ ಸೋಂಕಿನ ಮೊದಲ ಎರಡು ಪ್ರಕರಣಗಳು ಪತ್ತೆಯಾದದ್ದು ಬೆಂಗಳೂರಿನಲ್ಲೇ. ಓಮೈಕ್ರಾನ್ ಪ್ರಕರಣಗಳು ನಿಧಾನಕ್ಕೆ ಏರಿಕೆಯಾಗುತ್ತಿವೆ. ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಈ ತಿಂಗಳ 19ರವರೆಗಿನ ವರದಿಯ ಪ್ರಕಾರ, ರಾಷ್ಟ್ರ ಮಟ್ಟದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 151.

ಓಮೈಕ್ರಾನ್ ಕುರಿತಾದ ಪುರಾವೆಗಳು ಇನ್ನೂ ಆರಂಭಿಕ ಹಂತಗಳಲ್ಲಿವೆ. ಆದರೆ ಇದು ಅತಿವೇಗವಾಗಿ ಹರಡಬಲ್ಲದು ಹಾಗೂ ಲಸಿಕೆ ಹಾಕಿಸಿಕೊಂಡವರಿಗೂ ಸೋಂಕು ತಗುಲಿಸಬಲ್ಲದು ಎಂಬಂತೆ ಗೋಚರವಾಗುತ್ತಿದೆ. 2022ರ ಫೆಬ್ರುವರಿ ವೇಳೆಗೆ ತೀವ್ರವಾಗ
ಬಹುದಾದಂತಹ ಸಾಂಕ್ರಾಮಿಕದ ‘ಮೂರನೇ ಅಲೆ’ ಯನ್ನು ಓಮೈಕ್ರಾನ್ ಉಂಟುಮಾಡಬಹುದು ಎಂದು ತಜ್ಞರು ಊಹಿಸುತ್ತಿದ್ದಾರೆ.

2021ರ ಮಾರ್ಚ್ ಸುತ್ತಮುತ್ತ, ಭಾರತದಲ್ಲಿ ಆರಂಭ ವಾದ ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯು ಸುಮಾರು ನಾಲ್ಕು ತಿಂಗಳುಗಳ ಕಾಲ ಕಾಡಿಸಿತ್ತು. ‘ಡೆಲ್ಟಾ ವೇರಿಯಂಟ್’ ಎಂದು ವಿಜ್ಞಾನಿಗಳು ನಾಮಕರಣ ಮಾಡಿದ ಕೊರೊನಾ ವೈರಸ್‌ನ ರೂಪಾಂತರ ತಳಿಯಿಂದ ಇದು ಉಂಟಾಯಿತು. 2021ರ ಏಪ್ರಿಲ್ 30ರಂದು, ಮೊದಲ ಬಾರಿಗೆ ಸೋಂಕಿತರ ಸಂಖ್ಯೆ 4 ಲಕ್ಷ ದಾಟಿ ಮೇ ತಿಂಗಳ ನಂತರ ನಿಧಾನವಾಗಿ ಇಳಿಮುಖವಾಗತೊಡಗಿತು. ಸಾಂಕ್ರಾಮಿಕವುಆರಂಭವಾದಾಗಿನಿಂದ ದಾಖಲಾ ಗಿರುವ 4.77 ಲಕ್ಷ ಸಾವುಗಳ ಪೈಕಿ 2.5 ಲಕ್ಷಕ್ಕೂ ಹೆಚ್ಚು ಸಾವುಗಳು ಎರಡನೇ ಅಲೆ ಸಂದರ್ಭದಲ್ಲೇ ಘಟಿಸಿವೆ.

ಭಾರತದಲ್ಲಿ ಈ ವರ್ಷ ಜೂನ್– ಜುಲೈನಲ್ಲಿ ಎರಡನೇ ಅಲೆ ಪ್ರಕರಣಗಳ ಸಂಖ್ಯೆ ತಗ್ಗಿತು. ಕೋವಿಡ್ ಸಾವುಗಳ ನಿಯಂತ್ರಣ ಹಾಗೂ ಕಾಯಿಲೆಯ ವಿರುದ್ಧ ರಕ್ಷಣೆ ನೀಡುವಲ್ಲಿ ಲಸಿಕೆಗಳು ಮುಖ್ಯ ಪಾತ್ರ ವಹಿಸಿದವು. ನಿಧಾನವಾಗಿ ಜನರ ಚಟುವಟಿಕೆಗಳ ಮೇಲಿನ ನಿರ್ಬಂಧ ಗಳನ್ನೂ ಸಡಿಲಿಸಲಾಯಿತು. ಉದಾಹರಣೆಗೆ, ಕೆಲವು ಸುರಕ್ಷಾ ನಿಯಮಗಳ ಜೊತೆಗೆ ಜುಲೈ ಮೊದಲ ವಾರದಲ್ಲಿ ಮಾಲ್‌ಗಳನ್ನು ಪುನಃ ತೆರೆಯಲಾಯಿತು. ಸೆಪ್ಟೆಂಬರ್ ನಂತರ, ಅನೇಕ ಉದ್ಯೋಗಿಗಳು ವಾರದ ಕೆಲವು ದಿನ ಕಚೇರಿಗಳಿಂದಲೇ ಕೆಲಸ ಮಾಡಲು ಆರಂಭಿಸಿದರು. ಮಕ್ಕಳೂ ಶಾಲೆಗಳಿಗೆ ಹಿಂತಿರುಗಿದ್ದಾರೆ. ಅರ್ಹ ವಿದ್ಯಾರ್ಥಿಗಳಿಗೆ ಕಡ್ಡಾಯ ಲಸಿಕೆಯೊಂದಿಗೆ, ಸುರಕ್ಷಾ ನಿಯಮಗಳ ಪಾಲನೆಯೊಂದಿಗೆ ಕಾಲೇಜುಗಳೂ ಆರಂಭವಾಗಿವೆ.

ಆದರೆ ಸಹಜ ಜನಜೀವನಕ್ಕೆ ಹೆಚ್ಚು ತೆರೆದುಕೊಳ್ಳು ವುದರಿಂದ ಹೆಚ್ಚಿನ ಅಪಾಯವೂ ಇದೆ. ನೆನಪಿಡಿ, ಸಂತೃಪ್ತ ಭಾವ ತಾಳಲು ಅವಕಾಶವೇ ಇಲ್ಲ. ಡೆಲ್ಟಾ ರೂಪಾಂತರ ತಳಿಯ ಪ್ರವೇಶ ಹಾಗೂ ಇದರಿಂದ ಕಡೆಗೆ ನಮ್ಮ ಆರೋಗ್ಯ ಸಂಪನ್ಮೂಲಗಳ ಮೇಲೆ ಬಿದ್ದಂತಹ ಒತ್ತಡಕ್ಕೆ, ವೈರಸ್ ಅನ್ನು ‘ಸೋಲಿಸಿದ್ದೇವೆ’ ಎಂಬಂಥ ಸಂತೃಪ್ತ ಭಾವದಲ್ಲಿ ಬೀಗಿದ್ದುದೇ ಕಾರಣವಾಗಿತ್ತು ಎಂಬುದನ್ನು ನಾವು ಮರೆಯಬಾರದು.

ಓಮೈಕ್ರಾನ್ ರೂಪಾಂತರ ತಳಿ ಒಡ್ಡಲಿರುವ ಸವಾಲುಗಳು ಡೆಲ್ಟಾ ರೂಪಾಂತರಿಗಿಂತ ಭಿನ್ನವಾಗಿರುತ್ತವೆ. ಹೀಗಾಗಿ, ಎರಡು ಕ್ಷೇತ್ರಗಳಲ್ಲಿ ಆರೋಗ್ಯ ವ್ಯವಸ್ಥೆ ಸಿದ್ಧವಾಗಿ ಇರಬೇಕಾದುದು ಅಗತ್ಯ.

ಮೊದಲನೆಯದು, ತಡೆಗಟ್ಟುವಿಕೆ. ಇದು ಆಶಾ ಹಾಗೂ ಎಎನ್ಎಂನಂತಹ (ಮಹಿಳಾ ಆರೋಗ್ಯ ಸಹಾ ಯಕಿಯರು) ಮುಂಚೂಣಿ ಕಾರ್ಯಕರ್ತರ ಪ್ರಾಥಮಿಕ ಹೊಣೆಗಾರಿಕೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಆರೋಗ್ಯ ವ್ಯವಸ್ಥೆಯ ಜೊತೆಗೆ ಸಮುದಾಯಗಳಿಗೆ ಸಂಪರ್ಕದ ಮೊದಲ ಬಿಂದುವಾಗಿರುವವರು ಈ ಕಾರ್ಯಕರ್ತರೇ. ಸಾಂಕ್ರಾಮಿಕದ ಸಂದರ್ಭದಲ್ಲಿ ಮನೆಮನೆ ಸಮೀಕ್ಷೆ, ಸೋಂಕು ಸಂಪರ್ಕ ಪತ್ತೆ, ಜಾಗೃತಿ ಸಮೀಕ್ಷೆ, ಆಹಾರ ಪಡಿತರ ವಿತರಣೆಯಂತಹ ಕಾರ್ಯಗಳನ್ನು ಕೈಗೊಂಡಿದ್ದ ಈ ಕಾರ್ಯಕರ್ತರು ಈಗ ಲಸಿಕೆ ಅಭಿಯಾನದತ್ತ ಗಮನ ಕೇಂದ್ರೀಕರಿಸಿದ್ದಾರೆ. ಇದು, ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಬೀರಿರುವಂತಹ ಪರಿಣಾಮಗಳ ಕುರಿತು ಮಾಧ್ಯಮಗಳು ಹಾಗೂ ಶೈಕ್ಷಣಿಕ ಸಂಶೋಧನೆಗಳು ವರದಿ ಮಾಡಿವೆ. ಹಲವರು ಜೀವಗಳನ್ನೂ ತೆತ್ತಿದ್ದಾರೆ. ಕೋವಿಡ್ ಕರ್ತವ್ಯ ದಲ್ಲಿದ್ದಾಗ ಅಪಾಯ ಭತ್ಯೆ, ಆರೋಗ್ಯ ವಿಮೆಯಲ್ಲದೆ ತಮ್ಮ ಉದ್ಯೋಗ ಕಾಯಮಾತಿ ಬೇಡಿಕೆಗಳಿಗಾಗಿ 2021ರ ಅಕ್ಟೋಬರ್‌ನಲ್ಲಿ ಈ ಕಾರ್ಯಕರ್ತರು ಒಂದು ದಿನದ ಮುಷ್ಕರ ಸಹ ನಡೆಸಿದ್ದಾರೆ. ನಮ್ಮ ವಿಕೇಂದ್ರೀಕೃತ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ಅವರ ಸೇವೆಗೆ ಸರಿಯಾದ ಮಾನ್ಯತೆ ದೊರಕಬೇಕಿದೆ.

ಎರಡನೆಯ ಕ್ಷೇತ್ರವೆಂದರೆ ಚಿಕಿತ್ಸೆ. ಇಲ್ಲೂ ಮಾನವ ಸಂಪನ್ಮೂಲ ವಿಚಾರಗಳು ಮುಖ್ಯವಾಗುತ್ತವೆ. ಸದ್ಯಕ್ಕೆ ಉದಾಹರಣೆಗೆ, 18 ತಿಂಗಳುಗಳಿಗೂ ಹೆಚ್ಚು ಕಾಲ ಎದುರಿಸಿದ ಕೆಲಸದ ಒತ್ತಡಗಳಿಂದ ಸಿಟ್ಟಾಗಿ ದೆಹಲಿಯ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಕೆಲಸದ ಸ್ಥಿತಿಗತಿ ಸುಧಾರಿಸುವವರೆಗೂ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲವೆಂದು ಖಚಿತವಾಗಿ ಹೇಳಿದ್ದಾರೆ. ಜೊತೆಗೆ ಇದನ್ನು ರಾಷ್ಟ್ರವ್ಯಾಪಿ ಮುಷ್ಕರವಾಗಿಸಲು ಉದ್ದೇಶಿಸಿದ್ದಾರೆ.

ರೋಗ ತಡೆಗಟ್ಟುವಿಕೆ ಹಾಗೂ ಚಿಕಿತ್ಸಾ ಸೇವೆಗಳೆರಡಕ್ಕೂ ಸಂಬಂಧಿಸಿದಂತೆ ಆರೋಗ್ಯ ಕೆಲಸಗಾರರ ತೀವ್ರ ಕೊರತೆಯನ್ನು ಭಾರತ ಎದುರಿಸುತ್ತಿದೆ. ರಾಷ್ಟ್ರೀಯ ಆರೋಗ್ಯ ಕಾರ್ಯತಂಡ ಲೆಕ್ಕಪತ್ರ (2018) ಹಾಗೂ ಎನ್ಎಸ್ಎಸ್ಒ (2017-18) ಅಂದಾಜುಗಳ ಪ್ರಕಾರ, ಭಾರತದಲ್ಲಿನ ಆರೋಗ್ಯ ಮಾನವ ಸಂಪನ್ಮೂಲಗಳು ಡಬ್ಲ್ಯುಎಚ್ಒ ಪ್ರಮಾಣಗಳಿಗಿಂತ ಬಹಳ ಕಡಿಮೆ ಇವೆ. 10 ಸಾವಿರ ಜನಸಂಖ್ಯೆಗೆ ಕೇವಲ 11 ಮಂದಿ ಅರ್ಹ ವೈದ್ಯ/ನರ್ಸ್/ಮಿಡ್ ವೈಫ್‌ಗಳಿದ್ದಾರೆ; ಆದರೆ, ಇರ ಬೇಕಾದ ಪ್ರಮಾಣ 44.5. ಸಂಖ್ಯೆಯಲ್ಲಿನ ಈ ಕೊರತೆಯ ಜೊತೆಗೆ ಸಾಂಕ್ರಾಮಿಕದ ಸಂದರ್ಭದಲ್ಲಿ ಆರೋಗ್ಯ ಕೆಲಸಗಾರರ ಮನೋಸ್ಥೈರ್ಯವೂ ತೀವ್ರವಾಗಿ ಕುಸಿದಿದೆ.

ನಮ್ಮಲ್ಲಿರುವ ಆರೋಗ್ಯ ಕಾರ್ಯತಂಡದವರ ಆರೋಗ್ಯ ಹಾಗೂ ಅವರು ಚೆನ್ನಾಗಿರುವಂತೆ ನೋಡಿಕೊಳ್ಳಬೇಕಾದುದೂ ಮುಖ್ಯ. ಎಂದರೆ, ಅಗತ್ಯ ರಕ್ಷಣಾ ದಿರಿಸು ಹಾಗೂ ಅವರ ವೃತ್ತಿಗೆ ಅನುಸಾರವಾಗಿ ಬೇಕಾ ದಂತಹ ವೈದ್ಯಕೀಯ ಉಪಕರಣಗಳನ್ನು ಒದಗಿಸುವುದಲ್ಲದೆ ಮನಸ್ಸಿನ ಸಮಾಧಾನಕ್ಕಾಗಿ ಅಗತ್ಯವಾದ ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಬೆಂಬಲಗಳನ್ನೂ ಒದಗಿಸಬೇಕು. ಇಲ್ಲದಿದ್ದಲ್ಲಿ ಅವರು ನರಳುವುದಲ್ಲದೆ ರೋಗಿಗಳಿಗೆ ಸರಿಯಾದ ಕಾಳಜಿ ದೊರೆಯದಿರುವುದರಿಂದ ರೋಗಿಗಳೂನರಳುತ್ತಾರೆ.

-ಪ್ರೊ. ಶ್ರೀಲತಾ ರಾವ್ ಶೇಷಾದ್ರಿ
-ಪ್ರೊ. ಶ್ರೀಲತಾ ರಾವ್ ಶೇಷಾದ್ರಿ

ಓಮೈಕ್ರಾನ್ ರೂಪಾಂತರಿಯ ನಿರ್ದಿಷ್ಟ ಸವಾಲು ಗಳನ್ನು ಎದುರಿಸಲು ಆರೋಗ್ಯ ವ್ಯವಸ್ಥೆ ಸನ್ನದ್ಧವಾಗಿ ಇದೆಯೇ ಎಂಬುದು ಮತ್ತೊಂದು ಮುಖ್ಯ ವಿಚಾರ. ಉದಾಹರಣೆಗೆ, ಲಸಿಕೆ ತೆಗೆದುಕೊಂಡಿಲ್ಲದ ಮಕ್ಕಳು ಹೆಚ್ಚು ತೊಂದರೆಗೆ ಒಳಗಾಗಬಹುದು ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ. ಸಾರ್ವಜನಿಕಆರೋಗ್ಯ ವ್ಯವಸ್ಥೆಯಲ್ಲಿ ಮಕ್ಕಳ ತಜ್ಞರ ತೀವ್ರ ಕೊರತೆ ಇದ್ದು, ಗ್ರಾಮೀಣ ಬಡಜನರು ಚಿಕಿತ್ಸೆಗೆ ಹೋಗುವಂತಹ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶೇ 63ರಷ್ಟು ಮಕ್ಕಳ ತಜ್ಞರ ಹುದ್ದೆಗಳು ಖಾಲಿ ಬಿದ್ದಿವೆ ಎಂಬುದನ್ನು ದತ್ತಾಂಶಗಳು ತೋರಿಸಿವೆ. ಮಕ್ಕಳ ಆರೋಗ್ಯ ವಿಭಾಗದ ಐಸಿಯು ಬಹಳಷ್ಟು ವಿಸ್ತರಣೆಗೊಳ್ಳಬೇಕಾದ ಅಗತ್ಯವಿದೆ. ಉದಾಹರಣೆಗೆ, ಮಕ್ಕಳ ಮೇಲೆ ಮೂರನೇ ಅಲೆಯ ಪರಿಣಾಮದ ತೀವ್ರತೆಯನ್ನು ಆಧರಿಸಿ, ರಾಜ್ಯದಾದ್ಯಂತ, 6,801ರಿಂದ 13,602ರಷ್ಟು ಹೆಚ್ಚುವರಿ ಮಕ್ಕಳ ಐಸಿಯು ಹಾಸಿಗೆಗಳ ಅಗತ್ಯ ಬೀಳಬಹುದು ಎಂದು ಹೃದಯ ತಜ್ಞ ಡಾ. ದೇವಿಪ್ರಸಾದ್‌ ಶೆಟ್ಟಿ ನೇತೃತ್ವದ ಕೋವಿಡ್ ಅಲೆ- 3 ತಡೆಗಟ್ಟುವಿಕೆ ಹಾಗೂ ನಿರ್ವಹಣೆಯ ಉನ್ನತ ಮಟ್ಟದ ತಜ್ಞ ಸಮಿತಿಯು ಅಂದಾಜಿಸಿದೆ. ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಈ ಶಿಫಾರಸಿನ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು.

ಹೆಚ್ಚಿನ ಮೂಲಸೌಕರ್ಯ, ಪರಿಕರ ಹಾಗೂ ಆರೋಗ್ಯ ಸಿಬ್ಬಂದಿಗೆ ಅಗತ್ಯ ಸಂಪನ್ಮೂಲಗಳನ್ನು ಸರ್ಕಾರ ಒದಗಿಸಬೇಕಾದುದೇ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಉತ್ತಮ ಕಾರ್ಯವಾಗಲಿದೆ. ಇದು, ಬಿಕ್ಕಟ್ಟಿನ ಸಂದರ್ಭಗಳಲ್ಲಿ ಮಾತ್ರವಲ್ಲ, ಎಲ್ಲಾ ಕಾಲಕ್ಕೂ ಸಾಧ್ಯವಿರುವ ಉತ್ತಮ ಆರೋಗ್ಯ ಸೇವೆ ಒದಗಿಸಲು ನಮ್ಮ ಆರೋಗ್ಯ ವ್ಯವಸ್ಥೆಗೆ ಅನುವು ಮಾಡಿಕೊಡುತ್ತದೆ. ಭವಿಷ್ಯದಲ್ಲೂ ಮತ್ತೆ ಓಮೈಕ್ರಾನ್ ರೂಪಾಂತರಿಗಳ ಹೊಸ ಸವಾಲುಗಳೂ ಎದುರಾಗುವ ಸಾಧ್ಯತೆಗಳಿವೆ. ರೋಗ ತಡೆಗಟ್ಟುವಿಕೆ ಹಾಗೂ ಚಿಕಿತ್ಸಾ ಸಾಮರ್ಥ್ಯದ ಈ ಸವಾಲುಗಳನ್ನು ಎದುರಿಸಲು ಆರೋಗ್ಯ ವ್ಯವಸ್ಥೆ ಸಿದ್ಧವಾಗಿ ಇರಬೇಕಾದುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT