ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆಯಿಲ್ಲದ ಯೋಜನಾ ಮಂಡಳಿ!

ರಾಜ್ಯದ ಸಮಸ್ಯೆಗಳಿಗೆ ಪರಿಹಾರೋಪಾಯ ಸೂಚಿಸಲು ಮಂಡಳಿ ಸೂಕ್ತ ವೇದಿಕೆಯಾಗಬೇಕು
Last Updated 6 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕೇರಳದಲ್ಲಿ ರಾಜ್ಯ ಯೋಜನಾ ಮಂಡಳಿಗೆ ನಿಶ್ಚಿತವಾದ ಗೊತ್ತು-ಗುರಿಗಳಿವೆ. ಅಲ್ಲಿ ಮುಖ್ಯಮಂತ್ರಿಯು ಯೋಜನಾ ಮಂಡಳಿಯ ಅಧ್ಯಕ್ಷರಾದರೂ ಆರ್ಥಿಕ ತಜ್ಞರು ಪೂರ್ಣಾವಧಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಮೂವರು ಪೂರ್ಣಾವಧಿ ಸದಸ್ಯರನ್ನುಳ್ಳ ಮಂಡಳಿಯಲ್ಲಿ ಕೃಷಿ, ಸಮಾಜಸೇವೆ, ಉದ್ದಿಮೆ ಮತ್ತು ಮೂಲ ಸೌಕರ್ಯ, ವಿಕೇಂದ್ರೀಕರಣ, ಮೌಲ್ಯಮಾಪನ, ಮಾಹಿತಿ ತಂತ್ರಜ್ಞಾನ
ದಂತಹ ವಿಷಯಗಳ ಬಗ್ಗೆ ಅಧ್ಯಯನ ನಡೆಸುವ ಬೇರೆ ಬೇರೆ ವಿಭಾಗಗಳಿವೆ. ಕಂದಾಯ, ಜಲಸಂಪನ್ಮೂಲ, ಸಾಗಾಟ- ಸಂಪರ್ಕ, ಬಂದರು ವ್ಯವಹಾರ ಮತ್ತು ಹಣಕಾಸು ಸಚಿವರು ಮಂಡಳಿಯ ಅಧಿಸೂಚನೆಯ ಪ್ರಕಾರ ನಡೆಯುವ ಸಭೆಗಳಲ್ಲಿ ಭಾಗವಹಿಸುತ್ತಾರೆ. ಪ್ರತಿವರ್ಷ ರಾಜ್ಯದ ಆರ್ಥಿಕ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುವ ಸಮಗ್ರ ವರದಿಯನ್ನು ಮಂಡಳಿಯು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುತ್ತದೆ.

ಕರ್ನಾಟಕದಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ಸಲಹೆ ನೀಡುವುದು, ನೈಸರ್ಗಿಕ ಮತ್ತು ಮಾನವ ಸಂಪನ್ಮೂಲ ಬಳಕೆಗೆ ನೀತಿಗಳನ್ನು ಸೂಚಿಸುವುದು, ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡಲು ಯೋಜನೆಗಳನ್ನು ರೂಪಿಸುವುದು, ರಾಜ್ಯದ ಅಭಿವೃದ್ಧಿಗೆ ಬಂಡವಾಳ ಹೂಡಿಕೆಯನ್ನು ಸುಧಾರಿಸಲು ಸಲಹೆ ನೀಡುವುದು, ವಿಕೇಂದ್ರೀಕರಣವುಳ್ಳ ಯೋಜನೆಗಳ ರಚನೆಗೆ ದಾರಿ ತೋರುವುದು ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಕಾರ್ಯಗಳೆಂದು 2001 ಜುಲೈ 17ರ ಸರ್ಕಾರಿ ಆದೇಶವು ತಿಳಿಸಿತ್ತು. ನಂತರ ಅದರ ಕಾರ್ಯಕಲಾಪದಲ್ಲಿ ಮೇಲ್ನೋಟಕ್ಕೆ ಬದಲಾವಣೆಗಳಾದರೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಅದು ನೆರವಾಗ
ಬೇಕೆಂಬ ಆಶಯ ಭದ್ರವಾಗಿಯೇ ಉಳಿದುಕೊಂಡಿದೆ.

1993ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಯೋಜನಾ ಮಂಡಳಿಯು ಆರ್ಥಿಕ ತಜ್ಞ ಡಿ.ಎಂ.ನಂಜುಂಡಪ್ಪ ಅವರು ಉಪಾಧ್ಯಕ್ಷರಾಗಿದ್ದ ಮೊದಲ ಏಳು ವರ್ಷಗಳ ಅವಧಿಯಲ್ಲಿ ಸುವರ್ಣ ಯುಗ ಕಂಡಿತ್ತು ಎಂದು ತಜ್ಞರು ಹೇಳುತ್ತಾರೆ. ಆಗಿನ ಮುಖ್ಯಮಂತ್ರಿಗೆ ಅವರನ್ನು ಉಪಾಧ್ಯಕ್ಷರನ್ನಾಗಿ ಮುಂದುವರಿಸಲು ಮನಸ್ಸಿಲ್ಲವೆಂಬ ಸಂಗತಿ ತಿಳಿದ ಕೂಡಲೇ ರಾಜೀನಾಮೆ ಬಿಸಾಡಿ, 1999ರ ಡಿಸೆಂಬರ್‌ ತಿಂಗಳಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ‘ಗ್ರಾಮೀಣ ಬ್ಯಾಂಕಿಂಗ್’ ಕುರಿತು ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಲು ನಂಜುಂಡಪ್ಪ ತೆರಳಿದ್ದರು!

ಯಡಿಯೂರಪ್ಪನವರಿಗೆ ಆಪ್ತರಾದ ಬಿ.ಜೆ.ಪುಟ್ಟಸ್ವಾಮಿ ಅವರು ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿ ಕಳೆದ ವರ್ಷದ ಸೆ.30ರಂದು ನೇಮಕಗೊಂಡರು. ಈಗ ಮಂಡಳಿಯಲ್ಲಿ ಅರ್ಥಶಾಸ್ತ್ರ, ಮ್ಯಾನೇಜ್‌ಮೆಂಟ್‌ ಅಸೋಸಿಯೇಷನ್, ಕೃಷಿ ವಿಜ್ಞಾನ, ಗೃಹ ನಿರ್ಮಾಣ ವಿಜ್ಞಾನ, ವಿಶ್ವವಿದ್ಯಾಲಯಗಳ ಆಡಳಿತ, ವಾಣಿಜ್ಯ ಮತ್ತು ಕೈಗಾರಿಕೆ, ಎಂಜಿನಿಯರಿಂಗ್‌ನಂಥ ರಂಗಗಳಲ್ಲಿ ಪರಿಣತಿ ಹೊಂದಿದ 23 ವ್ಯಕ್ತಿಗಳು ಆಡಳಿತ ವಲಯದ ಹೊರಗಿನ ರಂಗಗಳಿಂದ ಸದಸ್ಯರಾಗಿ ನೇಮಕವಾಗಿದ್ದಾರೆ. ಸಮಸ್ಯೆಗಳ ಸುಳಿಗೆ ಸಿಲುಕಿರುವ ರಾಜ್ಯದ ಆರ್ಥಿಕತೆ ಚೇತರಿಸಿಕೊಳ್ಳಬೇಕಾದರೆ ಗಜ ಗಾತ್ರದ ಯೋಜನಾ ಮಂಡಳಿಯು ಸರ್ಕಾರಕ್ಕೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಬೇಕಾಗಿದೆ.

ರಾಜ್ಯದಲ್ಲಿ ಬಿಜೆಪಿ ನೇತೃತ್ವದಪ್ರಥಮ ಸರ್ಕಾರಇದ್ದಾಗ ಮಂಡಳಿಯ ಮೊದಲ ಸಭೆ ನಡೆದ ಸುಮಾರು ಆರು ತಿಂಗಳುಗಳ ನಂತರ 2009ರ ಜೂನ್ 11ರಂದು ಎರಡನೆಯ ಸಭೆ ನಡೆಯಿತು. ಯೋಜನಾ ಮಂಡಳಿ ಸರಿಯಾಗಿ ಕಾರ್ಯನಿರ್ವಹಿಸಿ ಸರ್ಕಾರಕ್ಕೆ ನೆರವಾಗಬೇಕೆಂದು, ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಉಪಾಧ್ಯಕ್ಷರಾಗಿದ್ದ ಬಿಜೆಪಿಯ ಹಿರಿಯ ನಾಯಕ ಡಿ.ಎಚ್‌.ಶಂಕರಮೂರ್ತಿ ಅವರ ಉಪಸ್ಥಿತಿಯಲ್ಲೇ ಲಿಖಿತ ಭಾಷಣದಲ್ಲಿ ಹೇಳಿದ್ದರು. ಅವರಿಗೆ ಇದ್ದ ತೀವ್ರ ಅಸಮಾಧಾನ ಆಗ ಹೊರಬಂದಿತ್ತು. ‘ನನ್ನ ದೃಷ್ಟಿಯಲ್ಲಿ ಯೋಜನಾ ಮಂಡಳಿಯು ರಾಜ್ಯದ ಅಭಿವೃದ್ಧಿಯ ದಿಕ್ಕು, ದಿಸೆಗಳನ್ನು ನಿರ್ದೇಶಿಸಬಲ್ಲ ಪ್ರಧಾನ ಸಂಸ್ಥೆ. ಒಂದು ರೀತಿಯಲ್ಲಿ, ರಾಜ್ಯದ ಅಭಿವೃದ್ಧಿಯ ಕೇಂದ್ರಬಿಂದು ಇದ್ದಂತೆ. ವಿಷಯಾಧಾರಿತ ಚರ್ಚೆ ಹಾಗೂ ಸಮಾಲೋಚನೆಗಳನ್ನು ನಿರಂತರವಾಗಿ ನಡೆಸುವಂತಾಗಬೇಕು. ರಾಜ್ಯದ ಅಭಿವೃದ್ಧಿಗೆ ಈ ಪ್ರಕ್ರಿಯೆ ಅಗತ್ಯ’ ಎಂದು ಯಡಿಯೂರಪ್ಪ ಹೇಳಿದ್ದರು. ಈಗ ಅವರಿಗೆ ಬೇಕಾದವರೇ ಉಪಾಧ್ಯಕ್ಷರಾಗಿರುವಾಗಲಾದರೂ ಆಗಿನ ಆಶಯ ಈಡೇರಬಹುದಲ್ಲ?

ರಾಜ್ಯದ ಆಯವ್ಯಯ, ವಾರ್ಷಿಕ ಆರ್ಥಿಕ ಸಮೀಕ್ಷೆ, ಮಧ್ಯಾವಧಿ ವಿತ್ತೀಯ ಯೋಜನೆ ಮತ್ತಿತರ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗಳ ಬಗೆಗೆ ಮಂಡಳಿಯ ಟಿಪ್ಪಣಿ ಹಾಗೂ ಅಭಿಪ್ರಾಯಗಳು ಅಗತ್ಯವೆಂದು ಯಡಿಯೂರಪ್ಪ ಆಶಿಸಿದ್ದರು. ಅನುಷ್ಠಾನದಲ್ಲಿರುವ ವಿವಿಧ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಫಲಶ್ರುತಿಗಳ ಬಗೆಗೆ ಮಂಡಳಿಯ ಅಭಿಪ್ರಾಯ ಹಾಗೂ ಅಗತ್ಯವಿದ್ದೆಡೆ ರೂಪಿಸಬೇಕಾದ ನೂತನ ಯೋಜನೆಗಳು ಅಥವಾ ಪ್ರಸಕ್ತ ಯೋಜನೆಗಳ ಮಾರ್ಪಾಡು ಮೊದಲಾದ ವಿಚಾರಗಳ ಬಗೆಗೆ ಚಿಂತನೆ, ಮಾರ್ಗದರ್ಶನ ಮತ್ತು ಸಲಹೆಗಳಿಗೆ ಎದುರು ನೋಡುತ್ತಿದ್ದೇನೆ ಎಂದಿದ್ದರು. ಅವರ ಹಿಂದಿನ ಆಶಯಗಳು ಈಗ ಈಡೇರಲಿಕ್ಕೇನು ತೊಂದರೆ?

ಒಟ್ಟಾರೆ, ರಾಜ್ಯದ ಸಂಪನ್ಮೂಲ ಸದ್ಬಳಕೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯ ವೇಗ ಹೆಚ್ಚಿಸಿ ಜನರ ಜೀವನ ಮಟ್ಟದಲ್ಲಿ ಸುಧಾರಣೆ ತರುವ ದಿಸೆಯಲ್ಲಿ ಸರ್ಕಾರದೊಂದಿಗೆ ಯೋಜನಾ ಮಂಡಳಿಯು ಅರ್ಥಪೂರ್ಣ ಸಹಯೋಗ ನೀಡುತ್ತದೆಂಬ ನಿರೀಕ್ಷೆ ವ್ಯಕ್ತಪಡಿಸುತ್ತ ಯಡಿಯೂರಪ್ಪ ಅಂದು ತಮ್ಮ ಭಾಷಣ ಮುಗಿಸಿದ್ದರು. ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ನೆರವಾಗುವ ಸಲಹೆ-
ಸೂಚನೆಗಳು ಮಂಡಳಿಯಿಂದ ಈಗಲಾದರೂ ಲಭ್ಯವಾಗಲಿ.

ರಾಮಚಂದ್ರ ಗೌಡ ಉಪಾಧ್ಯಕ್ಷರಾದ ಮೇಲೆ ಯೋಜನಾ ಸಚಿವರೂ ಆಗಿದ್ದ ವಿ.ಎಸ್.ಆಚಾರ್ಯ ಹೆಚ್ಚಿನ ಆಸಕ್ತಿ ವಹಿಸಿದ್ದರಿಂದ ಮಂಡಳಿಯ ಸಭೆಗಳು ಆಗಾಗ ನಡೆದಿದ್ದವು. ಅಂತರ್ಜಲ ನಿರ್ವಹಣೆ, ಕೆರೆಗಳ ನವೀಕರಣ, ಕಲ್ಲಿದ್ದಲಿನ ಸಮರ್ಪಕ ಪೂರೈಕೆ, ಕೌಶಲ ನಿರ್ವಹಣೆ, ನಗರೀಕರಣ ಸೃಷ್ಟಿಸುವ ಸಮಸ್ಯೆ, ಟ್ರ್ಯಾಫಿಕ್ ನಿಯಂತ್ರಣ, ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ, ಅಭಿವೃದ್ಧಿ ಯೋಜನೆಗಳ ನಿರ್ವಹಣೆ, ಅಧಿಕಾರ ವಿಕೇಂದ್ರೀಕರಣ, ಭ್ರಷ್ಟಾಚಾರ ನಿಯಂತ್ರಣ– ಹೀಗೆ ಹತ್ತಾರು ವಿಷಯಗಳು ಚರ್ಚೆಯಾದವು. ಸರ್ಕಾರಕ್ಕೆ ಬೇಕಾದ ಸಲಹೆಗಳನ್ನು ನೀಡಿ ಮಂಡಳಿ ತನ್ನ ಸಾರ್ಥಕತೆ ಮೆರೆಯಿತು.

2013ರ ನಂತರ ಕಾಂಗ್ರೆಸ್ ನೇತೃತ್ವದ ಸರ್ಕಾರಇದ್ದಾಗ ಯೋಜನಾ ಮಂಡಳಿಗೆ ಖಗ್ರಾಸ ಗ್ರಹಣ ಪ್ರಾಪ್ತಿಯಾಯಿತು. ಅದರ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವುದೆಂದರೆ ಹಗುರವಾದ ಜೋಕ್ ಮಾಡುವಷ್ಟು ಸುಲಭವಲ್ಲ ಎಂದು ರಾಜ್ಯದ ಜನ ತಿಳಿಯುವಂತಾಗಿ ಹೋಯಿತು! ಮನಸ್ಸು ಇದ್ದರೆ ಮಾರ್ಗ, ಮನಸ್ಸು ಇಲ್ಲವಾದರೆ ಇದ್ದ ಮಾರ್ಗವೂ ತೋಚುವುದಿಲ್ಲ ಎನ್ನುವುದಕ್ಕೆ ನಮ್ಮ ಯೋಜನಾ ಮಂಡಳಿ ನಡೆದುಬಂದ ದಾರಿಯೇ ಸ್ಪಷ್ಟ ನಿದರ್ಶನವಾಗಿದೆ.

ಈಗ ಕರ್ನಾಟಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ ಎನ್ನುವ ಸತ್ಯ ಯಾರಿಗಾದರೂ ತಿಳಿಯುತ್ತದೆ. ತಲಾ ಆದಾಯ, ಕೈಗಾರಿಕೆ, ಮೂಲ ಸೌಕರ್ಯ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಉತ್ತರ- ದಕ್ಷಿಣ ಕರ್ನಾಟಕಗಳ ನಡುವಿನ ಅಂತರ ಹೆಚ್ಚುತ್ತಿದೆ. ಭಾರತದ ಕೃಷಿ ಸಂಶೋಧನಾ ಮಂಡಳಿಯ ವರದಿ (2019) ರಾಜ್ಯದ ಕೃಷಿರಂಗದ ಕ್ಲಿಷ್ಟ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಸುಲಲಿತ ವ್ಯಾಪಾರ- ವಹಿವಾಟಿನ ಸೂಚ್ಯಂಕದ ಪ್ರಕಾರ, ಕಳೆದ ಒಂದೇ ವರ್ಷದ ಅವಧಿಯಲ್ಲಿ ರಾಷ್ಟ್ರದಲ್ಲಿ ರಾಜ್ಯದ ಸ್ಥಾನ ಗಣನೀಯವಾಗಿ ಕುಸಿದಿದೆ. ಸರ್ಕಾರವೇ ಒಪ್ಪಿಕೊಂಡಂತೆ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಮಸ್ಯೆಗಳ ಸುಳಿಯಲ್ಲಿವೆ. ಪ್ರವಾಸೋದ್ಯಮ
ವಂತೂ ನೆಲ ಕಚ್ಚಿದೆ. ಎಲ್ಲಾ ವಲಯಗಳ ಸ್ಥಿತಿಗತಿ ಅರಿಯಲು ಪ್ರತ್ಯೇಕ ಸಮಿತಿಗಳನ್ನು ನೇಮಿಸುವುದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ. ಯಾರೇ ಮುಖ್ಯಮಂತ್ರಿಯಾಗಿರಲಿ, ಪ್ರಚಲಿತ ಸಮಸ್ಯೆಗಳ ಬಗ್ಗೆ ತಜ್ಞರನ್ನು ಆಮಂತ್ರಿಸಿ, ಚರ್ಚೆ ನಡೆಸಿ ಶೀಘ್ರ ಪರಿಹಾರೋಪಾಯಗಳನ್ನು ಸೂಚಿಸಲು ಮಂಡಳಿ ಸೂಕ್ತ ವೇದಿಕೆಯಾಗಬೇಕು. ನಮ್ಮ ಮಂಡಳಿಗೆ ಬೇಕಾದ ಮಾದರಿಯು ಸಮೀಪದ ಕೇರಳದಲ್ಲೇ ಇದೆ.

ಲೇಖಕ: 2008-13ರ ಅವಧಿಯಲ್ಲಿ ರಾಜ್ಯ ಯೋಜನಾ ಮಂಡಳಿಯ ಸದಸ್ಯರಾಗಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT