ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹ ರಾಜಕಾರಣದ ದಾಳವಾಗಿ ಮಹಿಳೆ; ಲೈಂಗಿಕ ಹಗರಣ ಮತ್ತು ಸಾಮಾಜಿಕ ಬದುಕು

Last Updated 13 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಲೈಂಗಿಕ ಹಗರಣದ ಆರೋಪ ಎದುರಿಸಿದ ರಾಜ್ಯದ ರಾಜಕಾರಣಿಗಳಲ್ಲಿ ರಮೇಶ್‌ ಜಾರಕಿಹೊಳಿ ಅವರೇನೂ ಮೊದಲಿಗರಲ್ಲ. ಪ್ರಾಯಶಃ ಕೊನೆಯವರೂ ಆಗಲಾರರು. ಅಧಿಕಾರದ ಗದ್ದುಗೆಗೆ ಏರಿ ಕುಳಿತವರನ್ನೇ ಇಂತಹ ಹಗರಣಗಳು ಸುತ್ತಿಕೊಳ್ಳುವುದೇಕೆ? ವಿಷಕನ್ಯೆ, ಮೋಹಿನಿ, ಮಾಯೆ, ಅನಾಮಿಕೆ… ಹೀಗೆ ವಿವಿಧ ಪಾತ್ರ ರೂಪಕಗಳು ಹೇಳುವ ಕಥೆಯಾದರೂ ಯಾವುದನ್ನು?

ರಮೇಶ್ ಜಾರಕಿಹೊಳಿ ಅವರನ್ನು ಸುತ್ತಿಕೊಂಡ ಸಿ.ಡಿ ಹಗರಣ ಹಲವು ಮುಖ್ಯ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ರಾಜಕೀಯ ಮತ್ತು ನೈತಿಕತೆಯ ಪ್ರಶ್ನೆ ಇದರಲ್ಲಿ ಬಹುಮುಖ್ಯವಾದುದು. ಸಾರ್ವಜನಿಕ ಬದುಕಿನಲ್ಲಿ ಇರುವವರು ಸಮಾಜಕ್ಕೆ ಆದರ್ಶಪ್ರಾಯರಾಗಿರಬೇಕು ಎಂದು ಜನ ಅಪೇಕ್ಷೆಪಡುವುದು ತುಂಬಾ ಸಹಜ. ಹಾಗೆ ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಖಾಸಗಿ ಬದುಕು ಎನ್ನುವುದು ಇರುವುದಿಲ್ಲ. ಅವರ ಖಾಸಗಿ ಬದುಕು, ಸಾಮಾಜಿಕ ಆಯಾಮವನ್ನು ಪಡೆದೇ ಪಡೆಯುತ್ತದೆ. ರಮೇಶ್ ಜಾರಕಿಹೊಳಿ ಅವರ ಮೇಲಿನ ಆರೋಪವನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಆದರೆ, ಈಗ ಈ ವಿಚಾರ ಸಂಪೂರ್ಣವಾಗಿ ದಾರಿ ತಪ್ಪಿದೆ. ರಾಜಕಾರಣದಲ್ಲಿ ನೈತಿಕ ದಿವಾಳಿತನದ ಕುರಿತು ಚರ್ಚೆ ನಡೆಯಬೇಕಾಗಿತ್ತು. ಆದರೆ, ಈಗ ಸಿ.ಡಿ ಮಾಡಿದವರು ಯಾರು ಎಂಬ ಬಗ್ಗೆಯೇ ತನಿಖಾ ವರದಿಗಳು ಬರಲು ಪ್ರಾರಂಭಿಸಿವೆ.

ಹಾಗೆ ನೋಡಿದರೆ ಇಂತಹ ಆರೋಪಗಳಿಗೆ ಒಳಗಾದ ಮೊದಲ ವ್ಯಕ್ತಿ ಜಾರಕಿಹೊಳಿ ಅಲ್ಲ. ಅಲ್ಲದೆ, ಅವರು ಕೊನೆಯ ವ್ಯಕ್ತಿಯೂ ಆಗಲಾರರು. ಅಧಿಕಾರವು ಹಣ ಬರುವಂತೆ ಮಾಡುತ್ತದೆ. ಹಣ, ಅನ್ಯ ಮಾರ್ಗಗಳ ಮೂಲಕ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುತ್ತದೆ. ಲೈಂಗಿಕತೆ ನಮ್ಮ ಅವಶ್ಯಕತೆಗಳಲ್ಲಿ ಒಂದಾದರೂ ಈ ಅವಶ್ಯಕತೆಯನ್ನು ನಾವು ಹೇಗೆ ಪೂರೈಸಿಕೊಳ್ಳುತ್ತೇವೆ ಎನ್ನುವುದು ನೈತಿಕತೆಯ ನಿಕಷಕ್ಕೆ ಒಳಗಾಗಲೇ ಬೇಕಾಗುತ್ತದೆ.

ಹಾಗೆ ಒಪ್ಪಿತ ಲೈಂಗಿಕತೆಯನ್ನು ಯಾರೂ ವಿರೋಧಿಸುವುದು ಸಾಧ್ಯವಿಲ್ಲ. ಕಾನೂನು ಸಹ ಒಪ್ಪಿತ ಲೈಂಗಿಕತೆಗೆ ಅವಕಾಶ ನೀಡುತ್ತದೆ. ಆದರೆ, ಒಂದು ಗಂಡು ಮತ್ತು ಒಂದು ಹೆಣ್ಣು ನಡೆಸುವ ಒಪ್ಪಿತ ಲೈಂಗಿಕತೆಯಲ್ಲಿ ಅಧಿಕಾರ ಯಾವ ರೀತಿ ಪ್ರಭಾವ ಬೀರಿದೆ? ಅಧಿಕಾರವನ್ನು ಬಳಸಿಕೊಂಡು ಲೈಂಗಿಕ ಚಟುವಟಿಕೆಗೆ ಭಾಗಿದಾರರನ್ನಾಗಿ ಮಾಡಿಕೊಂಡರೆ ಅದು ಅಪರಾಧ. ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಆಕೆಯ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದು ನಿಜವಾಗಿದ್ದರೆ ಕಾನೂನು ಪ್ರಕಾರ ಅಪರಾಧ.

ಅಧಿಕಾರ ಪ್ರಭಾವದ ಲೈಂಗಿಕ ಚಟುವಟಿಕೆ ಅಪರಾಧ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಗಂಡು ಹೆಣ್ಣಿನ ಸೂಕ್ಷ್ಮ ಸಂಬಂಧವನ್ನು ಅಶ್ಲೀಲತೆಯ ಹಂತಕ್ಕೆ ತೆಗೆದುಕೊಂಡು ಹೋಗುವುದು ಮತ್ತು ಅದನ್ನು ಚಿತ್ರೀಕರಿಸುವುದು ಸಾಮಾಜಿಕ ಸ್ವಾಸ್ಥ್ಯಕ್ಕೆ ಪೂರಕವಾದುದಲ್ಲ. ಈ ಹಿನ್ನೆಲೆಯನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯದ ರಾಜಕಾರಣ ಮತ್ತು ಅದಕ್ಕೆಅಂಟಿಕೊಂಡ ಲೈಂಗಿಕ ಹಗರಣಗಳ ಬಹುಮುಖ್ಯ ವಿಚಾರವನ್ನು ನಾವು ನೋಡಬಹುದು.

ರಾಜ್ಯದಲ್ಲಿ ನಡೆದ ರಾಜಕೀಯ ಲೈಂಗಿಕ ಹಗರಣಗಳನ್ನು ನೋಡುವಾಗ ನೆನಪಾಗುವ ಮೊದಲ ಹಗರಣ 1973ರಲ್ಲಿ ನಡೆದಿದ್ದು. ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ ಅರಸು. ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದವರು ಆರ್.ಡಿ.ಕಿತ್ತೂರರು. ಅವರ ಮೇಲಿದ್ದ ಆರೋಪ ಕಾಣೆಯಾಗಿದ್ದ ಹೆಣ್ಣುಮಗಳೊಬ್ಬಳು ಸಚಿವ ಕಿತ್ತೂರ್ ಅವರ ಮನೆಯಲ್ಲಿ ಇದ್ದರು ಎಂಬುದು. ಆರೋಪದ ಕಾರಣದಿಂದ ಕಿತ್ತೂರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಹುಶಃ ಲೈಂಗಿಕ ಹಗರಣದ ಕಾರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಸಚಿವರೂ ಅವರೇ. ಬಹಿರಂಗವಾದ ಮೊದಲ ಪ್ರಕರಣವೂ ಅದೇ.

ಇವತ್ತಿನ ಸಂದರ್ಭದಲ್ಲಿ ಈ ಹಗರಣವನ್ನು ನೋಡುವಾಗ ಇದೊಂದು ದೊಡ್ಡ ಹಗರಣ ಎಂದು ಅನ್ನಿಸುವುದಿಲ್ಲ. ಮನೆಯಲ್ಲಿ ಇದ್ದಳು ಎನ್ನಲಾದ ಆ ಹೆಣ್ಣುಮಗಳ ಜೊತೆ ಕಿತ್ತೂರ್ ಬೇರೆ ರೀತಿ ಸಂಬಂಧ ಹೊಂದಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ಇರಲಿಲ್ಲ. ಆಕೆ ಸಚಿವರ ಮನೆಯಲ್ಲಿ ಇದ್ದರು ಅಷ್ಟೆ. ಆ ಸಂದರ್ಭದಲ್ಲಿ ಬಂದ ವರದಿಗಳ ಪ್ರಕಾರ, ಈ ಕತೆ ತುಂಬಾ ಸಿನಿಮೀಯವೂ ರೋಚಕವೂ ಆಗಿದೆ.

ಈ ಹೆಣ್ಣುಮಗಳು ಅದೊಂದು ದಿನ ಭಾರಿ ಮಳೆ ಬೀಳುತ್ತಿದ್ದ ಸಂದರ್ಭದಲ್ಲಿ ಸಚಿವರ ಅಧಿಕೃತ ನಿವಾಸದ ಕಾಂಪೌಂಡ್ ಒಳಗಿನ ಮರದ ಕೆಳಗೆ ನಿಂತಿದ್ದಳು. ಸಚಿವರು ಆಕೆಯನ್ನು ಮನೆಯ ಒಳಗೆ ಕರೆದಿದ್ದರು. ಇಲ್ಲಿಂದ ಕಥೆ ಬೇರೆ ಬೇರೆ ತಿರುವುಗಳನ್ನು ಪಡೆದು ಸಚಿವ ಕಿತ್ತೂರ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 1973ರ ಸಂದರ್ಭದಲ್ಲಿ ಇದ್ದ ನೈತಿಕತೆಯ ವ್ಯಾಖ್ಯೆ ಈಗ ಸಂಪೂರ್ಣವಾಗಿ ಬದಲಾಗಿದೆ. ಆ ಸಂದರ್ಭದಲ್ಲಿ ಸಿ.ಡಿಯ ಸಾಕ್ಷ್ಯ ಇಲ್ಲದಿದ್ದರೂ ಕೇವಲ ಆರೋಪದ ಹಿನ್ನೆಲೆಯಲ್ಲಿ ಸಚಿವರು ರಾಜೀನಾಮೆ ನೀಡಿದರು. ಈಗ ಸಿ.ಡಿ ಇದ್ದರೂ ಅದು ನಕಲಿ ಎಂದು ವಾದ ಮಾಡಬಹುದು.

ಇದಾದ ನಂತರ 2007ರಲ್ಲಿ ಶಾಸಕ ರೇಣುಕಾಚಾರ್ಯ ಅವರ ಲೈಂಗಿಕ ಹಗರಣ ವರದಿಯಾಯಿತು. ಸ್ವಲ್ಪಕಾಲ ಭಾರಿ ಸದ್ದು ಮಾಡಿತು. ನರ್ಸ್ ಒಬ್ಬರ ಜೊತೆ ರೇಣುಕಾಚಾರ್ಯ ಚುಂಬನದಲ್ಲಿ ತೊಡಗಿದ್ದ ದೃಶ್ಯಗಳು ಬಹಿರಂಗಗೊಂಡವು. ಇದು ಭಾರತೀಯ ಜನತಾ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಿತು. ರಾಜಕಾರಣಿಗಳ ನೈತಿಕತೆಯ ಪ್ರಶ್ನೆ ಮತ್ತೆ ಚರ್ಚೆಗೆ ಕಾರಣವಾಯಿತು. ಸಾರ್ವಜನಿಕ ಬದುಕಿನಲ್ಲಿ ಇರುವವರು ನೈತಿಕತೆಗೆ ಮಹತ್ವ ನೀಡದಿರುವುದು ಸಾಮಾಜಿಕ ವಲಯದ ಚರ್ಚೆಗೆ ಗ್ರಾಸ ಒದಗಿಸಿತು. ಈ ಆರೋಪದ ನಡುವೆಯೂ ರೇಣುಕಾಚಾರ್ಯ 2008ರಲ್ಲಿ ಸಚಿವರಾದರು. ಅವರ ಮೇಲೆ ಬಂದಿದ್ದ ಅನೈತಿಕ ಸಂಬಂಧದ ಪ್ರಶ್ನೆಯನ್ನು ನೇಪಥ್ಯಕ್ಕೆ ಸರಿಸಲಾಯಿತು.

2007ರ ನಂತರ ಅನೈತಿಕ ಲೈಂಗಿಕತೆ ಪ್ರಕರಣಗಳು ಹೆಚ್ಚು ಹೆಚ್ಚಾಗಿ ಬೆಳಕಿಗೆ ಬರತೊಡಗಿದವು. ಇದಕ್ಕೆ ಮಾಧ್ಯಮಗಳು, ರಾಜಕಾರಣಿಗಳ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ಮಹತ್ವ ನೀಡಲು ಪ್ರಾರಂಭಿಸಿದ್ದು ಒಂದು ಕಾರಣವಾದರೆ, ಟ್ಯಾಬ್ಲಾಯ್ಡ್‌ ಪತ್ರಿಕೋದ್ಯಮ ಮುಖ್ಯವಾಹಿನಿಗೆ ಬಂದಿದ್ದೂ ಕಾರಣ ಇರಬಹುದು. ಒಟ್ಟಿನಲ್ಲಿ ರಾಜಕಾರಣಿಗಳು ತುಂಬು ಎಚ್ಚರದಿಂದ ಇರಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ನಿಜ. ಏನೇ ಇರಲಿ 2010ರಲ್ಲಿ ಇನ್ನೊಬ್ಬ ಸಚಿವರು ಲೈಂಗಿಕ ಹಗರಣಕ್ಕೆ ಸಿಲುಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅವರು ಯಡಿಯೂರಪ್ಪ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಹರತಾಳು ಹಾಲಪ್ಪ.

ಸ್ನೇಹಿತನ ಹೆಂಡತಿಯ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಹೊತ್ತಿದ್ದ ಹಾಲಪ್ಪ 2017ರಲ್ಲಿ ಈ ಆರೋಪದಿಂದ ಮುಕ್ತರಾದರು. ಹಾಲಪ್ಪ ಅವರ ಸ್ನೇಹಿತರೇ ತಮ್ಮ ಹೆಂಡತಿಯ ಜೊತೆ ಹಾಲಪ್ಪ ಅವರಿಗೆ ಸಂಬಂಧವಿದೆ ಎಂದು ಆರೋಪ ಮಾಡಿದ್ದರು. ಈ ಪ್ರಕರಣ ನಡೆದ ಎರಡೇ ವರ್ಷಗಳಲ್ಲಿ ಬೆಳಕಿಗೆ ಬಂದಿದ್ದು ಮೂವರು ಶಾಸಕರು ವಿಧಾನಸಭೆಯಲ್ಲಿ ಇರುವಾಗ ತಮ್ಮ ಮೊಬೈಲ್‌ನಲ್ಲಿ ನೀಲಿ ಚಿತ್ರದ ವೀಕ್ಷಣೆ ಮಾಡಿದ್ದು. ಅವರೆಂದರೆ ಈಗಿನ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಈಗಿನ ಸಚಿವ ಸಿ.ಸಿ. ಪಾಟೀಲ ಮತ್ತು ಕೃಷ್ಣ ಪಾಲೇಮಾರ್.

ಈ ಪ್ರಕರಣ ಸಾಕಷ್ಟು ಸದ್ದು ಮಾಡಿತು. ಮತ್ತೆ ಸಾರ್ವಜನಿಕ ಬದುಕಿನಲ್ಲಿ ಇರುವವರ ನೈತಿಕತೆ ಮತ್ತು ಅನೈತಿಕತೆ ಕುರಿತು ಚರ್ಚೆ ನಡೆಯಿತು. ಹಾಗೆ ಈ ಬಗ್ಗೆ ತನಿಖೆ ನಡೆಸಲು ನೇಮಕವಾದ ಸದನ ಸಮಿತಿ ಲಕ್ಷ್ಮಣ ಸವದಿ ಮತ್ತು ಸಿ.ಸಿ. ಪಾಟೀಲರನ್ನು ಆರೋಪ ಮುಕ್ತರನ್ನಾಗಿ ಮಾಡಿತು. ಪಾಲೇಮಾರ್ ಮಾತ್ರ ತಪ್ಪಿತಸ್ಥರಾದರು.

ಇಷ್ಟಕ್ಕೇ ಶಾಸಕರ ಮೇಲಿನ ಲೈಂಗಿಕ ಹಗರಣದ ಆರೋಪ ನಿಲ್ಲಲಿಲ್ಲ. ಕೇವಲ ಒಂದು ವರ್ಷದ ನಂತರ ಪ್ರಕಟವಾದದ್ದು ಇನ್ನೊಂದು ಲೈಂಗಿಕ ಹಗರಣ. ಅದು ಉಡುಪಿ ಶಾಸಕ ರಘುಪತಿ ಭಟ್ಟರದು. ಮಹಿಳೆಯೊಬ್ಬರ ಜೊತೆ ಅವರಿದ್ದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಭಟ್ಟರು ಚುನಾವಣೆಯಿಂದಲೇ ಹಿಂದೆ ಸರಿದರು. ಐದು ವರ್ಷ ವನವಾಸ ಅನುಭವಿಸಿದರು. ಯಾವಾಗಲೂ ಸಾಮಾನ್ಯ ಜನರಿಗೆ ನೆನಪು ಕಡಿಮೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಟ್ಟರು ಉಡುಪಿ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು.

2015ರಲ್ಲಿ ಲೈಂಗಿಕ ಹಗರಣದಲ್ಲಿ ಸಿಲುಕಿದ ಇನ್ನೊಬ್ಬ ಶಾಸಕ ಎ. ರಾಮದಾಸ್. ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡರು ಎಂಬುದು ಅವರ ಮೇಲಿನ ಆರೋಪವಾಗಿತ್ತು. ಆದರೆ ಈ ಆರೋಪದಿಂದಾಗಿ ರಾಮದಾಸ್ ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ನಂತರ ಈ ಆರೋಪದ ಬಗ್ಗೆ ತನಿಖೆ ನಡೆಸಿದ ಸಿಐಡಿ ಪೊಲೀಸರು ಅವರನ್ನು ಆರೋಪ ಮುಕ್ತರನ್ನಾಗಿ ಮಾಡಿದರು.

2015ರ ಈ ಪ್ರಕರಣದ ನಂತರ 2016ರಲ್ಲಿ ಬೆಳಕಿಗೆ ಬಂದಿದ್ದು ಇನ್ನೊಂದು ಪ್ರಕರಣ. ಈ ಪ್ರಕರಣದ ಆರೋಪಿ 71 ವರ್ಷ ವಯಸ್ಸಿನ ಸಚಿವರಾಗಿದ್ದ ಎಚ್.ವೈ. ಮೇಟಿ. ಅವರು ಮಹಿಳೆಯೊಬ್ಬರ ಜೊತೆಗಿದ್ದ ಕ್ಲಿಪಿಂಗ್ ಎಲ್ಲ ವಾಹಿನಿಗಳನ್ನು ತಲುಪಿ ಪ್ರಸಾರವಾಯಿತು. ವರ್ಗಾವಣೆ ಬಯಸಿದ ಮಹಿಳೆಯ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಅವರ ಮೇಲಿತ್ತು. 2017ರಲ್ಲಿ ಸಿಐಡಿ ಈ ಬಗ್ಗೆ ತನಿಖೆ ನಡೆಸಿ ಮೇಟಿ ಅವರನ್ನು ದೋಷಮುಕ್ತರನ್ನಾಗಿ ಮಾಡಿತು. ಇದಾದ ಮೇಲೆ ಬಹಿರಂಗವಾಗಿದ್ದು ರಮೇಶ್ ಜಾರಕಿಹೊಳಿ ಅವರ ಪ್ರಕರಣ.

ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಬಹಿರಂಗಗೊಂಡ ಲೈಂಗಿಕ ಹಗರಣಗಳ ದಾಖಲಿತ ವಿವರಗಳು ಇವಾದರೆ ರಾಜಕೀಯ ನಾಯಕರ ಲೈಂಗಿಕ ಚಟುವಟಿಕೆಗಳ ಬಗ್ಗೆ ಬಹಳಷ್ಟು ಸುದ್ದಿಗಳು ವೈರಲ್ ಆದದ್ದಿದೆ.

ಕೆಲವು ರಾಜಕೀಯ ನಾಯಕರ ಮದುವೆಯೇತರ ಸಂಬಂಧಗಳು ಸಾರ್ವಜನಿಕ ಚರ್ಚೆಗೆ ಕಾರಣವೂ ಆಗಿದ್ದವು. ಆದರೆ ಅವುಗಳು ಯಾವುವೂ ಈಗ ಪ್ರಸ್ತಾಪಿಸಿರುವ ಪ್ರಕರಣಗಳಂತೆ ಹಗರಣ ಆಗಿರಲಿಲ್ಲ. ಅಲ್ಲಿ ಅಧಿಕಾರ ದುರುಪಯೋಗ, ವಂಚನೆಯಂತಹ ಆರೋಪಗಳೂ ಕೇಳಿಬಂದಿರಲಿಲ್ಲ. ಅದು ಗಂಡು ಹೆಣ್ಣಿನ ಒಪ್ಪಿತ ಲೈಂಗಿಕ ಚಟುವಟಿಕೆ ಮಾತ್ರ ಆಗಿತ್ತು.

ಇಂತಹ ಮದುವೆಯೇತರ ಸಂಬಂಧ ಅಥವಾ ಸ್ನೇಹಿತೆಯರನ್ನು ಹೊಂದಿದ್ದಾರೆ ಎಂದು ಹೇಳಲಾಗಿದ್ದ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಆರ್. ಗುಂಡೂರಾವ್, ಜೆ.ಎಚ್. ಪಟೇಲರ ಸುತ್ತ ಸಾಕಷ್ಟು ರಂಜನೀಯ ಕಥೆಗಳು ಕೇಳಿ ಬಂದಿದ್ದವು. ಜೊತೆಗೆ ಈ ಸಂಬಂಧಗಳನ್ನು ಒಪ್ಪಿಕೊಂಡ ಈ ಹಿರಿಯ ರಾಜಕಾರಣಿಗಳು ತಾವು ಶ್ರೀರಾಮಚಂದ್ರ ಅಲ್ಲ ಎಂದು ಜನರ ಎದುರು ಸ್ಪಷ್ಟಪಡಿಸಿದ್ದರು. ಜೊತೆಗೆ ಇವರ ಈ ಮದುವೆಯೇತರ ಸಂಬಂಧಗಳು ಅಸಹ್ಯ ಹುಟ್ಟಿಸುವಂತೆ ಇರಲಿಲ್ಲ. ಅದು ಸಭ್ಯತೆಯ ಎಲ್ಲೆಯನ್ನೂ ಮೀರಿರಲಿಲ್ಲ. ಅಧಿಕಾರ ದುರುಪಯೋಗ ಮಾಡಿ ಲೈಂಗಿಕ ಸುಖ ಪಡೆಯಲು ಯತ್ನಿಸಿದ ದೂರು ಕೂಡ ಇವರ ಮೇಲಿರಲಿಲ್ಲ. ಅವು ರಂಜನೀಯ ಕಥೆಗಳಾಗಿ ಮಾತ್ರ ಕನ್ನಡಿಗರ ಮನಸ್ಸಿನಲ್ಲಿ ಉಳಿದುಕೊಂಡವು.

ಆದರೆ 1973ರ ಆರ್.ಡಿ. ಕಿತ್ತೂರ್ ಅವರ ಪ್ರಕರಣದಿಂದ ಈಗಿನ ರಮೇಶ್ ಜಾರಕಿಹೊಳಿವರೆಗಿನ ಲೈಂಗಿಕ ಹಗರಣ ಪ್ರಕರಣಗಳಲ್ಲಿ ಕೇಳಿಬಂದ ಆರೋಪಗಳ ಸ್ವರೂಪ ಒಪ್ಪಿತ ಲೈಂಗಿಕ ಚಟುವಟಿಕೆಗಳ ವ್ಯಾಪ್ತಿಯಲ್ಲಿ ಇಲ್ಲ. ಅವುಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಮಹಿಳೆಯರನ್ನು ಬಳಸಿಕೊಂಡ ಆರೋಪಗಳಾಗಿವೆ. ಹೀಗಾಗಿ ಗಂಡು ಹೆಣ್ಣಿನ ಸಂಬಂಧಕ್ಕೆ ಮಾತ್ರ ಅದು ಸೀಮಿತವಾಗದೇ ಸಾಮಾಜಿಕ ಆಯಾಮವನ್ನು ಪಡೆಯುತ್ತಿದೆ. ಈ ಕಾರಣದಿಂದ ಸಾಮಾಜಿಕ ಬದುಕು ಮತ್ತು ನೈತಿಕತೆ ಕುರಿತು ಚರ್ಚೆ ನಡೆಸಲೇಬೇಕಾದ ಅನಿವಾರ್ಯ ಈಗ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT