ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಶಿವಮೂರ್ತಿ ಮುರುಘಾ ಶರಣರ ಲೇಖನ: ಸಾತ್ವಿಕರಿಲ್ಲದ ಸಮಾಜ ಮೃಗೀಯ

ಮಾನವ ಎಷ್ಟೇ ದುಷ್ಟತನಕ್ಕೆ ಒಳಗಾದರೂ ಕಾಲಧರ್ಮ ನಿಯಂತ್ರಿಸುತ್ತದೆ
Last Updated 7 ಫೆಬ್ರುವರಿ 2022, 20:15 IST
ಅಕ್ಷರ ಗಾತ್ರ

ಸಂವಿಧಾನ, ಸರ್ಕಾರ, ಸಂಘ-ಸಂಸ್ಥೆ ಮತ್ತು ಸರ್ವಧರ್ಮಗಳ ಪ್ರಮುಖ ಆಶಯವು ಉತ್ತಮ ಸಮಾಜವನ್ನು ನಿರ್ಮಿಸುವುದು. ಉತ್ತಮ ಸಮಾಜವೆಂದರೆ, ಹಾರ್ದಿಕವಾದ ಹಾಗೂ ಆರೋಗ್ಯಪೂರ್ಣ ಸಮಾಜ. ಆರೋಗ್ಯಪೂರ್ಣ ಸಮಾಜದ ಲಕ್ಷಣವು ಒಳ್ಳೆಯತನ. ಒಳ್ಳೆಯತನವನ್ನು ಜೀವನದಲ್ಲಿ ರೂಢಿಸಿಕೊಂಡಾಗ ಸಮಾಜವು ಉತ್ತಮ ಆಗುತ್ತದೆ.

ಕೆಲ ರಾಜಕೀಯ ಪಂಡಿತರು ಮತ್ತು ವಿಚಾರವಂತರ ಪ್ರಕಾರ, ಆರ್ಥಿಕ ಸಮಾನತೆ ಬಂದಾಗ ಸದೃಢ ಸಮಾಜ ರಚನೆ ಆಗುತ್ತದೆ. ಅದು ನಿಜ. ಆರ್ಥಿಕ ಸಮಾನತೆಯಿಂದ ವ್ಯಷ್ಟಿ ಮತ್ತು ಸಮಷ್ಟಿಯ ಬದುಕಿನ ಬಹಿರಂಗದ ಉದ್ಧಾರ. ಅದನ್ನು ಸಮ ಸಮಾಜವೆಂತಲೂ ಕರೆಯಬಹುದು. ಆರ್ಥಿಕ ದೃಢತೆಯಿಂದ ಸಮಸಮಾಜ ಸ್ಥಾಪನೆ. ಅದರೊಟ್ಟಿಗೆ ಸುಸಂಸ್ಕೃತ ಸಮಾಜ ರಚನೆಯತ್ತಲೂ ಗಮನಹರಿಸಬೇಕಾಗುತ್ತದೆ. ಆರ್ಥಿಕ ದೃಢತೆ ಉಂಟಾದಂತೆಲ್ಲ, ಸಮಾಜದಲ್ಲಿ ಅದಕ್ಕೆ ಸಂಬಂಧಿಸಿದ ಅಪರಾಧಗಳು ಅಧಿಕ ಆಗುತ್ತವೆ. ಅಂದಮಾತ್ರಕ್ಕೆ ಆರ್ಥಿಕ ದೃಢತೆ ಇರಬಾರದೆಂದು ಅರ್ಥವಲ್ಲ.

ಆರ್ಥಿಕತೆಯೊಂದೇ ಎಲ್ಲವನ್ನೂ ಸರಿದೂಗಿಸುತ್ತದೆಎಂಬುದು ಭ್ರಮೆ. ಹಣ ಇಲ್ಲದಿದ್ದರೆ ಒಂದೇ ಚಿಂತೆ, ಹಣ ಇದ್ದರೆ ಹಲವಾರು ಚಿಂತೆ. ಹಾಗೆಂದು ಹಣ ಅಮುಖ್ಯವೆಂದು ಪ್ರತಿಪಾದಿಸುತ್ತಿಲ್ಲ. ಅಗತ್ಯಕ್ಕಿಂತ ಅಧಿಕ ಹಣವು ಕೆಲವರ ಬಳಿ ಶೇಖರಣೆ ಆಗುವುದರಿಂದ ಆರ್ಥಿಕ ಅಸಮಾನತೆ. ಸಂಪತ್ತಿನ ಸಮನಾದ ಹಂಚಿಕೆ ಆಗದಿರುವುದರಿಂದ ಇನ್ನಿಲ್ಲದ ಅಸಮಾನತೆ.

12ನೇ ಶತಮಾನದ ಶರಣರು ಅಗತ್ಯಕ್ಕೆ ಬೇಕಾದಷ್ಟನ್ನು ಮಾತ್ರ ಸಂಪಾದಿಸುತ್ತಿದ್ದರು. ಅದರ ಕೆಲಭಾಗವನ್ನು ದಾಸೋಹಕ್ಕೆ ಬಳಸುತ್ತಿದ್ದರು. ದಾಸೋಹ ಪರಿಕಲ್ಪನೆಯೆಂದರೆ, ಅಸಹಾಯಕರಿಗೆ ಮಾಡುವ ಸಹಾಯ. ತನ್ಮೂಲಕ ಸಮಸಮಾಜ ರಚನೆ. ಒಂದೆಡೆ ಉತ್ಪಾದನೆ-ಕಾಯಕ, ಮತ್ತೊಂದೆಡೆ ವಿತರಣೆ-ದಾಸೋಹ. ಇದರೊಂದಿಗೆ ಸಮಾನತೆ. ಸದ್ಯದ ದಿನಗಳಲ್ಲಿ ಇಂಥ ಸನ್ನಿವೇಶ ಕಾಣಬರುತ್ತಿಲ್ಲ. ಪ್ರತಿಯೊಬ್ಬರೂ ಧನಾಗಮನದತ್ತ ಕೇಂದ್ರೀಕರಿಸುತ್ತಿರುವುದು. ಮಕ್ಕಳು, ಮನೆತನಕ್ಕಾಗಿ ಹೇರಳವಾದ ಹಣ ಶೇಖರಣೆ ಮಾಡುತ್ತಿರುವುದು. ಧನ ಶೇಖರಣೆಯತ್ತ ಒತ್ತಾಸೆ ಇದೆ, ಅದರ ವಿತರಣೆಯತ್ತ ನಿರ್ಲಕ್ಷ್ಯ.

ಆಸ್ತಿವಂತ ಸಮಾಜವು ಸುಸಂಸ್ಕೃತ ಸಮಾಜದೆಡೆಗೂಗಮನಹರಿಸಬೇಕಾಗುತ್ತದೆ. ಆರ್ಥಿಕ ಬಲಾಢ್ಯರು ದುರ್ಬಲರ ಮೇಲೆ ದಬ್ಬಾಳಿಕೆ ಮಾಡುವ ಸಂದರ್ಭ ಸಾಮಾನ್ಯ ಎಂಬಂತೆ ಆಗುತ್ತಿದೆ. ಇದಕ್ಕೆಲ್ಲ ಪರಿಹಾರ ಸುಸಂಸ್ಕೃತ ಸಮಾಜ. ಅಂದರೆ ಉತ್ತಮ ಸಮಾಜ.
ಉತ್ತಮ ಸಮಾಜ ರಚನೆಯಾದಲ್ಲಿ ದರ್ಪ-ದಬ್ಬಾಳಿಕೆ ಇರುವುದಿಲ್ಲ. ಯಾರು ಯಾರನ್ನೂ ಶೋಷಿಸುವುದಿಲ್ಲ. ಉತ್ತಮ ತಿಳಿವಳಿಕೆ ಮತ್ತು ಉತ್ತಮ ನಡವಳಿಕೆಯಿಂದ ಸುಸಂಸ್ಕೃತ ಹಾಗೂ ನಾಗರಿಕ ಸಮಾಜ.

ಮಾನವ ಇಂದು ಮೌಲ್ಯದ ಹಿಂದೆ ಬೀಳುವುದಕ್ಕಿಂತ ಹಣ ಮಾಡುವ ದಂಧೆಯಲ್ಲಿ ನಿರತನಾಗಿದ್ದಾನೆ. ಹಣ ಮಾಡಲು ಸರ್ವರಿಗೂ ಅವಕಾಶ ಇದೆ. ಒಬ್ಬರ ಚಾರಿತ್ರ್ಯವಧೆ ಮಾಡುವಲ್ಲಿ, ಅನ್ಯರ ಆಸ್ತಿಯನ್ನು ಕಬಳಿಸುವಲ್ಲಿ, ಹಣಕ್ಕಾಗಿ ಲಂಚಗುಳಿತನಕ್ಕೆ ಒಳಗಾಗುವಲ್ಲಿ ಮಾನವ ಏನೆಲ್ಲ ಷಡ್ಯಂತ್ರಗಳನ್ನು ರೂಪಿಸುತ್ತಾನೆ. ಈ ಷಡ್ಯಂತ್ರದಲ್ಲಿ ಉತ್ತಮರೇ ಗುರಿ ಆಗುತ್ತಿರುವುದು ದುರಂತ. ದುಷ್ಟನನ್ನು ಮತ್ತು ಧನಪಿಶಾಚಿಯನ್ನು ಯಾರೂ ಪ್ರಶ್ನಿಸುವುದಿಲ್ಲ. ಇಂದಿನ ಗುರಿ ಎಂದರೆ ಸಾತ್ವಿಕ. ಸಾತ್ವಿಕನು ಜಿಂಕೆಯಿದ್ದಂತೆ. ಅದರ ಮೇಲೆ ಎರಗುವವರು ವ್ಯಾಘ್ರಗಳಂತೆ ಭಾಸವಾಗುತ್ತಾರೆ.

ಸಾತ್ವಿಕರು, ಸಂಪನ್ನರು ಹೆಜ್ಜೆ ಹೆಜ್ಜೆಗೆ ಕೆಲ ದುಷ್ಟರಿಂದ ದೌರ್ಜನ್ಯ ಮತ್ತು ಕಿರುಕುಳ ಅನುಭವಿಸುತ್ತಾರೆ. ಆಧುನಿಕ ಜಗತ್ತಿನಲ್ಲಿ ಮೊಬೈಲ್ ಫೋನ್‌ನಲ್ಲಿ ಏನೆಲ್ಲ ಅನುಕೂಲಗಳು. ಅದರೊಟ್ಟಿಗೆ ಸಾಮಾಜಿಕ ಜಾಲತಾಣ. ಸಾಮಾಜಿಕ ಜಾಲತಾಣವು ಜಾಣರ ತಾಣ ಆಗಬೇಕು. ವಿಪರ್ಯಾಸವೆಂದರೆ, ಅದು ಅಜ್ಞರು ಹಾಗೂ ದುಷ್ಟರ ತಾಣ ಆಗುತ್ತಿರುವುದು. ಆಧುನಿಕ ಸೌಲಭ್ಯಗಳಿಂದ ಸಾರ್ವಜನಿಕರ ಆಸ್ತಿ, ಪ್ರಾಣ-ಮಾನ ಸಂರಕ್ಷಣೆ ಮಾಡುವುದಕ್ಕಿಂತ ಅವುಗಳ ಹರಣವೇ ಅಧಿಕ.

ಉತ್ತಮ ಬೆಳವಣಿಗೆ, ಉತ್ತಮ ವ್ಯಕ್ತಿತ್ವ, ಉತ್ತಮ ಸಾಧನೆ, ಉತ್ತಮ ನಡವಳಿಕೆಯನ್ನು ನೋಡಿ ಖುಷಿಪಡುವುದರ ಬದಲು ಅಂಥವರ ವಿರುದ್ಧ ಸಮಸ್ಯೆ ಸೃಷ್ಟಿಸಿ, ಕೃತಕ ಸಂತೋಷಅನುಭವಿಸುತ್ತಿರುವುದು ಸರ್ವೇಸಾಮಾನ್ಯ. ಉತ್ತಮರು ಅರ್ಥಾತ್ ಸಜ್ಜನರು ತಮಗೆ ಸೂಕ್ತ ಸಹಕಾರ ಸಿಗದಿರುವುದರಿಂದ ಖಿನ್ನತೆಗೆ ಒಳಗಾಗುತ್ತಿರುವುದನ್ನು ಕಾಣಬಹುದು. ದಿನವೂ ಕಿರುಕುಳಅನುಭವಿಸುವುದಕ್ಕಿಂತ ಒಂದು ಸಾರಿ ಸಾವನ್ನು ತಂದುಕೊಳ್ಳುವುದು ಸೂಕ್ತ ಎಂದು ಕೆಲವರು ಭಾವಿಸುವುದುಂಟು. ಖಿನ್ನತೆಗೆ ಒಳಗಾಗಿ ಸಾವನ್ನು ತಂದುಕೊಳ್ಳು
ವುದು ಪಲಾಯನವಾದ ಅನಿಸಿಕೊಳ್ಳುತ್ತದೆ.

ನಮ್ಮ ನಡುವೆ ಒಬ್ಬ ವ್ಯಕ್ತಿ ಮಾನಸಿಕ ಸಮತೋಲನ ಕಳೆದುಕೊಳ್ಳುವಂತಹ ವಾತಾವರಣ ಸೃಷ್ಟಿ ಆಗಬಾರದು. ಸಮತೋಲನ ಕಾಯ್ದುಕೊಂಡು ಬದುಕುವಂತಾಗಬೇಕು.ಸಾವಿಗೆ ಶರಣಾಗಲು ಹೊರಟವನು ಬದುಕನ್ನು ಸಮರ್ಪಕವಾಗಿ ಕಟ್ಟಿಕೊಳ್ಳುವಂತಾಗಬೇಕು. ಆಗಲೇ ಸುಸಂಸ್ಕೃತ ಸಮಾಜ ರಚನೆ. ಸುಸಂಸ್ಕೃತ ವ್ಯಕ್ತಿಗಳನ್ನುಸಂರಕ್ಷಿಸಲು ಆಗದಿದ್ದರೆ ಸುಸಂಸ್ಕೃತ ಸಮಾಜವು ಹೇಗೆ ತಾನೇ ರಚನೆ ಆಗುತ್ತದೆ? ಅದರಲ್ಲೂ ಸಾತ್ವಿಕತೆ, ಸಂಪನ್ನತೆ, ಬದ್ಧತೆಯ ಜತೆ ಬದುಕನ್ನು ನಡೆಸುವವರ ಸ್ಥಿತಿಯು ದಿನದಿಂದ ದಿನಕ್ಕೆ ಗಂಭೀರ ಆಗುತ್ತದೆ.

ಸಂತರ ಬದುಕಿನಲ್ಲಿ ಸಂಕಷ್ಟಗಳು ಎದುರಾದರೆ, ಅವನ್ನು ಅವರು ಸಮತೋಲನದಿಂದ ಎದುರಿಸುತ್ತಾರೆ. ಆ ಶಕ್ತಿ ಅವರಲ್ಲಿರುತ್ತದೆ. ಸಂಕಷ್ಟದ ಸಂದರ್ಭದಲ್ಲಿ ಸಂತರು ಸುಮ್ಮನೇ ಕೂಡುವುದಿಲ್ಲ. ಸುಮ್ಮನೆ ಕುಳಿತರೆ ಅವರು ಸಂತರಲ್ಲ. ಸಂಕಷ್ಟದಲ್ಲಿ ಅವರು ಮುಂದೆ ಬಂದು ಸಹಕರಿಸುತ್ತಾರೆ. ಆದರೆ ಜನಸಾಮಾನ್ಯರ ಬದುಕಿನಲ್ಲಿ ಸಂಕಷ್ಟಗಳು ಎದುರಾದರೆ ಅದರಿಂದ ಅವರು ಹೊರಬರುವುದು ಕಷ್ಟಕರ. ಅಂಥವರಿಗೆ ಸಮಾಜವು ಸಾಂತ್ವನ ನೀಡಬೇಕು, ಧೈರ್ಯ ಹೇಳಬೇಕು. ಸಾಧ್ಯವಾದರೆ ಅಂಥವರಿಗೆ ಸಹಕರಿಸಬೇಕು. ಸಾತ್ವಿಕರನ್ನು ಕಳೆದುಕೊಂಡ ಸಮಾಜವು ಮೃಗೀಯ ಆಗುವುದರಲ್ಲಿ ಸಂದೇಹವಿಲ್ಲ.

ಒಳ್ಳೆಯವರಿಗೆ ಇದು ಕಾಲವಲ್ಲ ಎಂದು ಹೇಳಲಾಗುತ್ತದೆ. ಉತ್ತಮರ ಕಾಲ, ಕೆಟ್ಟವರ ಕಾಲವೆಂದು ಪರಿಗಣಿಸಲು ಬರುವುದಿಲ್ಲ. ಕಾಲವು ಒಂದೇ, ಕಾಲದಲ್ಲಿ ನಡೆಯುವ ವಿದ್ಯಮಾನಗಳು ಬಗೆಬಗೆ. ಎಲ್ಲವಿದ್ಯಮಾನಗಳನ್ನು ಕಾಲವು ಸಾಕ್ಷೀಕರಿಸುತ್ತದಷ್ಟೆ. ಅದೇ ಸೂರ್ಯ, ಅದೇ ಚಂದ್ರ, ನಕ್ಷತ್ರ-ತಾರೆಗಳು, ಅದೇ ಭೂಮಿ. ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುವುದರಿಂದ ಹಗಲು-ರಾತ್ರಿಗಳು ಉಂಟಾಗುತ್ತವೆ. ಭೂಮಿಯ ಚಲನೆಯಲ್ಲಿ ಒಂದಿಷ್ಟು ವ್ಯತ್ಯಾಸ ಆಗುವುದು. ವರ್ಷದಲ್ಲಿ ಕೆಲ ದಿನಗಳು ದೀರ್ಘವಾಗಿರುತ್ತವೆ, ಕೆಲ ರಾತ್ರಿಗಳುದೀರ್ಘವಾಗಿರುತ್ತವೆ.

ಅಲಾಸ್ಕಾದಂತಹ ಪ್ರದೇಶದಲ್ಲಿ ಕೆಲವೇ ಗಂಟೆಗಳವರೆಗೆ ಹಗಲು, ಕೆಲವೇ ಗಂಟೆಗಳವರೆಗೆ ರಾತ್ರಿ. ಅದು ನಿಸರ್ಗದ ವಿಸ್ಮಯ. ಅದನ್ನು ಹೊರತುಪಡಿಸಿದರೆ ಪೃಥ್ವಿಯ ಚಲನೆಯಲ್ಲಿ ಮಳೆಗಾಲ, ಬೇಸಿಗೆಕಾಲ ಮತ್ತು ಚಳಿಗಾಲ. ಋತುಮಾನಕ್ಕೆ ತಕ್ಕಂತೆ ಅನುಸರಿಸಿದಂತಹ ವಾತಾವರಣ. ಋತುಮಾನ ಬದಲಾವಣೆ ಆಗಿದ್ದರೆ, ಅದಕ್ಕೆ ಮಾನವ ಕೃತ್ಯಗಳೇ ಕಾರಣ. ನಿಸರ್ಗದ ಮೇಲಿನ ದೌರ್ಜನ್ಯದಿಂದಾಗಿ ಪ್ರತಿಕೂಲ ವಾತಾವರಣ.

ಮಾನವ ನಡವಳಿಕೆಗಳಲ್ಲಿ ಬದಲಾವಣೆಗಳು ಕಾಣಬರುತ್ತಿದ್ದು, ಅವು ಕಾಲಕ್ಕೆ ಸಂಬಂಧಿಸಿದವಲ್ಲ. ಕಾಲವು ಒಂದೇ ಆದರೂ ಮಾನವ ನಡವಳಿಕೆ ಒಂದೇ ಆಗಿರುವುದಿಲ್ಲ. ಕಾಲಕ್ಕೆ ತಕ್ಕಂತೆ ಮಾನವ ತನ್ನ ನಡವಳಿಕೆಯನ್ನು ಬದಲಿಸುತ್ತಾ ಹೋಗುತ್ತಿದ್ದಾನೆ. ಹಿಂದಿನ ದಿನಗಳಲ್ಲಿ ಕೆಡುಕುತನದಿಂದ ಒಳ್ಳೆಯತನದೆಡೆಗೆಪ್ರಯಾಣಿಸಿದವರ ಸಂಖ್ಯೆಯು ಗಣನೀಯವಾಗಿತ್ತು.ಸಮಕಾಲೀನ ಕಾಲಘಟ್ಟದಲ್ಲಿ ಒಳ್ಳೆಯತನದಿಂದದುಷ್ಟತನದೆಡೆಗೆ ಸಾಗುತ್ತಿರುವವರ ಸಂಖ್ಯೆಯು ಅಧಿಕವಾಗುತ್ತಿದೆ. ಇದು ಈ ಕಾಲದ ದುರಂತವೂ ಅಹುದು, ಸಮಸ್ಯೆಯೂ ಅಹುದು.

ಮಾನವ ತಾನೆತ್ತ ಕಡೆಗೆ ಹೋದರೂ ನಿಸರ್ಗವು ಕೆಲವೊಂದು ನಿಯಮಗಳನ್ನು ಕಾಲಕ್ಕೆ ತಕ್ಕಂತೆ ಸೃಷ್ಟಿಸುತ್ತಾ ಹೋಗುತ್ತದೆ. ನಿಸರ್ಗವನ್ನು ಬ್ರಹ್ಮಾಂಡವೆಂದುಕರೆಯಲಾಗುತ್ತದೆ. ಬ್ರಹ್ಮಾಂಡವು ಜೀವಸಂಕುಲದ ಸೃಷ್ಟಿ ಕೇಂದ್ರ. ಅದಕ್ಕೆ ಸೃಷ್ಟಿಸುವ ಅಧಿಕಾರವೂ ಇದೆ, ಸಂಹಾರ ಮಾಡುವ ಶಕ್ತಿಯೂ ಇದೆ. ಯಾವುದೇ ಅಹಿತಕರ ವಿದ್ಯಮಾನಗಳನ್ನು ನೋಡುತ್ತ ಕೂಡುವುದಿಲ್ಲ. ಸೂಕ್ತ ಕಾಲಕ್ಕಾಗಿ ಅದು ಕಾಯುತ್ತದೆ. ಮಾನವ ತಾನೆಷ್ಟೇ ದುಷ್ಟತನಕ್ಕೆ ಒಳಗಾದರೂ ಕಾಲಧರ್ಮವು ತನ್ನದೇ ಆದ ವಿಧಾನದಲ್ಲಿ ನಿಯಂತ್ರಿಸುತ್ತದೆ. ಮಾನವಮಾತ್ರರಿಗೆ ಇದು ತಿಳಿದಿದ್ದರೆ ಲೇಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT