ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಲೋಕದ ‘ಧರ್ಮ’ಸಂಕಟ: ಸಾಮಾಜಿಕ ಸೌಖ್ಯವನ್ನು ಕೆಡಿಸುವ ಪಿಡುಗು

Last Updated 7 ನವೆಂಬರ್ 2020, 19:30 IST
ಅಕ್ಷರ ಗಾತ್ರ

‘ಮತಾಂತರಕ್ಕಾಗಿ ಮದುವೆ’ ಕುರಿತ ಚರ್ಚೆಯೀಗ ಮತ್ತೆ ಸದ್ದು ಮಾಡುತ್ತಿದೆ. ಮತಾಂತರ ಉದ್ದೇಶದ ಮದುವೆಗಳನ್ನು ನಿರ್ಬಂಧಿಸಲು ಕಾನೂನು ರೂಪಿಸುವುದಾಗಿ ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತದ ಕೆಲವು ರಾಜ್ಯಗಳು ಹೇಳಿಕೊಂಡಿವೆ. ‘ಲವ್‌ ಜಿಹಾದ್‌’ ಪದ ಉಗ್ರ ಬಹುಸಂಖ್ಯಾತವಾದದ ಸೃಷ್ಟಿಯಾಗಿದ್ದು, ಹಿಂದೂ ಧಾರ್ಮಿಕ ಅತಿರೇಕಗಳಿಂದ ಪ್ರೇರಿತವಾಗಿದೆ ಎಂಬ ವಾದ ಕೂಡ ಅಷ್ಟೇ ಬಲವಾಗಿ ಕೇಳಿಬರುತ್ತಿದೆ. ಬಿಜೆಪಿ ಆಡಳಿತದ ಸರ್ಕಾರಗಳ ನಡೆಯನ್ನು ಸ್ವಾತಂತ್ರ್ಯ, ಮುಕ್ತತೆ, ಘನತೆ, ಸ್ವಾಯತ್ತತೆ ಮೇಲಿನ ‘ಕಾನೂನು ದಾಳಿ’ ಎಂದೂ ಅರ್ಥೈಸಲಾಗುತ್ತಿದೆ. ನಿಜಕ್ಕೂ ‘ಮತಾಂತರಕ್ಕಾಗಿ ಮದುವೆ’ಯ ಮಜಕೂರು ಏನು? ತೇಜಸ್ವಿ ಸೂರ್ಯ ಅವರವ್ಯಾಖ್ಯಾನಇಲ್ಲಿದೆ.

***

ಮುಸ್ಲಿಮೇತರ ಹೆಣ್ಣುಮಕ್ಕಳು ಮುಸ್ಲಿಂ ಸಂಗಾತಿಯನ್ನು ಮದುವೆಯಾಗಲು ಬಲವಂತವಾಗಿ ನಡೆಯುತ್ತಿರುವ ಮತಾಂತರದ ಪ್ರಕ್ರಿಯೆಯು ಈಗ ಭಾರತೀಯ ಸಮಾಜಕ್ಕೆ ದೊಡ್ಡ ಪಿಡುಗಾಗಿ ಕಾಡುತ್ತಿದೆ. ಈ ಪಿಡುಗು ಎಂತಹದ್ದು ಎಂದರೆ ನಮ್ಮ ಸಮಾಜ ಇದುವರೆಗೆ ಕಾಪಾಡಿಕೊಂಡು ಬಂದ ಸೌಖ್ಯವನ್ನೇ ಅದು ಅಳಿಸಿ ಹಾಕುವಂಥದ್ದು. ಲಿಂಗ ಸಮಾನತೆಯ ಹಾದಿಯಲ್ಲಿ ನಾವು ಇದುವರೆಗೆ ಸಾಧಿಸಿದ ಪ್ರಗತಿಯನ್ನೂ, ಶತಮಾನಗಳಷ್ಟು ಹಳೆಯದಾದ ಭಾರತೀಯ ನಾಗರಿಕತೆಯ ಬಹುತ್ವದ ಸಮತೋಲನವನ್ನೂ ಆಪೋಶನ ತೆಗೆದುಕೊಳ್ಳುವಂಥದ್ದು. ಸಮಾಜದ ಇಂತಹ ನೇಯ್ಗೆಯನ್ನು ಮತ್ತೆ ಸರಿಪಡಿಸಲು ಆಗದಂತೆ ಹರಿದುಹಾಕುವಂಥದ್ದು ಕೂಡ.

ಮಹಿಳೆಯರ –ಬಹುತೇಕ ಪ್ರಕರಣಗಳಲ್ಲಿ ತರುಣಿಯರು ಹಾಗೂಒಂದಷ್ಟು ಸಲ ಬಾಲಕಿಯರು– ಧಾರ್ಮಿಕ ನಂಬಿಕೆಯನ್ನು ಬಲವಂತವಾಗಿ ಪರಿವರ್ತಿಸುವ ಈ ಪಿಡುಗು, ಮೇಲ್ನೋಟಕ್ಕೆ ‘ಅಂತರಧರ್ಮೀಯ ಮದುವೆ’ಎಂಬ ವೇಷ ಧರಿಸಿದರೂ ಅದರ ಪರಿಣಾಮಗಳು ನಾವುಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಆಳ.

‘ಲವ್ ಜಿಹಾದ್’ ಎಂದು ವ್ಯಂಗ್ಯದ ಧಾಟಿಯಲ್ಲಿ ಕರೆಯಲಾಗುವ ಈ ಮದುವೆ ಪ್ರಕ್ರಿಯೆಯನ್ನು, ಒಬ್ಬರ ಧಾರ್ಮಿಕ ನಂಬಿಕೆಯನ್ನು ಇನ್ನೊಬ್ಬರ ಮೇಲೆ ಹೇರುವ ಅಥವಾ ಒಂದು ಧಾರ್ಮಿಕ ನಂಬಿಕೆಯನ್ನು ಅನುಸರಿಸುವವರ ಸಂಖ್ಯೆಯನ್ನು ದೇಶದಾದ್ಯಂತ ವಿಸ್ತರಿಸುವ ಪಿತೂರಿ ಎಂದಷ್ಟೇ ವ್ಯಾಖ್ಯಾನಿಸಿ ಸುಮ್ಮನಾಗುವಂತಿಲ್ಲ. ಮುಸ್ಲಿಮೇತರ ಯುವತಿಯರು ಮತಾಂತರಗೊಂಡು ಮುಸ್ಲಿಂ ಕುಟುಂಬಗಳ ಜತೆ ಮದುವೆ ಸಂಬಂಧ ಹೊಂದುವ ಈ ವಿದ್ಯಮಾನ, ಸಾಮಾಜಿಕ ಸೌಖ್ಯ ಹಾಗೂ ಲಿಂಗ ಸಮಾನತೆಗೆ ಹೇಗೆ ಕಂಟಕವಾಗಿದೆ ಎಂಬುದನ್ನು ತುಂಬಾ ಗಂಭೀರವಾಗಿ ಆಲೋಚಿಸಬೇಕು.

ಮುಸ್ಲಿಮೇತರ ಯುವತಿಯರನ್ನು ಬಲವಂತವಾಗಿ ಮತಾಂತರಿಸುವ ಹಾಗೂ ಮದುವೆ ಮಾಡಿಸುವ ಪ್ರಕರಣಗಳು ಪಾಕಿಸ್ತಾನದಲ್ಲಂತೂ ದಿನನಿತ್ಯದ ಬೆಳವಣಿಗೆಗಳು. ಇತ್ತೀಚೆಗೆ ವರದಿಯಾದ ಅಲ್ಲಿನ ಘಟನೆಯನ್ನೇ ಉದಾಹರಿಸುವುದಾದರೆ, ಆರ್ಝೂ ರಾಜಾ ಎಂಬ 13 ವರ್ಷದ ಕ್ರಿಶ್ಚಿಯನ್ ಬಾಲಕಿಯನ್ನು ಅಪಹರಿಸಿ, ಬಲವಂತವಾಗಿ ಮತಾಂತರಿಸಿ 44 ವರ್ಷ ವಯಸ್ಸಿನ ಅಝ಼ರ್ ಅಲಿಗೆ ಮದುವೆ ಮಾಡಿಕೊಡಲಾಯಿತು. ದುರದೃಷ್ಟವಶಾತ್, ಭಾರತದಲ್ಲಿ ಸಹ ಈ ತೆರನಾದ ಘಟನೆಗಳು ವರದಿಯಾಗುತ್ತಿವೆ. ಅದರಲ್ಲೂ ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಈ ಸಾಮಾಜಿಕ ಪಿಡುಗು ಎಷ್ಟೊಂದು ಅತಿರೇಕಕ್ಕೆ ಹೋಗಿದೆಯೆಂದರೆ, ಕೇರಳ ಹಾಗೂ ಅಲಹಾಬಾದ್ ಹೈಕೋರ್ಟ್‌ಗಳ ಗಮನವನ್ನೂ ಅದು ಸೆಳೆದಿದೆ.

ಮದುವೆಯಾಗಿ, ಮಕ್ಕಳನ್ನೂ ಹೊಂದಿರುವ ಪುರುಷರು ಪತ್ನಿ- ಮಕ್ಕಳಿಗೆ ಜೀವನಾಂಶ ಕೊಡದೇ, ಆ ಸಂಬಂಧದ ಹೊಣೆಗಳಿಗೆ ಉತ್ತರದಾಯಿತ್ವದಿಂದಲೂ ನುಣುಚಿಕೊಂಡು ಮತ್ತೊಂದು ಮದುವೆಯಾಗುವ ಉದ್ದೇಶದಿಂದ ಇಸ್ಲಾಂಗೆ ಮತಾಂತರವಾದ ಹಲವು ಉದಾಹರಣೆಗಳಿವೆ. ಮೂಲ ಧರ್ಮದಲ್ಲೇ ಇದ್ದರೆ ಕಾನೂನುಪ್ರಕಾರ ಕುಟುಂಬದ ನಿರ್ವಹಣೆಯ ಹೊಣೆ ಹೊರಬೇಕಾಗುತ್ತದೆ. ಮತಾಂತರದ ಮೂಲಕ ಅಂತಹ ಹೊಣೆಗಳಿಂದ ತಪ್ಪಿಸಿಕೊಳ್ಳಲಾಗುತ್ತದೆ.

ಹಾಗೆಂದು, ಎಲ್ಲ ಅಂತರಧರ್ಮೀಯ ಮದುವೆಗಳನ್ನೂ ವಿರೋಧಿಸಬೇಕೆಂದೇನಲ್ಲ.

ಅಂತರ್‌ಧರ್ಮೀಯ ಮದುವೆಗಳಿಗೆ ಕಾನೂನಿನ ಮನ್ನಣೆ ಗಳಿಸಿಕೊಡುವ ಸಲುವಾಗಿಯೇ ಭಾರತೀಯ ಸಂಸತ್ತು ‘ವಿಶೇಷ ವಿವಾಹ ಕಾಯ್ದೆ- 1954’ ಅನ್ನು ಜಾರಿಗೆ ತಂದಿದೆ. ಭಾರತೀಯ ಕಾನೂನುಗಳು ಪ್ರತಿಪಾದಿಸುವ ಮದುವೆಯ ಹಕ್ಕಿನಲ್ಲಿ ವ್ಯಕ್ತಿಯೊಬ್ಬ ಯಾರನ್ನು ಮದುವೆಯಾಗಬೇಕು ಎಂಬುದರ ಆಯ್ಕೆಯನ್ನು ಅವನಿಗೇ/ಅವಳಿಗೇ ಬಿಡಲಾಗಿದೆ. ಅಂದರೆ ವಯಸ್ಕ ಪ್ರಜೆಗಳ ಅಂತರಧರ್ಮಿಯ ವಿವಾಹಗಳಿಗೆ ಯಾವ ವಿರೋಧವೂ ಇಲ್ಲ.

ಹಾಗಿದ್ದರೂ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬೇರೆಯೇ ಆಗಿವೆ. ಮದುವೆಯ ಆಮಿಷವೊಡ್ಡಿ ಮಹಿಳೆಯರನ್ನು ಮತಾಂತರಗೊಳ್ಳುವಂತೆ ಉದ್ದೀಪಿಸುವುದು, ಬಳಿಕ ಯಾವುದೇ (ಕಾನೂನು) ರಕ್ಷಣೆ ಇಲ್ಲದೆ ಅವರನ್ನು ಪರಿತ್ಯಜಿಸುವುದು – ದೇಶದ ಹಲವೆಡೆ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿರುವುದು ವರದಿಯಾಗಿದೆ. ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಹರಿಯಾಣ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದ ಸರ್ಕಾರಗಳು, ಮುಸ್ಲಿಂ ಪುರುಷರನ್ನು ಮದುವೆಯಾಗುವ ಮುಸ್ಲಿಮೇತರ ಯುವತಿಯರ ಹಕ್ಕುಗಳನ್ನು ರಕ್ಷಿಸಲು ಕಾನೂನುಗಳನ್ನು ರೂಪಿಸಲು ಮುಂದಾಗಿವೆ. ಈ ಪ್ರಸ್ತಾಪಿತ ಕಾನೂನಿನ ಉದ್ದೇಶ ಮಹಿಳೆಯರ ಹಿತಾಸಕ್ತಿಯನ್ನು ರಕ್ಷಣೆ ಮಾಡುವುದೇ ಹೊರತು ಅಂತರಧರ್ಮೀಯ ಮದುವೆಗಳನ್ನು ವಿರೋಧಿಸುವುದಲ್ಲ.

ಕಾನೂನು ಏನೇನು?: ಈಗಾಗಲೇ ಹೇಳಿದಂತೆ, ಮದುವೆಯ ವಯಸ್ಸು ತಲುಪಿದ ಇಬ್ಬರು ವಯಸ್ಕ ಪ್ರಜೆಗಳು ‘ವಿಶೇಷ ವಿವಾಹ ಕಾಯ್ದೆ’ ಅನುಸಾರ, ಸಕಲ ಕಾನೂನು ವಿಧಿವಿಧಾನಗಳನ್ನು ಪೂರೈಸಿ ಮದುವೆಯನ್ನು ಆಗಬಹುದು. ಹಾಗೆ ಮದುವೆ ನೋಂದಣಿ ಮಾಡಿಸುವ 30 ದಿನಗಳ ಪೂರ್ವದಲ್ಲಿ ಸಾರ್ವಜನಿಕ ನೋಟಿಸ್ ಹೊರಡಿಸಬೇಕು. ಸರ್ಕಾರ ನೀಡಿರುವ ಯಾವುದೇ ಅಧಿಕೃತ ಗುರುತಿನ ಚೀಟಿ, ಫೋಟೊ ಸೇರಿದಂತೆ ಅಗತ್ಯ ದಾಖಲೆಗಳನ್ನು ಮದುವೆಯ ನೋಂದಣಿಗಾಗಿ ಒದಗಿಸಬೇಕು. ಸರ್ಕಾರ ನೇಮಕಮಾಡಿದ ಅಧಿಕಾರಿಗಳು ಮಾತ್ರ ಇಂತಹ ಮದುವೆಯನ್ನು ನೋಂದಣಿ ಮಾಡಿಕೊಳ್ಳುವರು. ಈ ವಿವರಗಳನ್ನೆಲ್ಲ ನೋಡಿದಾಗ ಮದುವೆಗೆಂದು ಒಬ್ಬರು ತಮ್ಮ ಧಾರ್ಮಿಕ ನಂಬಿಕೆಯನ್ನು ತ್ಯಜಿಸಿ ಇನ್ನೊಬ್ಬರ ಧರ್ಮವನ್ನು ಒಪ್ಪಿಕೊಳ್ಳುವ ಪ್ರಮೇಯವೇ ಬರುವುದಿಲ್ಲ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ.

ಅಲಹಾಬಾದ್‌ ಹೈಕೋರ್ಟ್‌ನ ತೀಕ್ಷ್ಣ ಅವಲೋಕನದಲ್ಲಿ ಈ ಅಂಶ ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ. ಕೇವಲ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಮತಾಂತರವನ್ನು ಒಪ್ಪಲಾಗದು ಎಂದು ಅದು ಹೇಳಿದೆ. ಪ್ರಿಯಾಂಶಿ @ ಕೆ.ಎಂ.ಶಮ್ರೀನ್‌ ವಿರುದ್ಧ ಉತ್ತರ ಪ್ರದೇಶ ಸರ್ಕಾರ; ನೂರ್ ಜಹಾನ್ ಬೇಗಂ @ ಅಂಜಲಿ ಮಿಶ್ರಾ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಪ್ರಕರಣಗಳಲ್ಲಿ ಕೋರ್ಟ್‌ ಅದನ್ನು ತುಂಬಾ ಸ್ಪಷ್ಟವಾಗಿ ಹೇಳಿದೆ.

ಮುಸ್ಲಿಂ ಸಂಗಾತಿಯನ್ನು ಮದುವೆಯಾಗಲು ಹಿಂದೂ, ಸಿಖ್ ಹಾಗೂ ಕ್ರಿಶ್ಚಿಯನ್ ಧರ್ಮದ ಯುವತಿಯರು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವ ಸಾಕಷ್ಟು ಪ್ರಕರಣಗಳನ್ನು ನಾವು ನೋಡಿದ್ದೇವೆ. ಇದು ಹಲವು ಮಜಲುಗಳಲ್ಲಿ ಸಂಕಷ್ಟ ತಂದೊಡ್ಡುತ್ತದೆ. ಮೊತ್ತಮೊದಲಿಗೆ, ಹಿಂದೂ ಕಾನೂನುಗಳ ಮದುವೆಯ ಪರಿಕಲ್ಪನೆಯು ಮುಸ್ಲಿಂ ವೈಯಕ್ತಿಕ ಕಾಯ್ದೆಯ ಮದುವೆಯ ಪರಿಕಲ್ಪನೆಗೆ ಸಂಪೂರ್ಣ ವಿಭಿನ್ನವಾಗಿದೆ. ಮುಸ್ಲಿಂ ವೈಯಕ್ತಿಕ ಕಾಯ್ದೆಯು ‘ನಿಖಾ’ವನ್ನು ಒಪ್ಪಂದವೆಂಬಂತೆ ನೋಡಿದರೆ, ಹಿಂದೂ ಕಾಯ್ದೆಯು ಮದುವೆಯನ್ನು ಪವಿತ್ರ ಸಂಸ್ಕಾರ ಎಂದು ಪರಿಗಣಿಸುತ್ತದೆ.

ಮುಸ್ಲಿಂ ಕಾನೂನು ಇಬ್ಬರು ಮುಸ್ಲಿಮರ ಮಧ್ಯೆ ನಡೆಯುವ ಮದುವೆಯನ್ನು ಮಾತ್ರ ಅನುಮೋದಿಸುತ್ತದೆ. ಹೀಗಾಗಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ಇನ್ನೊಬ್ಬ ವ್ಯಕ್ತಿ ಮುಸ್ಲಿಂ ಆಗಿ ಮತಾಂತರಗೊಳ್ಳುವುದು ಕಡ್ಡಾಯವಾಗಿದೆ. ಆದರೆ, ಮುಸ್ಲಿಂ ವ್ಯಕ್ತಿಯು ಹಿಂದೂ ಧರ್ಮದ ವ್ಯಕ್ತಿಯನ್ನು ಮದುವೆಯಾಗಲು ಬಯಸಿದರೆ ಈ ಕಡ್ಡಾಯ ಇಲ್ಲ.

ಕಾನೂನಿನ ವಿಶ್ಲೇಷಣೆ ಮಾಡುವುದಾದರೆ, ಮುಸ್ಲಿಂ ವೈಯಕ್ತಿಕ ಕಾನೂನು ಅಂತರಧರ್ಮೀಯ ಮದುವೆಯನ್ನು ಕ್ರಮಬದ್ಧ ಎಂದು ಪರಿಗಣಿಸುವುದಿಲ್ಲ. ಇನ್ನು ಮತಾಂತರಗೊಂಡ ವಧುವಿಗೆ ಅದುವರೆಗೆ ಹಿಂದೂ ಅಥವಾ ಕ್ರಿಶ್ಚಿಯನ್ ಧರ್ಮದ ಕಾಯ್ದೆಗಳಿಂದ ಸಿಗುತ್ತಿದ್ದ ರಕ್ಷಣೆಯೂ ಇಲ್ಲವಾಗುತ್ತದೆ. ಮುಂದೆ ಜನಿಸುವ ಮಕ್ಕಳು ಸಹ ಪಿತ್ರಾರ್ಜಿತ/ ಆನುವಂಶಿಕ ಹಕ್ಕುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ತೇಜಸ್ವಿ ಸೂರ್ಯ

ಅಂತರಧರ್ಮೀಯ ವಿವಾಹ ಕುರಿತಂತೆ ಸಂವಿಧಾನಬದ್ಧವಾಗಿ ನೀಡಲಾದ ಮೌಲ್ಯಗಳನ್ನು ಎತ್ತಿಹಿಡಿಯುವುದು ಹಾಗೂ ಲಿಂಗ ಸಮಾನತೆಯ ನ್ಯಾಯವನ್ನು ಪುರಸ್ಕರಿಸುವುದು ಈಗ ಅಗತ್ಯವಾಗಿದೆ. ಆ ಕುರಿತ ಕಾನೂನಿನಲ್ಲಿ ಏನೆಲ್ಲ ಇರಬೇಕು ಎಂಬ ಕೆಲವು ಸಲಹೆಗಳು ಇಲ್ಲಿವೆ:

1. ವ್ಯಕ್ತಿಯೊಬ್ಬನ ವಯಸ್ಸು 18 ವರ್ಷ ಆಗುವವರೆಗೂ ಮತಾಂತರಕ್ಕೆ ಸಂಪೂರ್ಣ ನಿಷೇಧ ವಿಧಿಸುವುದು

2. ‘ವಿಶೇಷ ವಿವಾಹ ಕಾಯ್ದೆ’ಯ ಮಾದರಿಯಲ್ಲೇ ಮತಾಂತರವಾಗಲು ಸ್ಪಷ್ಟ ಪ್ರಕ್ರಿಯೆ ರೂಪಿಸುವುದು. ಅಂದರೆ, ಯಾವ ಉದ್ದೇಶಕ್ಕಾಗಿ ಈ ಮತಾಂತರ ಎಂಬುದನ್ನು ಪ್ರಕಟಿಸಿ 30 ದಿನಗಳ ಅವಧಿಯ ಸಾರ್ವಜನಿಕ ಕಾಲಾವಕಾಶ ಕೊಡುವುದು. ಇದಕ್ಕೆ ಮೂಲ ಮತದಲ್ಲಿರುವ, 25 ವರ್ಷ ವಯಸ್ಸಿಗೂ ಮೇಲ್ಪಟ್ಟ ಇಬ್ಬರು ಸಾಕ್ಷಿದಾರರು ಇರಬೇಕು. ಈ ಘೋಷಣೆಯನ್ನು ಆ ವ್ಯಕ್ತಿಯ ಪೂರ್ಣ ಹೆಸರು, ಸ್ವೀಕರಿಸುವ ಧರ್ಮದ ಹೊಸ ಹೆಸರು, ಪಾಲಕರ ಹೆಸರು, ಅಧಿಕೃತ ಗುರುತಿನ ಚೀಟಿ ಸಂಖ್ಯೆ ಸಮೇತ ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ರೂಪದಲ್ಲಿ ಪ್ರಕಟಿಸಬೇಕು.

3. ವಿಶೇಷ ವಿವಾಹ ಕಾಯ್ದೆಯನ್ನು ಹೊರತುಪಡಿಸಿ ಯಾವುದೇ ವೈಯಕ್ತಿಕ ಕಾಯ್ದೆಗಳ ಅಡಿಯಲ್ಲೂ ಅಂತರಧರ್ಮೀಯ ವಿವಾಹಗಳು ನೋಂದಣಿಗೊಳ್ಳಬಾರದು.

4. ಮತಾಂತರಗೊಂಡ ಎರಡು ವರ್ಷಗಳ ಬಳಿಕವಷ್ಟೇ ವಿವಾಹಕ್ಕೆ ಅವಕಾಶ ಮಾಡಿಕೊಡಬೇಕು. ಇದರಿಂದ ಮತಾಂತರದ ಉದ್ದೇಶಗಳಿಗೆ ಮದುವೆಯಾಗಿ ವಂಚಿಸುವ ಪರಿಪಾಟ ತಪ್ಪುವುದು.

5. ಅಂತರಧರ್ಮೀಯ ಮದುವೆಯನ್ನು ಕಡ್ಡಾಯವಾಗಿ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ನೋಂದಾಯಿಸಬೇಕು. ಇದು ನಡೆಯದ ಮದುವೆಯನ್ನು ಅನೂರ್ಜಿತ ಎಂದೇ ಪರಿಗಣಿಸಬೇಕು.

6. ಅಂತರಧರ್ಮೀಯ ಮದುವೆಗಳು ಮತ್ತು ಕುಟುಂಬಗಳು ‘ಭಾರತೀಯ ಉತ್ತರಾಧಿಕಾರ ಕಾಯ್ದೆ’ ಅನುಸಾರ ನಿಗಾವಣೆಗೆ ಒಳಪಡಬೇಕೇ ಹೊರತು ಯಾವುದೇ ಧರ್ಮದ ವೈಯಕ್ತಿಕ ಕಾಯ್ದೆಗಳ ಪ್ರಕಾರ ಅಲ್ಲ ಎಂಬ ಅಂಶವನ್ನೂ ಕಡ್ಡಾಯಗೊಳಿಸಬೇಕು.

ಈ ತೆರನಾದ ಬದಲಾವಣೆ ಮಾಡಿದರೆ, ಮತಾಂತರಗೊಂಡ ವ್ಯಕ್ತಿಯು ವಿಶೇಷ ವಿವಾಹ ಕಾಯ್ದೆ ಅನುಸಾರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ನಾವಿನ್ನೂ ಕಾಯುತ್ತಿದ್ದು, ವಿವಾಹಕ್ಕಾಗಿಯೇ ಇಸ್ಲಾಮಿಗೆ ಮತಾಂತರಗೊಂಡು ಅದರ ಪರಿಣಾಮ ಎದುರಿಸುತ್ತಿರುವ ಯುವತಿಯರ ಹಿತಾಸಕ್ತಿಯನ್ನು ಜವಾಬ್ದಾರಿಯುತ ಸರ್ಕಾರಗಳು ಈ ಮಾರ್ಗದಿಂದಲಾದರೂ ರಕ್ಷಿಸಬೇಕಿದೆ. ಈ ಸುಧಾರಣೆಗಳನ್ನು ಯಾರಾದರೂ ವಿರೋಧಿಸುತ್ತಿದ್ದಾರೆ ಎಂದರೆ, ಅವರಿಗೆ ನಮ್ಮ ಯುವತಿಯರ ಹಿತಾಸಕ್ತಿ ರಕ್ಷಿಸುವ ಉದ್ದೇಶ ಇಲ್ಲವೆಂದೇ ಅರ್ಥ.

ಲೇಖಕ: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ,ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT