ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಅಪೌಷ್ಟಿಕತೆಯ ದೂರಗಾಮಿ ಪರಿಣಾಮ

ಬಾಲ್ಯದಲ್ಲಿ ಪರಿಸ್ಥಿತಿ ಸುಧಾರಣೆಗೆ ಕೈಗೊಳ್ಳುವ ಕ್ರಮಗಳು ಅತಿ ಮುಖ್ಯವಾದವು
Last Updated 28 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಪ್ರಕಟವಾದ ಜಾಗತಿಕ ಹಸಿವು ಸೂಚ್ಯಂಕವು ಸಮೀಕ್ಷೆಗೆ ಒಳಪಡಿಸಲಾದ 116 ರಾಷ್ಟ್ರಗಳ ಪೈಕಿ ಭಾರತವು 101ನೇ ಸ್ಥಾನದಲ್ಲಿರುವುದನ್ನು ತೋರಿಸಿದೆ. ಒಟ್ಟು ಶ್ರೇಯಾಂಕವನ್ನು ಆಧರಿಸಿ ಹೇಳುವುದಾದಲ್ಲಿ, ಭಾರತದಲ್ಲಿನ ಹಸಿವಿನ ಸಮಸ್ಯೆ ‘ಗಂಭೀರ’ವಾದದ್ದು. ಬೇಸರದ ಸಂಗತಿ ಎಂದರೆ, ಕಳೆದ ದಶಕದಲ್ಲಿ ಭಾರತದ ಶ್ರೇಯಾಂಕ ಕುಸಿದಿರುವ ಪ್ರಮಾಣ ಅತ್ಯಂತ ತೀವ್ರತರವಾದದ್ದು. 2011ರಲ್ಲಿ, 122 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 67ರಲ್ಲಿತ್ತು. ಈಗ, ತನ್ನ ಅಕ್ಕಪಕ್ಕದ ನೆರೆ ರಾಷ್ಟ್ರಗಳಿಗಿಂತ ಭಾರತವು ಕೆಳಗಿನ ಸ್ಥಾನ ದಲ್ಲಿರುವುದನ್ನು 2021ರ ಶ್ರೇಯಾಂಕ ತೋರಿಸುತ್ತಿದೆ.

ಹಸಿವಿಗೂ ಅಪೌಷ್ಟಿಕತೆಗೂ ನೇರ ಸಂಬಂಧ ಇದೆ. ಆರಂಭದ ಬಾಲ್ಯ ಕಾಲದಲ್ಲಿನ ಅಪೌಷ್ಟಿಕತೆಯ ಪರಿಣಾಮವು ದೀರ್ಘಾವಧಿಯಲ್ಲಿ ತುಂಬಾ ಗಂಭೀರ ವಾದುದಾಗಿರುತ್ತದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಅರ್ಧದಷ್ಟು ಸಾವುಗಳು ಪೌಷ್ಟಿಕತೆಯ ಕೊರತೆಯಿಂದಲೇ ಸಂಭವಿಸುತ್ತವೆ. ಎಳೆಯ ಮಕ್ಕಳಲ್ಲಿ ಪೌಷ್ಟಿಕತೆಯ ಕೊರತೆಯು ಕೆಟ್ಟದೊಂದು ಸುಳಿಯ ಭಾಗ ವಾಗಿಬಿಡುತ್ತದೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸ ಲಾಗಿದೆ. ಅಪೌಷ್ಟಿಕತೆ ಹೊಂದಿದ ಮಕ್ಕಳು ಸೋಂಕುಗಳಿಗೆ ಬೇಗ ತುತ್ತಾಗುತ್ತಾರೆ. ಇದರಿಂದ ಉಂಟಾಗುವ ಕಾಯಿಲೆ ಗಳಿಂದಾಗಿ ಮತ್ತಷ್ಟು ದುರ್ಬಲರಾಗಿ ಇನ್ನಷ್ಟು ತೀವ್ರತರ ಕಾಯಿಲೆಗಳಿಗೆ ಈಡಾಗುವ ಸಂಭವವಿರುತ್ತದೆ. ಮೊದಲ 1,000 ದಿನಗಳಲ್ಲಿ ಸರಿಯಾದ ಪೌಷ್ಟಿಕ ಆಹಾರ ಲಭಿಸದಿದ್ದಲ್ಲಿ ಜೀವನಪರ್ಯಂತ ಮಗು ಹಲವು ಅನನುಕೂಲ
ಗಳಿಂದ ನರಳುವಂತಾಗಬಹುದು. ಮಿದುಳಿನ ಬೆಳವಣಿಗೆ, ಅರಿವಿನ ಶಕ್ತಿ ಹಾಗೂ ಶಾಲೆಗಳಲ್ಲಿ ಶೈಕ್ಷಣಿಕ ಗುರಿ ಸಾಧನೆಗಳಂತಹ ವಿಚಾರಗಳಲ್ಲಿ ಸಮಸ್ಯೆಗಳನ್ನು ಎದುರಿಸುವಂತಾಗಬಹುದು. ಇದು ಶಾಲೆ, ಕ್ರೀಡೆ ಹಾಗೂ ಇತರ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇತರ ಮಕ್ಕಳ ಜೊತೆಗೆ ಸಾಮಾಜಿಕವಾಗಿ ಬೆರೆಯುವ ಅವರ ಸಾಮರ್ಥ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಇಂತಹ ಮಕ್ಕಳು ಮಧ್ಯದಲ್ಲೇ ಶಾಲೆ ಬಿಡುವ ಪ್ರಮಾಣವೂ ಹೆಚ್ಚಿರುತ್ತದೆ. ಪರಿಣಾಮವಾಗಿ, ಅಪೌಷ್ಟಿಕತೆಯಿಂದ ನರಳುವ ಮಕ್ಕಳು ವಯಸ್ಕರಾದಾಗ, ಮಾಮೂಲು ಬೆಳವಣಿಗೆ ಇರುವ ಮಕ್ಕಳು ವಯಸ್ಕರಾದಾಗ ಗಳಿಸುವುದ ಕ್ಕಿಂತ ಶೇಕಡ 20ರಷ್ಟು ಕಡಿಮೆ ವರಮಾನ ಗಳಿಸುತ್ತಾರೆ ಎಂಬುದು ಸಂಶೋಧನೆಗಳಿಂದ ವ್ಯಕ್ತವಾಗಿದೆ.

ಸಮೀಕ್ಷೆ ನಡೆಸಲಾದ 17 ರಾಜ್ಯಗಳ ಪೈಕಿ 11 ರಾಜ್ಯಗಳಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವುದು (ಸ್ಟಂಟಿಂಗ್) ತೀವ್ರತರವಾಗಿದೆ ಎಂಬುದನ್ನು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ- 5 (ಎನ್ಎಫ್ಎಚ್ಎಸ್-5; 2019-2020) ತೋರಿಸಿದೆ. ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವ ಈ ಸಮಸ್ಯೆಯು ದೀರ್ಘಕಾಲದಿಂದ ಪೀಳಿಗೆ ಪೀಳಿಗೆಗಳಿಂದ ಹಾದುಬಂದಂತಹ ಅಪೌಷ್ಟಿಕತೆ, ಪುನರಾವರ್ತಿತ ಕಾಯಿಲೆ ಹಾಗೂ ಅಸಮರ್ಪಕ ಪರಿಸರಗಳಿಗೆ ಸೂಚಕವಾಗಿದೆ. ಇದೇ ವಯೋಮಾನದ ಮಕ್ಕಳ ಗುಂಪಿಗೆ ಸಂಬಂಧಿಸಿದಂತೆ, 17 ರಾಜ್ಯಗಳ ಪೈಕಿ 13 ರಾಜ್ಯಗಳಲ್ಲಿ, ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವ (ವೇಸ್ಟಿಂಗ್) ಸಮಸ್ಯೆಯೂ ಹೆಚ್ಚಾಗಿದೆ. ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವುದು, ಇತ್ತೀಚಿನ ತೀವ್ರತರವಾದ ತೂಕ ನಷ್ಟವನ್ನು ಸಾಮಾನ್ಯವಾಗಿ ಸೂಚಿಸುತ್ತದೆ.

ಕೋವಿಡ್ -19 ಸಾಂಕ್ರಾಮಿಕ ಹರಡುವುದಕ್ಕೆ ಮೊದಲೇ ಈ ಸಮೀಕ್ಷೆಯನ್ನು ನಡೆಸಲಾಗಿತ್ತು ಎಂಬು ದನ್ನು ನಾವು ನೆನಪಿಸಿಕೊಳ್ಳಬೇಕು. ಕೋವಿಡ್-19ರ ಸಂದರ್ಭದಲ್ಲಿ ಕಾಯಿಲೆ ಹಾಗೂ ಜೀವನೋಪಾಯ ನಷ್ಟಗಳಿಂದಾಗಿ ವಿಶೇಷವಾಗಿ ಬಡ ಕುಟುಂಬಗಳಲ್ಲಿ ಅಪೌಷ್ಟಿಕತೆ ಸಮಸ್ಯೆಯು ಮತ್ತಷ್ಟು ತೀವ್ರವಾಗಿದೆ.

ಎನ್ಎಫ್ಎಚ್ಎಸ್-4 (2015-16) ಹಾಗೂ ಎನ್ಎಫ್ಎಚ್ಎಸ್-5 ಮಧ್ಯೆ ಕರ್ನಾಟಕದಲ್ಲಿ ಪರಿಸ್ಥಿತಿಯು ಒಟ್ಟಾರೆಯಾಗಿ ಹದಗೆಟ್ಟಿಲ್ಲದಿದ್ದರೂ ದಾಖಲೆಯು ಮಂಕಾಗಿಯೇ ಇದೆ. ರಾಜ್ಯದಲ್ಲಿ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೂವರು ಮಕ್ಕಳಲ್ಲಿ ಒಂದು ಮಗು ತನ್ನ ವಯಸ್ಸಿಗೆ ತಕ್ಕ ಎತ್ತರ ಹೊಂದಿರದೆ ಕುಬ್ಜವಾಗಿ ಇದೆ; ಹಾಗೆಯೇ ಹತ್ತು ಮಕ್ಕಳಲ್ಲಿ ಒಂದು ಮಗು ತೀರಾ ಸಣ್ಣಗಿದೆ. ಈ ಸಮಸ್ಯೆಯು ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿ ಇದೆ. ಉದಾಹರಣೆಗೆ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ವಯಸ್ಸಿಗೆ ತಕ್ಕ ಎತ್ತರ ಇಲ್ಲದ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪ್ರಮಾಣ ಶೇಕಡ 3-4ರಷ್ಟು ಹೆಚ್ಚಾಗಿದೆ.

ಪ್ರೊ. ಶ್ರೀಲತಾ ರಾವ್ ಶೇಷಾದ್ರಿ
ಪ್ರೊ. ಶ್ರೀಲತಾ ರಾವ್ ಶೇಷಾದ್ರಿ

ಪರಿಸ್ಥಿತಿ ಸುಧಾರಿಸಲು ಏನು ಮಾಡಬೇಕು? ಡಬ್ಲ್ಯುಎಚ್ಒ ಶಿಫಾರಸುಗಳಲ್ಲಿ ಕೆಲವಷ್ಟನ್ನೇ ಆಯ್ಕೆ ಮಾಡಿಕೊಂಡು ಕೈಗೊಳ್ಳುವ ಕೆಲವೊಂದು ತಕ್ಷಣದ ಕ್ರಮಗಳು ಭಾರಿ ಪರಿಣಾಮ ಬೀರಬಹುದು:

1. ಶಿಶು ಹಾಗೂ ಮಕ್ಕಳ ಬೆಳವಣಿಗೆಯ ನಿಯಮಿತ ಮೇಲ್ವಿಚಾರಣೆಯು ಕಡ್ಡಾಯವಾಗಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಅಡಿ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಶಾಲಾ ಆರೋಗ್ಯ ಕಾರ್ಯಕ್ರಮದ ಅಡಿ ಪ್ರಾಥಮಿಕ ಶಾಲೆಗಳಲ್ಲಿ ಇದು ಈಗಾಗಲೇ ಒಂದು ಅವಶ್ಯಕತೆಯಾಗಿ ಇದ್ದೇ ಇದೆ. ಮಕ್ಕಳ ತೂಕ ಹಾಗೂ ಎತ್ತರವನ್ನು ನಿಕಟವಾಗಿ ಪರಿಶೀಲಿಸುತ್ತಲೇ ಸಾಗುವುದರಿಂದ ಅಪೌಷ್ಟಿಕತೆಯ ಅಪಾಯದಲ್ಲಿರುವ ಮಕ್ಕಳನ್ನು ಗುರುತಿಸಿ ಸಕಾಲದ ಚಿಕಿತ್ಸೆ ಹಾಗೂ ನಂತರದ ನಿರಂತರ ಮೇಲುಸ್ತುವಾರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳಿಸಿಕೊಡಬಹುದು. ಈ ಪ್ರಕ್ರಿಯೆಯಲ್ಲಿ ಪೋಷಕರನ್ನೂ ತೊಡಗಿಸಿಕೊಂಡು ಬೇಗನೇ ಚಿಕಿತ್ಸೆ ಕೊಡಿಸುವುದರ ಮಹತ್ವದ ಬಗ್ಗೆ ಅರಿವು ಮೂಡಿಸಬಹುದು.

2. ಅಂಗನವಾಡಿ ಹಾಗೂ ಶಾಲೆಗಳಲ್ಲಿ ನೀಡಲಾಗುವ ಆಹಾರ ಕಾರ್ಯಕ್ರಮಗಳು ಬಹಳ ಮುಖ್ಯವಾದವು. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಅಂಗನವಾಡಿ ಹಾಗೂ ಶಾಲೆಗಳು ಮುಚ್ಚಿದ್ದರಿಂದ ಈ ಆಹಾರ ಕಾರ್ಯಕ್ರಮಗಳ ಮಹತ್ವ ಮತ್ತಷ್ಟು ಸ್ಪಷ್ಟವಾಯಿತು. ಹೀಗಿದ್ದೂ, ಈ ಊಟದ ಪೌಷ್ಟಿಕತೆಯ ಮೌಲ್ಯವನ್ನು ಪರಿಶೀಲಿಸುವ ಕಾಲ ಬಂದಿದೆ. ಅಕ್ಕಿ ಅಥವಾ ಗೋಧಿ ಪ್ರಮಾಣ ಹೆಚ್ಚಿರುವ ಊಟ ಹೊಟ್ಟೆಯನ್ನು ತುಂಬಿಸುತ್ತದೆ. ಆದರೆ, ದೇಹಕ್ಕೆ ಅತ್ಯಗತ್ಯ ವಾದ ಪ್ರೋಟೀನ್ ಹಾಗೂ ಸೂಕ್ಷ್ಮ ಪೋಷಕಾಂಶ ಗಳನ್ನು ಇದು ಒದಗಿಸುವುದಿಲ್ಲ. ಕರ್ನಾಟಕದಲ್ಲಿರುವಂತೆ ಹಾಲನ್ನು ಒದಗಿಸುವುದು ಹಾಗೂ ರಾಜ್ಯದಲ್ಲಿ ಹೆಚ್ಚು ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿನ ಮಕ್ಕಳಿಗೆ ಮೊಟ್ಟೆ ಒದಗಿಸುವ ಪ್ರಸ್ತಾವಗಳು ತುಂಬಾ ಉತ್ತಮವಾದ ಸೇರ್ಪಡೆಗಳು. ಆದರೆ ಇನ್ನೂ ಹೆಚ್ಚಿನದನ್ನು ಮಾಡಬಹುದು. ಉದಾಹರಣೆಗೆ, ಪೋಷಕಾಂಶ ಹೆಚ್ಚಿರುವ ರಾಗಿಯನ್ನು ವಾರದ ಕೆಲವು ದಿನಗಳಲ್ಲಿ ನೀಡಬಹುದು. ಸ್ವತಃ ಆಹಾರ ಬೆಳೆ ಬೆಳೆದು ತಮ್ಮ ಊಟವನ್ನು ಎಷ್ಟೊಂದು ಸಮೃದ್ಧಗೊಳಿಸಿಕೊಳ್ಳಬಹುದು ಎಂಬುದನ್ನು ಕಲಿಸಲು ತರಕಾರಿ ತೋಟ ಅಭಿವೃದ್ಧಿಪಡಿಸುವುದನ್ನು ಮಕ್ಕಳಲ್ಲಿ ಉತ್ತೇಜಿಸ
ಬಹುದು.

3. ಮಕ್ಕಳ ಪೌಷ್ಟಿಕತೆಗಾಗಿ ಮಾಡುವ ವೆಚ್ಚ ಗಣನೀಯ ಪ್ರಮಾಣದಲ್ಲಿ ಹೆಚ್ಚಬೇಕು. 2022ರೊಳಗೆ 5 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಕುಂಠಿತ ಬೆಳವಣಿಗೆಯನ್ನು ತಗ್ಗಿಸುವ ಗುರಿಯನ್ನು ಸರ್ಕಾರ ಆರಂಭಿಸಿರುವ ಮಿಷನ್ ಪೋಷಣ್ 2.0 ಕಾರ್ಯಕ್ರಮ ಹೊಂದಿದೆ. ಆಹಾರದ ಜೊತೆಗೆ ಪೂರಕ ಪೋಷಕಾಂಶಗಳು, ಮಾತೃತ್ವ ಸೌಲಭ್ಯಗಳು, ಪೂರಕ ಸೂಕ್ಷ್ಮ ಪೋಷಕಾಂಶಗಳು ಹಾಗೂ ಪೌಷ್ಟಿಕತೆ ಕುರಿತಂತಹ ಸಲಹಾ ಸೇವೆಗಳನ್ನು ಪೂರ್ಣಪ್ರಮಾಣ
ದಲ್ಲಿ ಒದಗಿಸಲು ಸುಮಾರು ₹ 38,500 ಕೋಟಿಯಷ್ಟು ಹೂಡಿಕೆ ಅಗತ್ಯವಿದೆ ಎಂದು ಸಂಶೋಧಕರು ಅಂದಾಜು ಮಾಡಿದ್ದಾರೆ. ಹೀಗಿದ್ದೂ, 2019-20ರಲ್ಲಿ ಪೌಷ್ಟಿಕತೆಗಾಗಿ ಬಜೆಟ್‌ನಲ್ಲಿ ಒದಗಿಸಿದ್ದ ಹಣ ಸುಮಾರು ₹ 17,600 ಕೋಟಿ. ಎಂದರೆ, ಅರ್ಧದಷ್ಟು ಕಡಿಮೆ.

ಅಪೌಷ್ಟಿಕತೆಯಿಂದಾಗಿ ಉತ್ಪಾದಕತೆಯ ನಷ್ಟವು ಭಾರತದ ಜಿಡಿಪಿಯಲ್ಲಿ ಬಹುತೇಕ ಶೇ 3ರಷ್ಟಿರುತ್ತಿದೆ ಎಂದು ವಿಶ್ವ ಬ್ಯಾಂಕ್ (2005) ಅಂದಾಜು ಮಾಡಿದೆ. ಪ್ರತಿವರ್ಷ ಜಿಡಿಪಿಯ ಶೇ 0.8ರಿಂದ ಶೇ 2.5ರಷ್ಟು ಪ್ರಮಾಣದಲ್ಲಿ ಭಾರತದ ಆರ್ಥಿಕತೆಗೆ ಸೂಕ್ಷ್ಮ ಪೋಷಕಾಂಶ ಕೊರತೆಯೊಂದೇ ನಷ್ಟವುಂಟು ಮಾಡುತ್ತಿದೆ ಎಂದೂ ಅಂದಾಜು ಮಾಡಲಾಗಿದೆ. ಮಕ್ಕಳ ಅಪೌಷ್ಟಿಕತೆ ನಿರ್ವಹಣೆಗೆ ರಾಷ್ಟ್ರೀಯ ಕಾರ್ಯತಂತ್ರವೊಂದರ ಬಗ್ಗೆ ಗಂಭೀರವಾಗಿ ಮರು ಆಲೋಚಿಸುವ ಕಾಲ ಬಂದಿದೆ. ದಿಟ್ಟವಾದಂತಹ ಸಂರಚನಾತ್ಮಕ ಸುಧಾರಣೆಗಳು ಹಾಗೂ ಬಜೆಟ್‌ನಲ್ಲಿ ಹಣ ಹಂಚಿಕೆ ದ್ವಿಗುಣಗೊಳಿಸುವುದು ಮುಖ್ಯವಾಗುತ್ತವೆ. ಮಾನವೀಯ ವಾದ ಅಭಿವೃದ್ಧಿಪರ ಆರ್ಥಿಕ ದೃಷ್ಟಿಕೋನಗಳಿಂದ ಸಿಗುವ ಪ್ರಯೋಜನ ದೊಡ್ಡದು. ಈ ದಿಸೆಯಲ್ಲಿನ ಹಣ ಹೂಡಿಕೆಗಳಿಂದ ದಕ್ಕುವ ಲಾಭಗಳು ಹಲವು ಪಟ್ಟು ಹೆಚ್ಚಾಗಿರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT