ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಶಿಕ್ಷಣದ ಉದ್ದೇಶ ಮತ್ತು ಸಾಮರ್ಥ್ಯ ವೃದ್ಧಿ

ಶಿಕ್ಷಣ ಕ್ಷೇತ್ರದಲ್ಲಿ ನಡೆಯಬೇಕೆಂದು ಬಯಸುವ ಪರಾಮರ್ಶೆ ಇತರ ಎಲ್ಲ ಕ್ಷೇತ್ರಗಳಲ್ಲೂ ನಡೆಯಬೇಕಾಗಿದೆ
Last Updated 12 ಅಕ್ಟೋಬರ್ 2021, 2:21 IST
ಅಕ್ಷರ ಗಾತ್ರ

ಹೊಸ ಶಿಕ್ಷಣ ನೀತಿ ಹಲವು ಹೊಸ ಸಂಗತಿಗಳನ್ನು ಒಳಗೊಂಡಿದೆ. ಈ ಹಿಂದಿನ ಮೂರು ವರ್ಷಗಳ ಡಿಗ್ರಿ ಬದಲು ನಾಲ್ಕು ವರ್ಷಗಳ ಡಿಗ್ರಿ, ಏಕಶಿಸ್ತು ಬದಲು ಬಹುಶಿಸ್ತಿಗೆ ಒತ್ತು, ಮಧ್ಯದಲ್ಲಿ ಬಿಡುವವರ ಶ್ರಮ ವ್ಯರ್ಥವಾಗುವ ಬದಲು ಅವರಿಗೂ ಒಂದು ಸರ್ಟಿಫಿಕೇಟ್, ಒಂದು ಶಿಸ್ತಿನಿಂದ ಮತ್ತೊಂದು ಶಿಸ್ತಿಗೆ ಬದಲಾಯಿಸುವ ಅವಕಾಶಗಳಿವೆ. ಇವೆಲ್ಲವೂ ಹೊಸ ಶಿಕ್ಷಣ ಹೇಗೆ ಜಾರಿಗೆ ಬರುತ್ತದೆ ಎನ್ನುವ ಪ್ರಶ್ನೆಗೆ ಉತ್ತರ.

ನಡೆಯುತ್ತಿರುವ ಬಹುತೇಕ ಚರ್ಚೆಗಳಲ್ಲಿ ಇವೇ ವಿಚಾರಗಳು ಮುಂಚೂಣಿಗೆ ಬಂದು, ಶಿಕ್ಷಣದ ಉದ್ದೇಶ ಏನು ಎನ್ನುವ ಪ್ರಶ್ನೆ ಮುಂಚೂಣಿಗೆ ಬರಲಿಲ್ಲ. ಶಿಕ್ಷಣದ ಉದ್ದೇಶವನ್ನು ಚರ್ಚಿಸುವುದು ಈ ಲೇಖನದ ಉದ್ದೇಶ.

ಶಿಕ್ಷಣದ ಉದ್ದೇಶ ಏನು ಅಥವಾ ಶಿಕ್ಷಣ ಯಾಕೆ ಬೇಕು ಎನ್ನುವ ಪ್ರಶ್ನೆಗೆ, ವ್ಯಕ್ತಿಯ ಸಾಮರ್ಥ್ಯವನ್ನು ವೃದ್ಧಿಸುವುದಕ್ಕಾಗಿ ಶಿಕ್ಷಣ ಬೇಕು ಎನ್ನುವ ಸರಳ ಉತ್ತರ ಇದೆ. ಆದಾಯ ಗಳಿಸುವ ಸಾಮರ್ಥ್ಯವನ್ನು ವೃದ್ಧಿಸುವುದು ಒಂದು ಉದ್ದೇಶ. ಗಳಿಸಿದ್ದನ್ನು ಬಳಸಿಕೊಂಡು ಹೇಗೆ ಬದುಕಬೇಕೆಂದು ಪಾಠ ಮಾಡುವುದು ಎರಡನೇ ಉದ್ದೇಶ. ಮೊದಲನೆಯದ್ದು ಆದಾಯ ಗಳಿಸುವ ಪರಿಣತಿಗೆ (ಸ್ಕಿಲ್) ಸಂಬಂಧಿಸಿದರೆ, ಎರಡನೆಯದ್ದು ಮೌಲ್ಯಕ್ಕೆ ಸಂಬಂಧಿಸಿದೆ. ಈ ದೃಷ್ಟಿಯಿಂದ ನೋಡಿದರೆ ಹಿಂದಿನ ನೀತಿಗೂ ಹೊಸ ಶಿಕ್ಷಣ ನೀತಿಗೂ ವಿಶೇಷ ವ್ಯತ್ಯಾಸ ಇಲ್ಲ. ಅಂದರೆ ಎರಡೂ ವ್ಯಕ್ತಿಯ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶಕ್ಕೆ ಹೆಚ್ಚಿನ ಮಹತ್ವ ನೀಡಿವೆ. ಹೊಸ ಶಿಕ್ಷಣ ನೀತಿಯಲ್ಲಿ ಸೃಜನಶೀಲತೆ, ವಿಮರ್ಶಾತ್ಮಕ ದೃಷ್ಟಿಕೋನ ಬೆಳೆಸುವುದರ ಬಗ್ಗೆ ಉಲ್ಲೇಖಗಳಿದ್ದರೂ ಅವು ನೀತಿಯ ಮೂಲ ಆಶಯವಾಗಿಲ್ಲ.

ಶಿಕ್ಷಣದಿಂದ ವ್ಯಕ್ತಿಯ ‘ದುಡಿದು ಗಳಿಸುವ ಸಾಮರ್ಥ್ಯ’ ವೃದ್ಧಿ ಆದ ಕೂಡಲೇ ಅವರ ಬದುಕಿನ ಸಾಧ್ಯತೆಗಳು ಹೆಚ್ಚಬಹುದೇ? ಶಿಕ್ಷಣ ನೀಡಿದ ‘ಮೌಲ್ಯ’ಕ್ಕೆ ಅನುಗುಣವಾಗಿ ಶಿಕ್ಷಿತರು ಬದುಕು ಕಟ್ಟಿಕೊಳ್ಳಬಹುದೇ ಎನ್ನುವ ಪ್ರಶ್ನೆಗಳಿಗೆ ಸಕಾರಾತ್ಮಕ ಉತ್ತರ ಕಷ್ಟ. ಏಕೆಂದರೆ ಈಗಾಗಲೇ ನಮ್ಮ ಮುಂದೆ ಕೋಟಿಗಟ್ಟಲೆ ಶಿಕ್ಷಿತ ನಿರುದ್ಯೋಗಿಗಳಿದ್ದಾರೆ. ಬದುಕಿನ ಸಾಧ್ಯತೆಗಳನ್ನು ಹೆಚ್ಚಿಸಿ ಕೊಳ್ಳುವಲ್ಲಿ ಶಿಕ್ಷಣದ ಸಾಮರ್ಥ್ಯಕ್ಕಿಂತ ಹುಟ್ಟಿನಿಂದ ಬಂದ ಅನುಕೂಲಗಳು ಹೆಚ್ಚಿನ ಪ್ರಭಾವ ಬೀರುತ್ತಿವೆ. ಶಿಕ್ಷಣ ಪ್ರತಿಪಾದಿಸುವ ಮೌಲ್ಯಗಳನ್ನು, ಹುಟ್ಟಿನಿಂದ ಬಂದ ಮೌಲ್ಯಗಳು ದಿನಾ ಉಲ್ಲಂಘಿಸುತ್ತಿರುವುದನ್ನು ನೋಡುತ್ತಿದ್ದೇವೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವ್ಯಕ್ತಿಯ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶ ಹೊಸ ಶಿಕ್ಷಣ ನೀತಿ ಬಯಸುವ ‘ತಳಸ್ತರವನ್ನು ಬೆಂಬಲಿಸುವ’ (ಈಕ್ವಿಟಿ), ‘ಎಲ್ಲರನ್ನೂ ಒಳಗೊಳ್ಳುವ’ (ಇನ್‍ಕ್ಲೂಸಿವ್) ಮತ್ತು ‘ಎಲ್ಲರಿಗೂ ಲಭ್ಯವುಳ್ಳ’ (ಆ್ಯಕ್ಸಸ್) ಶಿಕ್ಷಣ ವ್ಯವಸ್ಥೆ ಮತ್ತು ಸಮಾಜವನ್ನು ರೂಪಿಸುವುದು ಕಷ್ಟ. ಏಕೆಂದರೆ ವ್ಯಕ್ತಿಯ ಬದುಕುವ ಸಾಧ್ಯತೆಗಳನ್ನು ಶಿಕ್ಷಣ ರೂಪಿಸುವುದಕ್ಕಿಂತ ಹೆಚ್ಚು ಹೊರಗಿನ ಪರಿಸರ ರೂಪಿಸುತ್ತಿದೆ.

ಈ 70 ವರ್ಷಗಳಲ್ಲಿ ಶಿಕ್ಷಣ ತನ್ನ ಆದರ್ಶಕ್ಕೆ ಅನುಗುಣವಾಗಿ ಸಮಾಜವನ್ನು ರೂಪಿಸುವ ಬದಲು ಸಮಾಜ ತನ್ನ (ಬಲಾಢ್ಯರ) ಆಸಕ್ತಿಗೆ ಅನುಸಾರ ಶಿಕ್ಷಣ ವನ್ನು ರೂಪಿಸಿದೆ. ಈ ಬೆಳವಣಿಗೆಯನ್ನು ದೇಶೀಯತೆ, ಸ್ಥಳೀಯತೆ, ನಮ್ಮ ಪರಂಪರೆ, ಸಂಸ್ಕೃತಿ ಇತ್ಯಾದಿ ನೆಲೆಯಲ್ಲಿ ಸ್ವೀಕರಿಸುತ್ತಾ ಬಂದಿದ್ದೇವೆ.

ಇಂತಹ ಸಂದರ್ಭದಲ್ಲಿ ಹೊಸ ಶಿಕ್ಷಣ ನೀತಿ ಬಯಸುವ ಎಲ್ಲರನ್ನೂ ಒಳಗೊಳ್ಳುವ, ತಳಸ್ತರದವರನ್ನು ಬೆಂಬಲಿಸುವ ಮತ್ತು ಎಲ್ಲರಿಗೂ ಲಭ್ಯವಾಗುವ ಶಿಕ್ಷಣ ವ್ಯವಸ್ಥೆ ಮತ್ತು ಸಮಾಜ ರೂಪುಗೊಳ್ಳಬೇಕಾದರೆ ಶಿಕ್ಷಣದ ಉದ್ದೇಶ- ಜ್ಞಾನ ಸೃಷ್ಟಿ ಮತ್ತು ಜ್ಞಾನ ವರ್ಗಾವಣೆ ಆಗಬೇಕು. ಇಲ್ಲಿ ಜ್ಞಾನ ಎಂದರೇನು ಮತ್ತು ಅದರ ಸೃಷ್ಟಿ ಹೇಗಾಗುತ್ತದೆ ಎನ್ನುವ ಎರಡು ಪ್ರಮುಖ ಪ್ರಶ್ನೆಗಳಿವೆ. ಸತ್ಯ ಎಂದು ಸಾಧಿಸಿ ತೋರಿಸಬಹುದಾದ ನಂಬಿಕೆಯನ್ನು ಜ್ಞಾನ ಎನ್ನಬಹುದು. ದಿನನಿತ್ಯದ ಬದುಕಿನಲ್ಲಿ ಸಾಮಾನ್ಯವಾಗಿ ಯಾವುದನ್ನು ನಾವು ಸತ್ಯವೆಂದು ನಂಬುತ್ತೇವೆ? ಬರುತ್ತೇನೆಂದು ಬಂದಾಗ, ಮಾಡುತ್ತೇನೆಂದು ಮಾಡಿದಾಗ, ಆಗುವುದಿಲ್ಲ ಎನ್ನುವುದು ಆಗದಿರುವಾಗ, ಆಗುತ್ತದೆ ಎನ್ನುವುದನ್ನು ಆಗುಮಾಡಿದಾಗ ನಂಬಿಕೆ ಸೃಷ್ಟಿ ಆಗುತ್ತದೆ. ಅಂದರೆ ಮಾತು ಮತ್ತು ಕೃತಿ ನಡುವೆ ಸಂಬಂಧ ಏರ್ಪಟ್ಟಾಗ ನಂಬಿಕೆ ಸೃಷ್ಟಿ ಆಗುತ್ತದೆ. ವ್ಯಕ್ತಿಯೊಬ್ಬರಿಗೆ ನಿರ್ದಿಷ್ಟ ಮಾರ್ಗದಲ್ಲಿ ಸತ್ಯದರ್ಶನ ಆಗಿದೆ ಎನ್ನುವುದನ್ನು ಮತ್ತೊಬ್ಬರು ನಂಬಬೇಕಾದರೆ ಅವರಿಗೂ ಅದೇ ಮಾರ್ಗದಲ್ಲಿ ಸತ್ಯದರ್ಶನ ಆದಾಗ ಸತ್ಯದ ನಂಬಿಕೆ ಸೃಷ್ಟಿ ಆಗುತ್ತದೆ. ಇಲ್ಲಿ ಸತ್ಯದ ಪ್ರತಿಪಾದನೆಯನ್ನು ಪ್ರಶ್ನಿಸುವುದು, ಪರೀಕ್ಷಿಸಿ, ಪ್ರಯೋಗಿಸಿ ತಮಗೂ ಸತ್ಯದರ್ಶನ ಆದ ನಂತರ ಸತ್ಯದ ನಂಬಿಕೆ ಸೃಷ್ಟಿ ಆಗುವುದು ಮುಖ್ಯ. ಅಂದರೆ ಪ್ರಶ್ನೆ, ಪರೀಕ್ಷೆ, ಪ್ರಯೋಗ, ಪರಾಮರ್ಶೆಗಳು ಸತ್ಯದ ನಂಬಿಕೆ ಸೃಷ್ಟಿಯ ಆಧಾರಸ್ತಂಭಗಳು.

ಪರೀಕ್ಷೆ, ಪ್ರಯೋಗ, ಪರಾಮರ್ಶೆ ಇವೆಲ್ಲವೂ ಆರಂಭ ವಾಗುವುದು ಪ್ರಶ್ನೆಯಿಂದ. ಪ್ರಶ್ನೆ ಏಕೆ ಹುಟ್ಟುತ್ತದೆ? ವ್ಯಕ್ತಿಯ ಒಳಗಿನ ಅಥವಾ ಹೊರಗಿನ ಸ್ಥಿತಿಗೆ ಅಥವಾ ಬೆಳವಣಿಗೆಗೆ ಈಗಾಗಲೇ ಇರುವ ವಿವರಣೆ ಸಮಾಧಾನ ತರದಿದ್ದರೆ ಪ್ರಶ್ನೆ ಹುಟ್ಟುತ್ತದೆ. ಈಗಾಗಲೇ ಇರುವ ವಿವರಣೆಗಿಂತ ಭಿನ್ನವಾದ ವ್ಯಕ್ತಿಯ ಸ್ವತಂತ್ರ ಆಲೋಚನೆ ಅಸಮಾಧಾನಕ್ಕೆ ಕಾರಣವಾಗುತ್ತದೆ. ಹೀಗೆ ಸ್ವತಂತ್ರ ಆಲೋಚನೆ ಪ್ರಶ್ನೆಯ ಬುನಾದಿ.

ವ್ಯಕ್ತಿ ಸ್ವಾತಂತ್ರ್ಯವುಳ್ಳ ಪರಿಸರದಲ್ಲಿ ಸ್ವತಂತ್ರ ಆಲೋಚನೆ ಬೆಳೆದಷ್ಟು ವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸುವ ಪರಿಸರದಲ್ಲಿ ಬೆಳೆಯಲು ಸಾಧ್ಯವಿಲ್ಲ. ಇದೇ ರೀತಿಯಲ್ಲಿ ಮನಸ್ಸಲ್ಲಿರುವ ಪ್ರಶ್ನೆ ಸಾರ್ವಜನಿಕಗೊಳ್ಳಬೇಕಾದರೆ (ಹೊರಗೆ ಪ್ರಕಟವಾಗಬೇಕಾದರೆ) ಪರಿಣಾಮದ ಬಗ್ಗೆ ಚಿಂತೆ ಇರಬಾರದು. ಅಂದರೆ ಪ್ರಶ್ನೆಯ ಪರಿಣಾಮ ಏನೇ ಆದರೂ (ಸಕಾರಾತ್ಮಕ ಅಥವಾ ನಕಾರಾತ್ಮಕ) ಅದು ವ್ಯಕ್ತಿಯ ಅಸ್ತಿತ್ವವನ್ನು ಅಲುಗಾಡಿಸು ವುದಿಲ್ಲ ಎನ್ನುವ ಆತ್ಮವಿಶ್ವಾಸ ಇದ್ದಾಗ ಪ್ರಶ್ನೆ ಸಾರ್ವಜನಿಕ ಗೊಳ್ಳುತ್ತದೆ. ಸಮಾನತೆಯ ಪ್ರಜ್ಞೆ ಮಾತ್ರ ಇಂತಹ ಆತ್ಮವಿಶ್ವಾಸವನ್ನು ಕೊಡಲು ಸಾಧ್ಯ. ಅಂದರೆ ಪರಿಸರದಲ್ಲಿ ಸಮಾನತೆ ಇದ್ದಾಗ ಪ್ರಶ್ನೆಗಳು ಸಾರ್ವಜನಿಕಗೊಳ್ಳುತ್ತವೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗಳು ಕಾನೂನಿನಿಂದಲೇ ಆಚರಣೆಗೆ ಬರುವ ಸಂಗತಿಗಳಲ್ಲ. ಇವನ್ನು ಪೋಷಿಸಿ ಬೆಳೆಸುವ ಸಾಂಸ್ಕೃತಿಕ ಪರಿಸರದ ಅಥವಾ ಭ್ರಾತೃತ್ವದ ಅವಶ್ಯಕತೆ ಇದೆ.

ಇವೆಲ್ಲದರ ಹಿನ್ನೆಲೆಯಲ್ಲಿ ತೀರ್ಮಾನಿಸುವುದಾದರೆ ಶಿಕ್ಷಣದ ಉದ್ದೇಶ ಈಡೇರಬೇಕಾದರೆ– ಒಂದು, ಶಿಕ್ಷಣದ ಉದ್ದೇಶ ‘ಜ್ಞಾನ ಸೃಷ್ಟಿ ಮತ್ತು ಜ್ಞಾನ ವರ್ಗಾವಣೆ’ ಆಗಬೇಕು ಮತ್ತು ಎರಡು, ಹೊರಗಿನ ‘ಪರಿಸರದಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳು ಜೀವಂತ’ ಇರಬೇಕು. ಆದರೆ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ- ಈ ಮೂರು ಮೌಲ್ಯಗಳನ್ನು ಅಲ್ಲಗಳೆಯುವ ಶಕ್ತಿಗಳು ಸಮಾಜದಲ್ಲಿ ಕಾರುಬಾರು ಮಾಡುತ್ತಿವೆ. ಅಧಿಕಾರದಲ್ಲಿರುವವರು (ಹಿರಿತನದ, ಸಾಂಸ್ಕೃತಿಕ ಅಧಿಕಾರಗಳನ್ನು ಸೇರಿಸಿಕೊಂಡು) ಹೇಳಿದ್ದಾರೆನ್ನುವ ಕಾರಣಕ್ಕೆ ಸತ್ಯ ಎಂದು ನಂಬುವ, ಪರಂಪರೆಯಿಂದ ಬಂದಿದೆ ಅಥವಾ ಶತಮಾನಗಳಿಂದ ಇದೆ ಅಥವಾ ವೇದ, ಉಪನಿಷತ್‍ಗಳಲ್ಲಿ, ರಾಮಾಯಣ, ಮಹಾಭಾರತದಲ್ಲಿದೆ ಅಥವಾ ಕುರಾನ್, ಬೈಬಲ್‍ನಲ್ಲಿದೆ ಎನ್ನುವ ಕಾರಣಕ್ಕೆ ಸತ್ಯ ಎಂದು ನಂಬುವ ಮತ್ತು ಬಹುತೇಕರು ನಂಬಿದ್ದಾರೆ ಎನ್ನುವ ಕಾರಣಕ್ಕೆ ಸತ್ಯ ಎಂದು ನಂಬುವ ಪರಿಸರ ಇದೆ. ಬಹುತೇಕರ ನಂಬಿಕೆಯ ನೆಲೆಯಲ್ಲಿ ಸತ್ಯ ತೀರ್ಮಾನ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಕೋರ್ಟ್ ಕೂಡ ಸಾಕ್ಷ್ಯ, ಪುರಾವೆಗಳನ್ನು ಅಲ್ಲಗಳೆದು ಬಹುತೇಕರ ನಂಬಿಕೆ ನೆಲೆಯಲ್ಲಿ ಸತ್ಯ ತೀರ್ಮಾನ ಮಾಡುವ ಮಟ್ಟಕ್ಕೆ ಹೋಗಿದೆ. ಹಾಗೆಂದು ಇಲ್ಲೆಲ್ಲ ಸತ್ಯ ಇಲ್ಲ ಎನ್ನುವ ವಾದ ನನ್ನದಲ್ಲ. ಆದರೆ ಇವುಗಳಲ್ಲಿರುವ ಸತ್ಯವನ್ನು ಪ್ರಶ್ನಿಸುವ, ಪರೀಕ್ಷಿಸುವ, ಪರಾಮರ್ಶಿಸುವ ಪರಿಸರ ಇಲ್ಲ ಎನ್ನುವ ವಾದ ನನ್ನದು.

ಈ ಬಗೆಯ ಸತ್ಯದ ನಂಬಿಕೆಗಳನ್ನು ಪ್ರಶ್ನಿಸುವ, ಪರಾಮರ್ಶಿಸುವ ಕೆಲಸ ಶಿಕ್ಷಣ ಕ್ಷೇತ್ರದ ಶಕ್ತಿಗೆ ಮೀರಿದ್ದು. ಶಿಕ್ಷಣ ಕ್ಷೇತ್ರದಲ್ಲಿ ನಡೆಯಬೇಕೆಂದು ಬಯಸುವ ಪ್ರಶ್ನೆ, ಪರಾಮರ್ಶೆಗಳು ಹೊರಗಿನ ಎಲ್ಲ ಕ್ಷೇತ್ರಗಳಲ್ಲೂ ನಡೆಯಬೇಕಾಗಿದೆ. ಹಾಗಾದರೆ ಮಾತ್ರ ಶಿಕ್ಷಣ ಸೃಷ್ಟಿಸುವ ಸಾಮರ್ಥ್ಯಗಳನ್ನು ಬಳಸುವ ಪರಿಸರ ಸೃಷ್ಟಿ ಆಗಲು ಸಾಧ್ಯ. ಇವೆಲ್ಲ ಘಟಿಸಿದರೆ ಮಾತ್ರ ತಳಸ್ತರವನ್ನು ಪ್ರೀತಿಯಿಂದ ಕಾಣುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ರೂಪಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT