ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ಆರ್.‌ಅನಂತರಾಮು ಲೇಖನ | ಆಕಾಶದಿಂದ ಧರೆಗಿಳಿದ ಶಿಲೆ

ಉಲ್ಕೆಗಳ ಮಹತ್ವವಿರುವುದು ವಿ‍ಶ್ವದ ವಿಕಾಸದ ಚರಿತ್ರೆಯನ್ನು ಪುನರ್ವಿಮರ್ಶಿಸುವಂತೆ ಮಾಡುವಲ್ಲಿ
Last Updated 6 ಮಾರ್ಚ್ 2023, 19:32 IST
ಅಕ್ಷರ ಗಾತ್ರ

ಈ ಫೆಬ್ರುವರಿ ತಿಂಗಳಲ್ಲಷ್ಟೇ ‘ಹಸಿರು ಧೂಮಕೇತು’ ಭೂಮಿಯಿಂದ ಸುಮಾರು ನಾಲ್ಕು ಕೋಟಿ ಕಿಲೊಮೀಟರ್‌ ಆಚೆ ನಭದಲ್ಲಿ ಕಾಣಿಸಿಕೊಂಡು, ಜಗತ್ತಿನಾದ್ಯಂತ ಆಕಾಶ ವೀಕ್ಷಕರಲ್ಲಿ ಸಂಚಲನ ಉಂಟುಮಾಡಿತ್ತು. ಅದು ಬಂದ ದಾರಿಯಲ್ಲೇ ಹಿಂತಿರುಗಿದಾಗ ಜಗತ್ತು ಇನ್ನೊಂದು ವಿಚಾರದಲ್ಲೂ ವಿಸ್ಮಯಪಟ್ಟಿತ್ತು. ಮತ್ತೆ ಇದೇ ಧೂಮಕೇತು ಆಕಾಶದಲ್ಲಿ ಕಾಣಿಸಿಕೊಳ್ಳುವುದು ಮುಂದಿನ 50,000 ವರ್ಷಗಳ ನಂತರ. ಆ ಹೊತ್ತಿಗೆ ಈ ಭೂಮಿ ಏನಾಗಿರುತ್ತದೋ ಊಹೆಗೆ ನಿಲುಕದು. ಮನುಷ್ಯರು ಇಲ್ಲಿ ಉಳಿದಿರುತ್ತಾರೋ ಅಥವಾ ಅನ್ಯಗ್ರಹಗಳತ್ತ ಮುಖಮಾಡುತ್ತಾರೋ ಅದು ಕೂಡ ವಿಜ್ಞಾನಕಥೆಗೆ ವಸ್ತುವಾಗಬಹುದು, ಅಷ್ಟೆ...

ಆಕಾಶ ಆಗಿಂದಾಗ್ಗೆ ವಿಸ್ಮಯಗಳ ಸರಣಿಯನ್ನೇ ತೆರೆಯುತ್ತದೆ. ಇತ್ತೀಚಿನ ಸೇರ್ಪಡೆ ಎಂದರೆ, ಗುಜರಾತಿನಲ್ಲಿ ಹಿಂದಿನ ವರ್ಷದ ಆಗಸ್ಟ್‌ ತಿಂಗಳಲ್ಲಿ ರಾತ್ರಿಯಾಕಾಶದಲ್ಲಿ ಬೆಂಕಿಯ ಗೀರು ಮೂಡಿಸುತ್ತ ಬಿದ್ದ ಉಲ್ಕೆ ಎರಡು ಭಾಗಗಳಾಗಿ ನೆಲ ತಾಕಿದೊಡನೆ ಚೂರುಚೂರಾಗಿ ಹರಡಿಹೋದದ್ದು. ಬಹುತೇಕ ಉಲ್ಕೆಗಳು ಭೂಮಿಗೆ ಬೀಳುವುದೇ ವಿರಳ. ಹೆಚ್ಚಿನ ಪಾಲು ಆಕಾಶದಲ್ಲಿ ವಾಯುಗೋಳವನ್ನು ಪ್ರವೇಶಿಸುವಾಗ ಆ ಶಾಖಕ್ಕೆ ಉರಿದು ಭಸ್ಮವಾಗುವುದು ಸರ್ವೇಸಾಮಾನ್ಯ.

ಭೂಮಿಗೆ ಬೀಳುವ ಉಲ್ಕೆಗಳು ಸಮುದ್ರ ಸೇರುವುದೇ ಹೆಚ್ಚು. ಅಂದರೆ ಅವನ್ನು ಪತ್ತೆಹಚ್ಚುವುದು ಅಸಾಧ್ಯ. ಕಾಡಲ್ಲಿ ಬಿದ್ದರೂ ಅವು ಸಾಧಾರಣ ಕಲ್ಲಿನಂತೆ ಕಾಣುವುದರಿಂದ ನಮ್ಮ ಕಣ್ಣುಗಳನ್ನು ವಂಚಿಸುವುದೇ ಹೆಚ್ಚು. ಧೂಮಕೇತುಗಳಾದರೋ ದೃಶ್ಯ ಮಾತ್ರದಿಂದಲೇ ಮನುಷ್ಯನನ್ನು ಆಕರ್ಷಿಸುತ್ತವೆ. ಆದರೆ ಆಕಾಶದಿಂದ ಭರ್‍ರೆಂದು ತೂರಿಬರುವ ಉಲ್ಕೆಗಳು ಅವು ಬಿದ್ದ ಸುತ್ತಮುತ್ತಲ ಪ್ರದೇಶದಲ್ಲಿ ಮಾತ್ರ ಸುದ್ದಿಮಾಡುತ್ತವೆ. ಎಲ್ಲರಿಗೂ ಆ ದರ್ಶನ ಭಾಗ್ಯವಿಲ್ಲ.

ಹಿಂದಿನ ಆಗಸ್ಟ್‌ ತಿಂಗಳ 17ರಂದು ತೂರಿಬಂದ ಉಲ್ಕಾ ತುಂಡುಗಳು ಭೂಮಿಯನ್ನು ತಲುಪುವ ಮೊದಲೇ ಎರಡು ಭಾಗಗಳಾಗಿ, ಒಂದು ಭಾಗ ಗುಜರಾತಿನ ರಾಂತಿಲ ಎಂಬ ಹಳ್ಳಿ ಬಳಿ ಬೇವಿನಮರಕ್ಕೆ ತಾಕಿ ಛಿದ್ರಛಿದ್ರವಾಯಿತು. ಇನ್ನೊಂದು ತುಂಡು ಅಲ್ಲಿಂದ 10 ಕಿಲೊಮೀಟರ್‌ ಆಚೆಗೆ ರಾವೆಲ್‌ ಎಂಬ ಹಳ್ಳಿ ಬಳಿ ಬಿದ್ದು ಅದೂ ಚೂರಾಯಿತು. ಸುದ್ದಿ ತಲುಪುತ್ತಲೇ ಅಹಮದಾಬಾದಿನ ಭೌತ ಸಂಶೋಧನಾ ಪ್ರಯೋಗಾಲಯದ ವಿಜ್ಞಾನಿಗಳು ದೌಡಾಯಿಸಿದರು. ಇದೇನೂ ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯ ತಂದಿರಲಿಲ್ಲ. ಆದರೆ ಅದರ ಮಹತ್ವವಿರುವುದು ವಿ‍ಶ್ವದ ಉಗಮ, ವಿಕಾಸದ ಚರಿತ್ರೆಯನ್ನು ಆಗಾಗ ಪುನರ್ವಿಮರ್ಶಿಸುವಂತೆ ಮಾಡುವಲ್ಲಿ.

ಇದಾದ ಐದು ತಿಂಗಳ ನಂತರ ವಿಜ್ಞಾನಿಗಳು ಈ ಉಲ್ಕಾ ಚೂರುಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ಸಂಭ್ರಮಪಟ್ಟಿದ್ದಾರೆ. ಈಗ ಅದು ಜನವರಿ 25ರ ‌‘ಕರೆಂಟ್ ಸೈನ್ಸ್‌’ ಪತ್ರಿಕೆಯಲ್ಲಿ ಪ್ರಕಟವಾಗಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇದು ವಿಶ್ವದಲ್ಲಿ ಆಕ್ಸಿಜನ್‌ ಇಲ್ಲದ ಅಥವಾ ಅತಿ ಕಡಿಮೆ ಇದ್ದ ಕಾಲದಲ್ಲಿ ರೂಪುಗೊಂಡಿದ್ದಂತೆ. ಇದರಲ್ಲಿರುವ ಖನಿಜಗಳು ಇದನ್ನೇ ಪ್ರತಿಪಾದಿಸುತ್ತಿವೆ. ಅಂದರೆ ಈ ಉಲ್ಕಾ ಚೂರುಗಳು ವಿರಳಾತಿವಿರಳ. ವೈಜ್ಞಾನಿಕವಾಗಿ ಇವನ್ನು ‘ಅಗ್ನಿಶಿಲಾ ಚೂರುಗಳು’ ಎನ್ನುವುದುಂಟು. ಕೈಗೆ ಸಿಕ್ಕಿದ್ದು ಒಂದು ಕಡೆ 20 ಗ್ರಾಂ, ಇನ್ನೊಂದು ಕಡೆ 200 ಗ್ರಾಂ. ಅವುಗಳನ್ನು ಎಲ್ಲ ತಪಾಸಣೆಗೂ ಒಳಪಡಿಸಿ, ವಿಜ್ಞಾನಿಗಳು ಗುಟ್ಟನ್ನು ಹೊರಹಾಕಿದ್ದಾರೆ.

ಮೊದಲ ಬಾರಿಗೆ ಈ ಬಗೆಯ ಉಲ್ಕಾಚೂರು ಸಿಕ್ಕಿದ್ದು 1836ರಲ್ಲಿ, ಫ್ರಾನ್ಸ್‌ನ ನೈಯಾನ್‌ ಬಳಿ. ಆನಂತರ ಜಗತ್ತಿನ 12 ಕಡೆ ಇಂಥ ಉಲ್ಕಾ ಚೂರುಗಳು ಪತ್ತೆಯಾಗಿವೆ. ಜಗತ್ತಿನ ಬೇರೆ ಬೇರೆ ಕಡೆ ಇದೇ ಬಗೆಯ ಉಲ್ಕೆಗಳು ಖಾಸಗಿ ಸಂಗ್ರಹಕಾರರ ಕೈಸೇರಿವೆ. ಅಲ್ಲಿ ಅವರು ಪ್ರತೀ ಗ್ರಾಂ ಚೂರನ್ನೂ ಮಾರಾಟಕ್ಕಿಟ್ಟಿದ್ದಾರೆ. ಹಲವಾರು ಅಂತರ್ಜಾಲ ತಾಣಗಳು ಉಲ್ಕಾ ಶಿಲೆಗಳನ್ನು ಮಾರಾಟ ಮಾಡುತ್ತಿವೆ. ಅವಕ್ಕೆ ಕಿಮ್ಮತ್ತು ಎಷ್ಟೆಂದರೆ, ಬರೀ ಒಂದು ಗ್ರಾಂ ಉಲ್ಕಾ ಶಿಲೆಗೆ ಕನಿಷ್ಠ ₹ 4,000 ಬೆಲೆ ಇದೆ.

ಬುಧಗ್ರಹವನ್ನು ಹೊರತುಪಡಿಸಿ ಇನ್ನು ಯಾವುದೇ ಮೂಲದಿಂದ ಉಲ್ಕೆಗಳು ಭೂಮಿಗೆ ಅಪ್ಪಳಿಸಿದರೂ ಈಗ ಥಟ್ಟೆಂದು ಅದರ ಮೂಲವನ್ನು ಹೇಳಿಬಿಡಬಹುದು. ಅಪೋಲೊ ಯಾತ್ರೆಯಲ್ಲಿ ಅಮೆರಿಕದ ನಾಸಾ ಸಂಸ್ಥೆ ಒಟ್ಟು 382 ಕಿಲೊಗ್ರಾಂ ಚಂದ್ರಶಿಲೆಯನ್ನು ತಂದಿದೆ. ಅದರ ಎಲ್ಲ ಮಗ್ಗುಲನ್ನೂ ಅಧ್ಯಯನ ಮಾಡಿದೆ. ಹಾಗೆಯೇ ಮಂಗಳಗ್ರಹದ ಮೇಲಿಳಿದ ರೊಬಾಟ್‌ಗಳು ಅಲ್ಲಿನ ಶಿಲೆಗಳನ್ನು ಸ್ಥಳದಲ್ಲೇ ವಿಶ್ಲೇಷಣೆ ಮಾಡಿ, ಅವು ಯಾವ ಬಗೆಯ ಶಿಲೆ ಎಂಬ ವರದಿಯನ್ನೇ ಕೊಟ್ಟಿವೆ. ಮಂಗಳಗ್ರಹ ಮತ್ತು ಗುರುಗ್ರಹದ ನಡುವೆ ಇರುವ ಕ್ಷುದ್ರಗ್ರಹ ಪಟ್ಟಿಯಲ್ಲಿ ಗೋಲಿ ಗಾತ್ರದಿಂದ ಹಿಡಿದು ದೊಡ್ಡ ಬೆಟ್ಟದ ಗಾತ್ರದವರೆಗೆ ಅಂಡಲೆಯುತ್ತಿರುವ
ಕ್ಷುದ್ರಗ್ರಹಗಳ ಇಡೀ ಜಾತಕವೇ ವಿಜ್ಞಾನಿಗಳ ಕೈಯಲ್ಲಿದೆ. ಈ ಒಂದೊಂದರ ವೈಶಿಷ್ಟ್ಯವೂ ಬೇರೆ ಬೇರೆ. ಬೇಕಾದರೆ ಇದನ್ನು ಬೆರಳಚ್ಚು ಎನ್ನಬಹುದು.

ಕ್ಷುದ್ರಗ್ರಹ ಪಟ್ಟಿಯಲ್ಲಿ ಬರೀ ಶಿಲೆಯಿಂದಾದ ಕ್ಷುದ್ರಗ್ರಹಗಳೂ ಇವೆ, ನಿಕ್ಕಲ್‌- ಕಬ್ಬಿಣದಿಂದ ಕೂಡಿರುವ ಕ್ಷುದ್ರಗ್ರಹಗಳೂ ಉಂಟು. ಅಂಥ ಮೂಲದಿಂದ ಬಂದ ಉಲ್ಕಾ ಚೂರುಗಳನ್ನು ಅಧ್ಯಯನ ಮಾಡಿಯೇ ಭೂಗರ್ಭವು ಲೋಹದಿಂದ ಕೂಡಿದೆ ಎಂಬ ಅಭಿಪ್ರಾಯವನ್ನು ವಿಜ್ಞಾನಿಗಳು ತಳೆದರು.

ಹಾಗೆ ನೋಡಿದರೆ ಯಾವ ಉಲ್ಕಾ ಚೂರುಗಳೂ ಏಕಾಏಕಿ ಭೂಮಿಗೆ ಬೀಳುವುದಿಲ್ಲ. ಅವು ಕೂಡ ಸಹಸ್ರಾರು ವರ್ಷಗಳ ಕಾಲ ಕಕ್ಷೆಯಲ್ಲಿ ಸುತ್ತಿ, ಭೂಮಿಯ ಗುರುತ್ವ ಸೆಳೆತಕ್ಕೆ ಸಿಕ್ಕಾಗ ಮಾತ್ರ ಭರ್‍ರೆಂದು ತೂರಿಬರುತ್ತವೆ. 1984ರಲ್ಲಿ ಪಶ್ಚಿಮ ಅಂಟಾರ್ಕ್ಟಿಕದ ಹಿಮದ ಹಾಳೆಯ ಮೇಲೆ ಬಿದ್ದಿದ್ದ ಉಲ್ಕೆಯ ತುಂಡೊಂದನ್ನು ಅಮೆರಿಕದ ಜಾನ್ಸ್‌ ಸ್ಪೇಸ್‌ ಸೆಂಟರ್‌ನ ವಿಜ್ಞಾನಿಗಳು ಹೆಕ್ಕಿ ನೋಡಿದಾಗ ವಿಸ್ಮಯವೊಂದು ಕಾದಿತ್ತು. ಮಂಗಳಗ್ರಹದಲ್ಲಿ ನೀರು ಹರಿಯುತ್ತಿದ್ದ ಕಾಲಘಟ್ಟದಲ್ಲಿ, ಅಂದರೆ ಸುಮಾರು 400 ಕೋಟಿ ವರ್ಷಗಳ ಹಿಂದೆ ಯಾವುದೋ ಒಂದು ದೊಡ್ಡ ಉಲ್ಕೆ ಬಡಿದು 1.7 ಕೋಟಿ ವರ್ಷಗಳ ಹಿಂದೆ ಕಿತ್ತುಬಂದು ಸುಮಾರು 13,000 ವರ್ಷಗಳ ಹಿಂದೆ ಭೂಮಿಯ ಗುರುತ್ವಕ್ಕೆ ಸಿಕ್ಕಿ ಅಂಟಾರ್ಕ್ಟಿಕದ ಈ ಭಾಗದಲ್ಲಿ ಉಲ್ಕೆಯ ತುಣುಕು ಬಿದ್ದಿದೆ ಎಂದು ಲೆಕ್ಕಹಾಕಿದ್ದಾರೆ. ಅಲ್ಲಿಯವರೆಗೂ ಅದಕ್ಕೆ ತ್ರಿಶಂಕು ಸ್ಥಿತಿ.

ಈಗ ಅಹಮದಾಬಾದಿನ ಭೌತ ಸಂಶೋಧನಾ ಪ್ರಯೋಗಾಲಯದ ವಿಜ್ಞಾನಿಗಳು ಗುಜರಾತ್‌ ರಾಜ್ಯದಲ್ಲಿ ಬಿದ್ದ ಉಲ್ಕೆಯ ಬಗ್ಗೆ ಎಲ್ಲ ಪರೀಕ್ಷೆಗಳನ್ನೂ ನಡೆಸಿದ್ದಾರೆ. ಯಾವ ಮೂಲದಿಂದ ಬಂದಿದೆ ಎಂಬುದು ಇನ್ನೂ ಖಚಿತಪಟ್ಟಿಲ್ಲ. ಇದರಲ್ಲಿ ಅತಿ ಉಷ್ಣತೆಯಲ್ಲಿ ಮೈದಳೆದ ಖನಿಜಗಳು ಒಂದಕ್ಕೊಂದು ಹೆಣೆದುಕೊಂಡಿವೆ, ಥೇಟ್‌ ಜಜ್ಜಿಹೋದ ಪಾಕಂಪಪ್ಪಿನಂತೆ. ದಿಯೋದಾರ್‌ ಎಂಬ ತಾಲ್ಲೂಕಿಗೆ ಸೇರಿರುವ ಜಾಗದಲ್ಲಿ ಬಿದ್ದಿದ್ದರಿಂದ ಇದನ್ನು ‘ದಿಯೋದಾರ್‌ ಉಲ್ಕೆ’ ಎಂದೇ ನಾಮಕರಣ ಮಾಡಲಾಗಿದೆ.

ವಿಜ್ಞಾನಿಗಳು ಎರಡು ಬಗೆಯಲ್ಲಿ ಯೋಚಿಸುತ್ತಿದ್ದಾರೆ. ಒಂದು ಹಂಗೆರಿ ಬಳಿಯ ಈಗರ್‌ ಎಂಬಲ್ಲಿ 1982ರಲ್ಲಿ ಬಿದ್ದ ಉಲ್ಕೆಯನ್ನು ಇದು ಹೋಲುತ್ತದೆ. ಈ ಉಲ್ಕೆ ಭೂಮಿ ಮತ್ತು ಮಂಗಳನ ಕಕ್ಷೆಯನ್ನು ಛೇದಿಸುವ ಒಂದು ಗುಂಪಿನ ಕ್ಷುದ್ರಗ್ರಹಗಳಿಂದ ಕಿತ್ತುಬಂದದ್ದು. ಇನ್ನೊಂದು ಸಾಧ್ಯತೆ ಬಹುಶಃ ಬುಧಗ್ರಹದಿಂದ ಕಿತ್ತು ಬಂದಿರಬಹುದು. ಇದಕ್ಕೆ ಸಾಕ್ಷಿ ಇಲ್ಲ. ಆದರೆ ರಾಸಾಯನಿಕ ಸಂಯೋಜನೆ ಬುಧಗ್ರಹದ ಮೇಲ್ಮೈಗೆ ಹೋಲುತ್ತದೆ.

ಅಮೆರಿಕದ ಸ್ಮಿತ್‌ ಸೋನಿಯನ್‌ ಮ್ಯೂಸಿಯಂ ಆಫ್‌ ನ್ಯಾಚುರಲ್‌ ಹಿಸ್ಟರಿಯಲ್ಲಿ ಸುಮಾರು 35,000 ಉಲ್ಕಾ ಚೂರುಗಳ ಸಂಗ್ರಹವಿದೆ. ಅಲ್ಲಿನ ವಿಜ್ಞಾನಿಗಳು ಕೂಡ ಒಪ್ಪಿಕೊಂಡಿದ್ದಾರೆ. ‘ನಾವು ಇಡೀ ಸೌರಮಂಡಲದ ಹುಟ್ಟಿನ ಗುಟ್ಟನ್ನು ಹೇಳಬಲ್ಲೆವು. ಆದರೆ ಬುಧಗ್ರಹದ ಜಾತಕ ನಮ್ಮಲ್ಲಿಲ್ಲ’ ಎನ್ನುತ್ತಿದ್ದಾರೆ.

ಭಾರತದಲ್ಲಿ ಎಲ್ಲೇ ಉಲ್ಕಾ ಚೂರುಗಳು ಸಿಕ್ಕರೂ ಅವನ್ನು ಖಾಸಗಿಯಾಗಿ ಸಂಗ್ರಹಿಸುವಂತಿಲ್ಲ. ಬದಲು ಸರ್ಕಾರಕ್ಕೆ ವರದಿ ಮಾಡಬೇಕು. ಅಂತಿಮವಾಗಿ, ಅವು ಕೋಲ್ಕತ್ತದ ಇಂಡಿಯನ್‌ ಮ್ಯೂಸಿಯಂ ಸೇರುತ್ತವೆ. ಅಲ್ಲಿ ಸುಮಾರು 700ಕ್ಕೂ ಮಿಕ್ಕಿ ವೈವಿಧ್ಯಮಯ ಉಲ್ಕಾಶಿಲೆಗಳ ಸಂಗ್ರಹವಿದೆ. ಅಧ್ಯಯನ ಮಾಡುವವರಿಗೆ ಅವುಗಳ ವಿವರವೂ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT