‘ಏನರ ಅಡ್ಡಮಾತು ಹೇಳಬ್ಯಾಡ. ಹೈಡ್ರೋ ಜೆನ್, ಎಥೆನಾಲ್ ಹೀಂಗ ನಾಕೈದು ಹಸಿರು ಇಂಧನ ಬಳಕೆ ಜಾಸ್ತಿ ಮಾಡತೀವಿ, ಆವಾಗ ಪೆಟ್ರೋಲ್ ಮಾಯವಾಗತೈತಿ ಅಂತ ಗಡ್ಕರಿ ಮಾಮಾ ಹೇಳಿದ್ದು. ಹಂಗಾದರ ವಾಯು ಮಾಲಿನ್ಯ ಕಡಿಮೆಯಾಗತೈತಿ, ಮಂದಿ ಆರೋಗ್ಯ ಮಸ್ತ್ ಆಗತೈತಿ...’ ಬೆಕ್ಕಣ್ಣ ಹಗಲುಗನಸಿನಲ್ಲಿ ತೇಲುತ್ತಿತ್ತು.
‘ಐದ್ ವರ್ಸದಾಗೆ ಪೆಟ್ರೋಲ್ ಅಷ್ಟೇ ಅಲ್ಲಲೇ, ಅಡುಗೆ ಮನಿಯಿಂದ ಗ್ಯಾಸ್ ಸಿಲಿಂಡರ್ ಮಾಯವಾಗತೈತಿ. ಈಗಲೇ ಸಾವಿರದ ಐವತ್ತೈದಾಗೈತಿ... ಹಿಂಗೇ ಏರಿಕೋತ ಹೋದರೆ ಶ್ರೀಸಾಮಾನ್ಯರ ಹತ್ರ ಸಿಲಿಂಡರಿಗೆ ರೊಕ್ಕ ಎಲ್ಲಿರತೈತಿ? ಐದು ವರ್ಸದ ನಂತರ ಇನ್ನೂ ಏನೇನು ಮಾಯವಾಗತೈತೋ...’ ಎಂದೆ.
‘ಸರಿ, ಪಟ್ಟಿ ಮಾಡೂಣು ಬಾ. ಹೆಂಗಿದ್ರೂ ಪ್ರಧಾನಿ ಕುರ್ಚಿವಳಗ ಮೋದಿಮಾಮಾ ಇರತಾನ, ಭ್ರಷ್ಟಾಚಾರ ಈಗ ಚೂರುಪಾರು ಉಳಕೊಂಡಿರಾದು ಐದು ವರ್ಸದಾಗೆ ಪೂರ್ಣ ಮಂಗಮಾಯವಾಗತೈತಿ’ ಎಂದು ಉಲಿಯಿತು.
‘ಕರುನಾಡಿನಾಗೆ ನಲ್ವತ್ತು ಪರ್ಸೆಂಟ್ ಕಮಿಷನ್ ಹಿಂಗೇ ಏರಿಕೋತ ಹೋದ್ರೆ ಐದು ವರ್ಸದಾಗೆ ನೂರು ಪರ್ಸೆಂಟೇ ಆಗಬೌದು’ ನಾನು ಕುಟುಕಿದರೆ ಬೆಕ್ಕಣ್ಣ ‘ಆದ್ರೂ ನಲ್ವತ್ತು ಪರ್ಸೆಂಟ್ ಮಾಯವಾದಂಗೆ ಆತಿಲ್ಲೋ’ ಎಂದು ವಿತಂಡವಾದ ಹೂಡಿತು.
‘ಐದು ವರ್ಸದ ನಂತರ ವಿರೋಧ ಪಕ್ಷ, ಪ್ರಾದೇಶಿಕ ಪಕ್ಷಗಳು, ಭಿನ್ನ ಧ್ವನಿ, ಭಿನ್ನಾಭಿ ಪ್ರಾಯ ಇವೆಲ್ಲಾ ಮಾಯವಾಗಿ ಏಕಪಕ್ಷ, ಏಕಧ್ವನಿ ಇರತೈತೇನೋ’ ನಾನು ಚಿಂತೆಯಿಂದ ಹೇಳಿದೆ.
‘ಒಂದಂತೂ ಖರೇ... ಇನ್ನೈದು ವರ್ಸದ ನಂತರ ಉದ್ಯಮದ ವರ್ಣಮಾಲೆಯೊಳಗೆ ಅ-ಅಂ ಎರಡೇ ಅಕ್ಷರ ಇರತಾವು. ಅಂದರೆ ಅದಾನಿ-ಅಂಬಾನಿ ಇಬ್ಬರೇ ಇರತಾರ’ ಎನ್ನುತ್ತ ಖೊಳ್ಳನೆ ನಕ್ಕಿತು!