ತಿಂಗಳೇಶ ಸ್ನಾನ ಮುಗಿಸಿ ಬರುವುದನ್ನೇ ಕಾಯ್ತಿದ್ದ ಮಡದಿ ಬಹಳ ಉತ್ಸಾಹದಿಂದಿದ್ದಳು: ‘ರೀ... ಬದ್ರಿ ಫೋನ್ ಮಾಡಿದ್ರು. ಅರ್ಜೆಂಟಾಗಿ ಅವರ ಮನೆಗೆ ಹೋಗಬೇಕಂತೆ’.
‘ಯಾಕೆ? ಸಾಲ ವಾಪಸ್ ಕೊಡ್ತಾನಂತೇನು?’
‘ಅದ್ಕ ಇರ್ಬೇಕು. ಜಲ್ದೀ ಹೋಗಿ ಇಸಗೊಂಡು ಬರ್ರಿ’ ಹೆಂಡತಿ ಆಸೆ ಹುಟ್ಟಿಸಿ ಅವಸರಿಸಿದಳು.
ದೆಹಲಿ ವಿಮಾನ ಏರುವ ಸಚಿವಾಕಾಂಕ್ಷಿ ಶಾಸಕನಂತೆ ಅದೆಷ್ಟನೇ ಸಾರಿಯೋ ಬದ್ರಿ ಮನೆ ಕಡೆ ವಸೂಲಿಗೆ ಹೊರಟ ತಿಂಗಳೇಶ. ‘ಈ ಸಲನೂ ಸಿಎಮ್ಮರಂತೆ ಬರಿಗೈಯಲ್ಲಿ ಬರಬಾರದು ನೋಡ್ರಿ’ ಎಂದು ಹೆಂಡತಿ ಎಚ್ಚರಿಸಿದಳು.
ಬದ್ರಿ ಮನೆಯಲ್ಲಿ ಐ.ಟಿ. ರೇಡ್ ಮೌನ ಆವರಿಸಿತ್ತು. ತಿಂಗಳೇಶನ ಆಗಮನವನ್ನೂ ಗಮನಿಸದೆ ತಲೆಗೆ ಕೈಹೊತ್ತು ಕುಳಿತಿದ್ದರು ಬದ್ರಿ ದಂಪತಿ. ಕೋಣೆಯೊಳಗಿನಿಂದ ದುಃಖಿಸುವ ದನಿ. ಸಾಲ ಮರುಪಾವತಿ ಸುಳಿವೇ ಇಲ್ಲ. ತಿಂಗಳೇಶನೇ ಮೌನ ಮುರಿದ: ‘ಏನಾಯ್ತು?’
‘ಎಸ್ಎಸ್ಎಲ್ಸಿಯಲ್ಲಿ 80 ಪರ್ಸೆಂಟ್ ತಗೊಂಡು ಅಳಕೋತ ಕುಂತಾನ ನನ್ನ ಮಗ’.