‘ನೀನ್ ಏನೇ ಯೋಳು, ಇದ್ಯಾಕೋ ಸರಿ ಅನ್ಸಕಿಲ್ಲ, ಕಾನೂನು ಮಾಡೋದು, ಅದನ್ನ ಭಂಗ ಮಾಡಿದೋರನ್ನ ಕ್ಷಮ್ಸಿ ಸಕ್ರಮ ಮಾಡೋದು. ಇದೆಂತ ರಾಜ್ಯಭಾರ ಅಂತೀನಿ’.
‘ಎಲ್ಲಾ ದುಡ್ಡಿಗೋಸ್ಕರ! ಖಜಾನೆ ಬರಿದಾಗಲೆಲ್ಲಾ ಸರ್ಕಾರಗಳು ಇರೋ ಆಸ್ತಿ ಮಾರೋದು, ಅಕ್ರಮ– ಸಕ್ರಮ ಮಾಡೋದು, ಇಂತ ಸ್ಟಾಕ್ಕ್ಲಿಯರ್ ಸೇಲ್ ಹಮ್ಮಿಕೊಳ್ಳುತ್ವೆ’ ಅಂದ ಪರ್ಮೇಶಿ.
‘ದುಡ್ಡಿಗೋಸ್ಕರ ತಪ್ಪನ್ನ ಸರಿ ಮಾಡೋದು ಮತ್ತೂ ದೊಡ್ಡ ತಪ್ಪಲ್ವಾ?’
‘ತಪ್ ಎಂಗಾಯ್ತದೆ? ಜಾತ್ಕ ಸರಿ ಇಲ್ಲ, ಶನಿ, ಕುಜ ದೋಷ ಅಂದ್ರೆ ಜ್ಯೋತಿಷಿಗಳಿಗೆ ದುಡ್ ಕೊಟ್ಟು ಎಂಗ್ ಬೇಕೋ ಅಂಗೆ ಉಚ್ಚ ನಕ್ಷತ್ರ, ಗ್ರಹನೆಲ್ಲಾ ತಲೆ ಮೇಲೆ ಕೂರಿಸ್ಕೊಂಡು ಬೇರೆ ಜಾತಕ ಬರ್ಸಿ ಸಕ್ರಮ ಮಾಡ್ಕಳಕಿಲ್ವಾ? ಗ್ರಹಗತಿನೇ ಅಕ್ರಮ-ಸಕ್ರಮ ಮಾಡ್ಕಬಹುದು ಅಂದ್ಮ್ಯಾಕೆ ಇದ್ಯಾವ ಲೆಕ್ಕ ಬಿಡು’.
‘ಇಂಗೇ ಮಾಡ್ತಿದ್ರೆ ಇದಕ್ಕೆ ಕೊನೆ ಮೊದ್ಲೇ ಇರಾಕಿಲ್ಲ ಬಿಡು. ಕೆರೆ ನುಂಗಿ ಮಾಡಿದ ನಿವೇಶನ, ಬಿಲ್ಡಿಂಗು ಎಲ್ಲಾ ಸಕ್ರಮ ಮಾಡುದ್ರೆ ಜನ ಮತ್ ಮತ್ ತಪ್ ಮಾಡಕಿಲ್ವಾ?’
‘ಅಂಗ್ ಆಗ್ಬಾರ್ದು ಅಂದ್ರೆ ಆಡಳಿತ ಯಂತ್ರದ ಅಕ್ರಮನೇ ಸಕ್ರಮ ಮಾಡ್ಬೇಕಾಯ್ತದೆ. ಕಟ್ ಮನಿ, ಲಂಚ ಘೋಷಣೆ ಮಾಡ್ಕಂಡು ಇಷ್ಟು ಲಕ್ಷ ಅಂತ ದಂಡ ಕಟ್ಟುಸ್ಕೊಂಡ್ ಮುಂದೆ ಅದನ್ನೂ ಸಕ್ರಮ ಮಾಡ್ಬಹುದಲ್ಲ’.