‘ನಿನ್ನ ಸಾಮ್ರಾಜ್ಯ, ಸಿಂಹಾಸನದ ಏಳಿಗೆಗೆ ಕಾವಿದೇವರ ಕೃಪಾಕಟಾಕ್ಷದ ಪಾಲು ಹೆಚ್ಚಾಗಿದೆಯಲ್ಲವೇ ಪುತ್ರ?’
‘ಹೌದು ಮಾತೆ, ಈಗ ಕಾವಿದೇವರುಗಳು ಜಾತ್ರೆ ರೂಪದಲ್ಲಿ ದಂಡಯಾತ್ರೆಯಂತೆ ಪಾದಯಾತ್ರೆಯಲ್ಲಿ ಬಂದು ಈ ಹುಲುಮಾನವನ ಮೇಲೆ ಬೀಳುತ್ತಿದ್ದಾರೆ’.
‘ವಿರೋಧಿಗಳಿಗೆ ಬಗ್ಗದ, ವಿಪಕ್ಷದವರಿಗೆ ಜಗ್ಗದ ನೀನು ಕಾವಿಗೆ ಕುಗ್ಗುವೆ ಎಂದರೆ ನಂಬಲಾಗದು. ಕಾವಿ ದೇವರುಗಳು ಅಷ್ಟೈಶ್ವರ್ಯ ಕೇಳುತ್ತಿಲ್ಲ. ತಮ್ಮನ್ನು ನಂಬಿದ ಭಕ್ತಕುಲದ ಹಿತಕ್ಕೆ, ಸಮುದಾಯದ ಒಳಿತಿಗೆ ಕೇಳುತ್ತಾರೆ. ನಾಡ ದೊರೆ ಅಷ್ಟೂ ಮಾಡದಿದ್ದರೆ ಹೇಗೆ?’
‘ಮಾತೆ ನನ್ನ ಸಮಸ್ಯೆ ಅರ್ಥ ಮಾಡಿಕೋ. ಈ ಧಾರಾಕಾರ ಧಾರಾವಾಹಿ ಇಷ್ಟಕ್ಕೇ ಮುಗಿಯುವುದಿಲ್ಲ. ಇನ್ನಷ್ಟು ಕಾವಿದೇವರುಗಳು ಮೆರವಣಿಗೆ ಬರಲು ಸಿದ್ಧರಾಗುತ್ತಿದ್ದಾರೆ, ಅವರನ್ನೆಲ್ಲಾ ಹೇಗೆ ಸಂಭಾಳಿಸಲಿ? ಅವರು ಮಠ ಬಿಟ್ಟು ಹೊರ ಬಾರದಂತೆ ಮನವೊಲಿಸು ತಾಯಿ...’
‘ಕ್ಷಮಿಸು ಪುತ್ರ, ನನಗೆ ಆ ಶಕ್ತಿ ಇಲ್ಲ, ನೀನೇ ನಿಭಾಯಿಸಿಕೋ...’ ಎಂದು ಮೌನ ತಾಳಿದಳು ಮಾತೆ. ದೊರೆಗಳು ಎದ್ದು ಕುಳಿತು ಚಡಪಡಿಸಿದರು.