ಚೀನೀ ಬಲೂನುಗಳನ್ನು ಅಮೆರಿಕ ಹೊಡೆದುರುಳಿಸಿದ್ದನ್ನು ಬೆಕ್ಕಣ್ಣ ಬಿಟ್ಟೂಬಿಡದೆ ಓದುತ್ತಿತ್ತು.
‘ಅಮೆರಿಕದ ಆಕಾಶದಾಗೆ ಚೀನಾ ಬಲೂನು ಬಿಟ್ಟಿದ್ದು ಸರೀನಾ ಅಥ್ವಾ ತನ್ನ ಆಕಾಶದಾಗೆ ಹಾರುತ್ತಿದ್ದ ಬಲೂನನ್ನು ಅಮೆರಿಕ ಹೊಡೆದು ಉರುಳಿಸಿದ್ದು ಸರೀನಾ’ ಬೆಕ್ಕಣ್ಣ ಮೀಸೆ ಸವರುತ್ತ ಕೇಳಿತು.
‘ಎರಡೂ ಸರಿ ಮತ್ತು ಎರಡೂ ತಪ್ಪು’ ನಾನು ಪೊಲಿಟಿಕಲಿ ಕರೆಕ್ಟ್ ಆದ ಉತ್ತರ ಕೊಟ್ಟೆ.
‘ಬೇರೆ ದೇಶದ ಆಕಾಶದಲ್ಲಿ ಬೇಹುಗಾರಿಕೆ ಬಲೂನು ಬಿಡದೇನೋ ತಪ್ಪು. ಆದರೆ ನಮ್ಮ ದೇಶದ ಆಕಾಶದಲ್ಲಿ ನಾವೇ ಬೇಹುಗಾರಿಕೆ ಬಲೂನು ಬಿಟ್ಟರೆ ತಪ್ಪೇನಿಲ್ಲ, ಹೌದಿಲ್ಲೋ?’ ಬೆಕ್ಕಣ್ಣ ಜಾಣತನದ ಪ್ರಶ್ನೆ ಎಸೆಯಿತು.
‘ನಮ್ಮ ಮ್ಯಾಗೆ ನಾವೇ ಎದಕ್ಕ ಬೇಹುಗಾರಿಕೆ ಮಾಡೂಣು?’
‘ಚುನಾವಣೆ ಟೈಮಿನಾಗೆ ಬೇಹುಗಾರಿಕೆ ಬೇಕಾಗತೈತಿ. ದಿಲ್ಲಿಯಿಂದ ಬಂದವ್ರು ಗುಪ್ತ ಸಭೆ ಮಾಡ್ತಾರಲ್ಲ, ಆವಾಗ ಸಭೆ ನಡೀತಿರೋ ಜಾಗದ ಮ್ಯಾಗೆ ಎದುರಾಳಿ ಪಕ್ಷದವರು ಒಂದು ಬಲೂನು ಹಾರಿಸಿ, ಒಳಗಿದ್ದವರು ಏನೇನು ಮಾತುಕತೆ ನಡೆಸಿದ್ರು ಅಂತ ಕೇಳಬೌದು’ ಬೆಕ್ಕಣ್ಣ ಬಲೂನು ಬೇಹುಗಾರಿಕೆಯ ಪ್ಲಾನ್ ಹೇಳಿತು.
‘ಅಷ್ಟೇ ಯಾಕೆ... ಒಂದೇ ಪಕ್ಷದಾಗೆ ಭಿನ್ನಮತೀಯರೂ ಹಿಂಗೆ ಮಾಡಬೌದು. ಹಾಸನದಾಗೆ ಭವಾನಕ್ಕನ ಪಾಳೆಯದೊಳಗೆ ಏನು ನಡೀತೈತೆ ಅಂತ ಕುಮಾರಣ್ಣ ಇಲ್ಲಿ ಕುಂತೇ ಬಲೂನು ಹಾರಿಸಿ ತಿಳೀಬೌದು’.