‘ಏನ್ರೀ, ರಾತ್ರಿ ನಿದ್ದೆಯಲ್ಲಿ ಒಬ್ಬರೇ ನಗ್ತಿದ್ರಿ, ಅಳ್ತಿದ್ರಿ, ಆಗಾಗ ಚಪ್ಪಾಳೆ ಬೇರೆ ತಟ್ತಿದ್ರಿ... ಹುಚ್ಚು ಹಿಡಿದಿತ್ತಾ’ ವ್ಯಂಗ್ಯವಾಗಿ ಕೇಳಿದಳು ಹೆಂಡ್ತಿ.
‘ನಿನ್ನೆ ಬೆಳಿಗ್ಗೆಯಿಂದ ಮನಸಲ್ಲಿ ಏನು ಅಂದ್ಕೊಳ್ತಿದ್ನೊ ಅದೇ ಕನಸಲ್ಲಿ ಬಂದಿತ್ತು. ಕಾಶ್ಮೀರದಲ್ಲಿ 60x40 ಸೈಟ್ ತಗೊಂಡಿದ್ದೆ. ಐದು ಎಕರೆ ಸೇಬಿನ ತೋಟ ಖರೀದಿಸಿದ್ದೆ. ಕನಸಲ್ಲಿ ಅಳ್ತಿರ್ಲಿಲ್ಲ, ಅದು ಆನಂದಭಾಷ್ಪ. ಕಾಶ್ಮೀರಿ ಹುಡುಗೀರು ನನ್ನ ಮದುವೆ ಆಗೋಕೆ ಕ್ಯೂನಲ್ಲಿ ನಿಂತಿದ್ರು. ಅದ್ಕೆ ಖುಷಿಯಾಗಿ ಚಪ್ಪಾಳೆ ತಟ್ತಿದ್ದೆ’ ಪತ್ನಿ ಪಿತ್ತ ನೆತ್ತಿಗೇರಲಿ ಎಂಬ ಹಿಡನ್ ಅಜೆಂಡಾ ಇಟ್ಟುಕೊಂಡೇ ಉತ್ತರಿಸಿದೆ.
ತೀರಾ ನಿಕೃಷ್ಟವಾಗಿ ಮೇಲಿನಿಂದ ಕೆಳಗಿನವರೆಗೆ ನೋಡಿ ನಕ್ಕ ಹೆಂಡ್ತಿ, ‘ಮೊದಲು ಮನೆ ಬಾಡಿಗೆ ಕಟ್ಟಿ. ತೋಟ ತಗೊಳೋದಿರಲಿ, ಮಕ್ಕಳಿಗೆ ಎರಡು ಕೆ.ಜಿ ಸೇಬು ತಂದ್ಕೊಡಿ ಸಾಕು. ಇನ್ನು, ನಿಮ್ಮನ್ನ ಕಟ್ಟಿಕೊಳ್ಳೋ ದುರ್ಗತಿ ಕಾಶ್ಮೀರಿ ಹುಡುಗಿಯರಿಗೆ ಬಂದಿಲ್ಲ ಬಿಡಿ’ ಕಾಲೆಳೆದಳು.
‘ನೋಡ್ರಿ, ಕೆಲವು ವಿಶೇಷಾಧಿಕಾರಗಳನ್ನ ಹೇಳಿ ರದ್ದು ಮಾಡ್ತಾರೆ... ಕೆಲವು ಹೇಳ್ದೆ ರದ್ದಾಗಿರ್ತವೆ... ಏನೇ ಆದರೂ ವಿಕ್ಟರಿ ಸಿಂಬಲ್ ತೋರಿಸ್ತಾ, ನಗ್ತಾ ಓಡಾಡಬೇಕು... ಅದು ಕಾನ್ಫಿಡೆನ್ಸ್’ ನನ್ನ ಹೆಗಲ ಮೇಲೆ ಬಂದೂಕಿಟ್ಟು ಯಾರಿಗೋ ಗುಂಡು ಹಾರಿಸಿದ್ಲು ಅರ್ಧಾಂಗಿ.
‘ಹೇಳ್ದೆ ರದ್ದು ಮಾಡೋ ವಿಶೇಷಾಧಿಕಾರವಾ? ಹೆಂಗೆ’ ತಲೆ ಕೆರೆದುಕೊಂಡೆ.
‘ಸಿ.ಎಂ ಆಗಿ 13 ದಿನಗಳಾದ್ರೂ ಸಂಪುಟ ವಿಸ್ತರಣೆ ಮಾಡೋ ವಿಶೇಷಾಧಿಕಾರ ಇಲ್ದೆ ಒದ್ದಾಡ್ತಿಲ್ವ, ಹಂಗೆ’ ಎಂದು ಹೇಳುತ್ತಾ ‘ಕಮಲಿ’ ಸೀರಿಯಲ್ ನೋಡತೊಡಗಿದಳು ಯಜಮಾನಿ.