‘ಹೌದು, ಮೋಜಿಗೆ ಮತ್ತೇರಬೇಕಲ್ಲ. ಅದರಲ್ಲೂ ಈಗ ಅಬಕಾರಿಗೆ ಕಸ್ಟಮರ್ ಕಮ್ಮಿ ಆಗಿ, ವ್ಯಾಪಾರ ಡಲ್ ಆಗಿದೆಯಂತೆ. ಅಬಕಾರಿ ಭಿಕಾರಿಯಾದರೆ ಸರ್ಕಾರ ನಡೆಸೋದು ಹೇಗೆ, ಎಣ್ಣೆಯಿಂದಲ್ಲವೇ ಸರ್ಕಾರಿ ಚಕ್ರ ಉರುಳೋದು’.
‘ಬಿಸಿನೆಸ್ ಇಂಪ್ರೂ ಮಾಡ್ಬೇಕು ಅಂತ ಮನೆ ಬಾಗಿಲಿಗೆ ಎಣ್ಣೆ ಹಂಚಲು ಈ ಮೊದಲು ಚಿಂತನೆ ನಡೆದಿತ್ತು ಅಲ್ಲವೇನ್ರೀ?’
‘ಹೌದು, ಜನ ಬಾಗಿಲು ತೆರೆಯೋದಿಲ್ಲ ಅಂದಿದ್ದಕ್ಕೆ ಚಿಂತನೆ ತೆಪ್ಪಗಾಯ್ತು. ಕ್ಯಾಸಿನೊ ತೆರೆದುಕೊಂಡ್ರೆ ಫಾರಿನ್ ಕಸ್ಟಮರ್ಸ್ ಸಿಗ್ತಾರೆ ಅನ್ನೋ ಆಸೆ ಎಣ್ಣೆ ಇಲಾಖೆಗೆ. ಯಾವುದೇ ವ್ಯವಹಾರ ಕುದುರಬೇಕೆಂದರೆ ಹೊಸ ಗ್ರಾಹಕರನ್ನು ಸೃಷ್ಟಿ ಮಾಡಿಕೊಳ್ಳಬೇಕಲ್ವೇ?’
‘ಕಸ್ಟಮರ್ ಕ್ರಿಯೇಟ್ ಮಾಡ್ತೀವಿ ಅಂತ ಶಾಲಾ ಕಾಲೇಜು ಮಕ್ಕಳಿಗೆ ಕ್ಷೀರ ಭಾಗ್ಯದ ಬದಲು ಎಣ್ಣೆ ಭಾಗ್ಯ ಜಾರಿ ಮಾಡಿಬಿಟ್ಟಾರು ರೀ’ ಸುಮಿಗೆ ಆತಂಕ.
‘ಹಾಗೆಲ್ಲಾ ಮಾಡಲ್ಲಬಿಡು, ಸರ್ಕಾರಕ್ಕೂ ಮಕ್ಕಳಪ್ರೇಮ ಇದೆ. ಎಣ್ಣೆಯಿಂದಲೇ ಮಕ್ಕಳು ಕೆಡ್ತಾರೆ ಅನ್ನೋ ಆತಂಕ ಬೇಡ, ಮೊಬೈಲ್ ನೋಡಿಕೊಂಡೂ ಕೆಡುತ್ತಿದ್ದಾರಲ್ಲ’ ಅಂದ ಶಂಕ್ರಿ.