‘ಹಾಗಂತ ಊರಿಗೆ ಬೇಲಿ ಹಾಕ್ಕೊಂಡು ಬಾಳಕ್ಕಾಗುತ್ತಾ, ದೇವರ ಕಾರ್ಯ ಮಾಡೋದು ಬೇಡ್ವಾ, ಮಾರಮ್ಮ ಮುನಿಸಿಕೊಂಡ್ರೆ ಊರು ಉಳೀತದೇನ್ಲಾ?’ ತಿಮ್ಮಜ್ಜ ರೇಗಿದ.
‘ದೇವರ ಕಾರ್ಯ ಮಾಡಲೇಬೇಕು ಸಾರ್, ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಹಾಕ್ಕೊಂಡು, ಸ್ಯಾನಿಟೈಸರ್ನಲ್ಲಿ ಕೈ ತೊಳೆದುಕೊಂಡು ತೇರು ಎಳಿತೀವಿ...’ ಅಂದ ಜಾತ್ರಾ ಸಮಿತಿ ಸದಸ್ಯ ಪರಮೇಶಿ.
‘ಪರ್ಮಿಷನ್ ಕೊಡಕ್ಕಾಗಲ್ಲರೀ...’ ಮಂತ್ರಿ ಖಡಕ್ಕಾಗಿ ಹೇಳಿದ್ರು.
‘ತಿಮ್ಮಜ್ಜ ಸತ್ತರೆ ಸರ್ಕಾರವೇ ಹೊಣೆ. ಮುಂದಿನ ಜಾತ್ರೆವರೆಗೂ ಅಜ್ಜನನ್ನು ಬದುಕಿಸಿ, ವೃದ್ಧಾಪ್ಯ ವೇತನ ಪಡೆಯುವಂತೆ ಕಾಪಾಡೋದು ನಿಮ್ಮ ಜವಾಬ್ದಾರಿ’ ಅಂತ ಜನ ಕೂಗಾಡಿದರು.
‘ಇನ್ಮೇಲೆ ತಿಮ್ಮಜ್ಜನ ಯೋಗಕ್ಷೇಮವನ್ನು ಸರ್ಕಾರ ನೋಡಿಕೊಳ್ಳುತ್ತದೆ’ ಎಂದ ಮಂತ್ರಿ, ‘ಪ್ರತಿದಿನ ತಿಮ್ಮಜ್ಜನ ಆರೋಗ್ಯ ತಪಾಸಣೆ ಮಾಡಿ ನನಗೆ ರಿಪೋರ್ಟ್ ಕೊಡಿ’ ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಲಸಿಕೆ ಹಾಕಿಸಲು ತಿಮ್ಮಜ್ಜನನ್ನು ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದರು.