ಕಳೆದ ವಾರ ಸುದ್ದಿ ನೋಡುತ್ತಿದ್ದ ಬೆಕ್ಕಣ್ಣ ಖುಷಿಯಿಂದ ‘ಹೇ... ನೋಡಿಲ್ಲಿ, ನಮ್ಮ ಬಾಬಾ ರಾಮದೇವ್ರು ಸಂಜೀವಿನಿ ಪರ್ವತ ಹೊತ್ಕಂಡುಬಂದಾರ...’ ಎಂದು ಉದ್ಗರಿಸಿತು. ಸುದ್ದಿ ಜಾಲಾಡಿ ಓದಿ, ‘ನಾ ಈ ಔಷಧಿ ಡೀಲರ್ಶಿಪ್ ತಗಂತೀನಿ, ಕೊರೊನಾಪೀಡಿತರ ಸೇವಾ ಮಾಡ್ತೀನಿ’ ಎಂದು ಕುಣಿದಾಡಿತು. ಮತ್ತೆ ಎರಡೇ ದಿನಕ್ಕೆ ಮುಖ ಪೆಚ್ಚಾಗಿಸಿಕೊಂಡು, ‘ಬಾಬಾರು ಎಷ್ಟ್ ಒಳ್ಳೆ ಕೆಲಸ ಮಾಡಾಕೆ ಹತ್ತಿದ್ರು, ನಿಮ್ಮ ಸಂಶೋಧನೆ ಎಲ್ಲಾ ಸುಳ್ಳು ಅಂತ ಕೇಸ್ ಹಾಕ್ಯಾರಂತ. ನಮ್ ಬಾಬಾರು ಹೇಳಿದ್ದು ಈ ಎಲ್ಡ್ ಔಷಧಿ ಪುಷ್ಟಿವರ್ಧಕ, ಕೊರೊನಾ ನಿರೋಧಕ ಶಕ್ತಿ ಹೆಚ್ಚತೈತಿ ಅಂತ’ ಎಂದು ಬಾಬಾರನ್ನು ಸಮರ್ಥಿಸಿಕೊಂಡಿತು.