<blockquote>ದುಬಾರೆಯ ಆನೆ ಶಿಬಿರದಲ್ಲಿನ ದುರಂತವು ಸುರಕ್ಷತಾ ವ್ಯವಸ್ಥೆಯ ವೈಫಲ್ಯವನ್ನು ಹಾಗೂ ಕಟ್ಟುನಿಟ್ಟಿನ ನಿಯಾಮವಳಿ ಅನುಷ್ಠಾನದ ಅಗತ್ಯವನ್ನು ಒತ್ತಿಹೇಳುವಂತಿದೆ.</blockquote>.<p>ಕೊಡಗು ಜಿಲ್ಲೆ ದುಬಾರೆಯ ಆನೆಗಳ ಶಿಬಿರದಲ್ಲಿ ಸಂಭವಿಸಿರುವ ಚೆನ್ನೈನ ಮೂವತ್ತಮೂರು ವರ್ಷದ ಮಹಿಳೆಯ ದುರ್ಮರಣವು ಆಕಸ್ಮಿಕ ಘಟನೆ ಮಾತ್ರವಲ್ಲ; ಅದು, ವಾಣಿಜ್ಯ ಪ್ರವಾಸೋದ್ಯಮ, ಕಳಪೆ ಸುರಕ್ಷತಾ ಯೋಜನೆ ಹಾಗೂ ವನ್ಯಜೀವಿಗಳ ಅನೂಹ್ಯ ನಡವಳಿಕೆ ಒಟ್ಟುಗೂಡಿದಾಗ ಏನಾಗಬಹುದು ಎನ್ನುವುದರ ಗಂಭೀರ ಎಚ್ಚರಿಕೆಯೂ ಹೌದು. ಒಂದು ಕೈಯಲ್ಲಿ ಮಗುವನ್ನು ಅವುಚಿಕೊಂಡು, ಇನ್ನೊಂದು ಕೈಯಿಂದ ಆನೆಯ ಕೆಳಗೆ ಸಿಲುಕಿದ್ದ ಪತ್ನಿಯನ್ನು ಎಳೆದು ರಕ್ಷಿಸಲು ಪ್ರಯತ್ನಿಸುತ್ತಿದ್ದ ಪತಿಯ ಆಕ್ರಂದನದ ದೃಶ್ಯಗಳು ಮನಕಲಕುವಂತಿವೆ. ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದಾಗ ಕಂಜನ್ ಹೆಸರಿನ ಆನೆ ಇದ್ದಕ್ಕಿದ್ದಂತೆ ರೊಚ್ಚಿಗೆದ್ದು, ಮಾರ್ತಾಂಡ ಹೆಸರಿನ ಆನೆಯ ಮೇಲೆ ದಾಳಿ ನಡೆಸಿದಾಗ ಈ ದುರ್ಘಟನೆ ಸಂಭವಿಸಿದೆ. ಸಂಘರ್ಷದಲ್ಲಿ ಸಮತೋಲನ ಕಳೆದುಕೊಂಡು ಕೆಳಗೆಬಿದ್ದ ಮಾರ್ತಾಂಡನ ಕೆಳಗೆ ಸಿಲುಕಿದ ಮಹಿಳೆ ನಜ್ಜುಗುಜ್ಜಾಗಿದ್ದಾರೆ. ಕಂಜನ್ ದಂತದ ಇರಿತಕ್ಕೊಳಗಾಗಿದ್ದ ಮಾರ್ತಾಂಡನೂ ಸಾವಿಗೀಡಾಗಿದ್ದಾನೆ. ಈ ದುರಂತದಷ್ಟೇ ಕಳವಳಕಾರಿ ಸಂಗತಿ, ಅಪಾಯದ ಸಂದರ್ಭಗಳಲ್ಲಿ ನೆರವು ಒದಗಿಸಲು ಅಗತ್ಯವಾದ ತುರ್ತು ಸಿದ್ಧತೆಯ ಗೈರುಹಾಜರಿ. ನೂರಾರು ಪ್ರವಾಸಿಗರನ್ನು ಟನ್ಗಟ್ಟಲೆ ತೂಕದ ಆನೆಗಳ ಸಮೀಪಕ್ಕೆ ಕರೆದೊಯ್ಯುವ ಸ್ಥಳದಲ್ಲಿ ಗಟ್ಟಿಯಾದ ತಡೆಗೋಡೆಗಳಾಗಲೀ, ಜನಸಂದಣಿಯನ್ನು ನಿಯಂತ್ರಿಸುವ ಸಮರ್ಪಕ ವ್ಯವಸ್ಥೆಯಾಗಲೀ ಇಲ್ಲದಿರುವುದು ಆಶ್ಚರ್ಯಕರ. ತುರ್ತು ಚಿಕಿತ್ಸಾ ಸೌಲಭ್ಯ ಇಲ್ಲದಿರುವುದು, ಸ್ಥಳದಲ್ಲಿ ಆ್ಯಂಬುಲೆನ್ಸ್ ಲಭ್ಯವಿಲ್ಲದಿರುವುದು ಪ್ರವಾಸಿಗರ ಜೀವಗಳನ್ನು ವ್ಯವಸ್ಥೆ ಲಘುವಾಗಿ ಭಾವಿಸಿರುವ ಸಂಕೇತದಂತಿದೆ.</p>.<p>ಕಂಜನ್ ಆನೆ ಈ ಹಿಂದೆಯೂ ಆಕ್ರಮಣಕಾರಿಯಾಗಿ ವರ್ತಿಸಿರುವ ಉದಾಹರಣೆಗಳಿವೆ. ಇರಿತದಿಂದ ಗಾಯಗೊಂಡಿದ್ದ ಮಾರ್ತಾಂಡ ಮೃತಪಟ್ಟಿರುವುದು ಕಂಜನ್ ದಾಳಿ ಎಷ್ಟು ತೀವ್ರವಾಗಿತ್ತು ಎನ್ನುವುದನ್ನು ಹೇಳುವಂತಿದೆ. ಬಂಧಿಸಿದ ಆನೆಗಳಿಗೆ ತರಬೇತಿ ನೀಡಲಾಗಿದ್ದರೂ, ಅವು ಸ್ವಭಾವತಃ ವನ್ಯಜೀವಿಗಳ ಪ್ರವೃತ್ತಿಯನ್ನೇ ಹೊಂದಿರುತ್ತವೆ. ದುರಂತದ ನಂತರ ಸರ್ಕಾರ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಜಾರಿಗೊಳಿಸಲು ನಿರ್ಧರಿಸಿದೆ. ಆನೆಗಳಿಂದ ಪ್ರವಾಸಿಗರು ನೂರು ಅಡಿ ಅಂತರ ಕಾಪಾಡಿಕೊಳ್ಳುವುದು, ಅವುಗಳನ್ನು ಮುಟ್ಟುವುದಕ್ಕೆ ಹಾಗೂ ಆಹಾರ ನೀಡುವುದಕ್ಕೆ ನಿರ್ಬಂಧ, ಸಮೀಪದಿಂದ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ನಿಷೇಧ ಕ್ರಮಗಳು ಎಸ್ಒಪಿಯಲ್ಲಿ ಸೇರಿವೆ. ಈ ಕ್ರಮಗಳ ಮೂಲಕ ಈ ಮೊದಲಿನ ವ್ಯವಸ್ಥೆ ನಿರ್ಲಕ್ಷ್ಯದಿಂದ ಕೂಡಿತ್ತು ಎನ್ನುವುದನ್ನು ಒಪ್ಪಿಕೊಂಡಂತಾಗಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ನಾವು ಹೊಸತಾಗಿ ಏನನ್ನೂ ಅನ್ವೇಷಿಸಬೇಕಾಗಿಲ್ಲ. ಶ್ರೀಲಂಕಾದ ಪಿನ್ನಾವಾಲಾ ಆನೆಗಳ ಅನಾಥಾಶ್ರಮದಲ್ಲಿನ ನಿಯಮಾವಳಿಗಳನ್ನು ಪಠ್ಯದಂತೆ ಗಮನಿಸಬಹುದು. ಆನೆಗಳ ಸ್ನಾನದ ಸಮಯದಲ್ಲಿ ಪ್ರವಾಸಿಗರನ್ನು ಭೌತಿಕವಾಗಿ ದೂರವಿಡುವ ಹಾಗೂ ಆಕ್ರಮಣಕಾರಿ ಆನೆಗಳನ್ನು ಪ್ರತ್ಯೇಕವಾಗಿ ಇರಿಸುವ ಕ್ರಮಗಳನ್ನು ಅಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ದೊಡ್ಡ ಪ್ರಮಾಣದ ಸಿಬ್ಬಂದಿ ಹಾಗೂ ತುರ್ತು ರಕ್ಷಣಾ ವ್ಯವಸ್ಥೆಯೂ ಅಲ್ಲಿದೆ. ಅಲ್ಲಿ ಸುರಕ್ಷತೆಗೆ ಆದ್ಯತೆಯೇ ಹೊರತು ಪ್ರದರ್ಶನಕ್ಕಲ್ಲ.</p>.<p>ಪರಿಸರಸಂಬಂಧಿ ಮತ್ತು ನೈತಿಕತೆಗೆ ಸಂಬಂಧಿಸಿದ ಬಹು ಮುಖ್ಯ ಪ್ರಶ್ನೆಗಳನ್ನು ನಾವೀಗ ಎದುರಿಸಲೇಬೇಕಿದೆ. ಮನುಷ್ಯ ಮತ್ತು ವನ್ಯಜೀವಿ ಸಂಘರ್ಷದ ಘಟನೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸೆರೆ ಹಿಡಿದು ಬಂಧನದಲ್ಲಿ ಇರಿಸಿರುವ ಆನೆಗಳನ್ನು ಏನು ಮಾಡಬೇಕು? ಆನೆಗಳ ದಾಳಿಯು ಸಾಮಾನ್ಯವಾಗಿರುವ ಪ್ರದೇಶಗಳಲ್ಲಿ ಪ್ರವಾಸಿ ಆಕರ್ಷಣೆಯ ರೂಪದಲ್ಲಿ ಅಥವಾ ದೇವಸ್ಥಾನಗಳ ಆಸ್ತಿಯ ರೂಪದಲ್ಲಿ ಅವುಗಳನ್ನು ಬಳಸಿಕೊಳ್ಳಬೇಕೆ? ಅವುಗಳ ವಾಸಸ್ಥಳದ ಸಂರಕ್ಷಣೆ ಹಾಗೂ ಮನುಷ್ಯ–ವನ್ಯಜೀವಿ ಸಂಘರ್ಷವನ್ನು ವೈಜ್ಞಾನಿಕ ಕ್ರಮದಲ್ಲಿ ಶಮನಗೊಳಿಸಲು ಸರ್ಕಾರ ದೀರ್ಘಕಾಲೀನ ಹೂಡಿಕೆ ಮಾಡಬೇಕೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರ ಜೊತೆಗೆ, ಮರುಕಳಿಸುತ್ತಿರುವ ಕಹಿ ಘಟನೆಗಳಿಂದ ಕೊಡಗಿನ ವರ್ಚಸ್ಸಿಗೆ ಧಕ್ಕೆ ಆಗುತ್ತಿರುವುದನ್ನೂ ಗಮನಿಸಬೇಕಾಗಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಕೊಡಗಿನಲ್ಲಿ ಸಂಭವಿಸುತ್ತಿರುವ ಮೂರನೇ ದುರ್ಘಟನೆ ಇದಾಗಿದೆ. ಹೋಂಸ್ಟೇನಲ್ಲಿ ಅಮೆರಿಕದ ಪ್ರವಾಸಿಗರೊಬ್ಬರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಹಾಗೂ ತಡಿಯಾಂಡಮೋಳ್ ಪರ್ವತ ಚಾರಣದ ವೇಳೆ ಕೇರಳದ ಯುವತಿ ನಾಪತ್ತೆಯಾಗಿ, ಮೂರು ದಿನಗಳ ನಂತರ ಪತ್ತೆಯಾದ ಘಟನೆಗಳು ಕೊಡಗನ್ನು ಅನಪೇಕ್ಷಿತ ಘಟನೆಗಳಿಂದಾಗಿ ಸುದ್ದಿಯಲ್ಲಿರಿಸಿದ್ದವು. ಈಗ ದುಬಾರೆ ದುರಂತದ ಸರದಿ. ಇಂಥ ಘಟನೆಗಳಿಂದ ಕೊಡಗು ಮಾತ್ರವಲ್ಲ, ರಾಜ್ಯ ಹಾಗೂ ದೇಶದ ಪ್ರವಾಸೋದ್ಯಮಕ್ಕೂ ಹಿನ್ನಡೆ ಉಂಟಾಗುತ್ತದೆ. ಬದಲಾವಣೆಗೆ ಸಂಬಂಧಿಸಿದಂತೆ ದುಬಾರೆ ದುರಂತವನ್ನು ಸರ್ಕಾರ ಒಂದು ಸಂಕ್ರಮಣ ಬಿಂದುವನ್ನಾಗಿ ಪರಿಗಣಿಸಬೇಕು. ವನ್ಯಜೀವಿ ಪ್ರವಾಸೋದ್ಯಮವು ಅದೃಷ್ಟವನ್ನು ಆಧರಿಸಿ ನಡೆಯುವುದು ಸಾಧ್ಯವಿಲ್ಲ. ಪ್ರವಾಸಿಗರ ಸುರಕ್ಷತೆ ಹಾಗೂ ವನ್ಯಜೀವಿಗಳ ಹಿತಾಸಕ್ತಿ – ಎರಡಕ್ಕೆ ಸಂಬಂಧಿಸಿದಂತೆಯೂ ವೃತ್ತಿಪರತೆ, ವೈಜ್ಞಾನಿಕ ನಿರ್ವಹಣೆ ಹಾಗೂ ರಾಜಿಯಾಗದ ಸುರಕ್ಷತಾ ಮಾನದಂಡಗಳು ಅಪೇಕ್ಷಣೀಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ದುಬಾರೆಯ ಆನೆ ಶಿಬಿರದಲ್ಲಿನ ದುರಂತವು ಸುರಕ್ಷತಾ ವ್ಯವಸ್ಥೆಯ ವೈಫಲ್ಯವನ್ನು ಹಾಗೂ ಕಟ್ಟುನಿಟ್ಟಿನ ನಿಯಾಮವಳಿ ಅನುಷ್ಠಾನದ ಅಗತ್ಯವನ್ನು ಒತ್ತಿಹೇಳುವಂತಿದೆ.</blockquote>.<p>ಕೊಡಗು ಜಿಲ್ಲೆ ದುಬಾರೆಯ ಆನೆಗಳ ಶಿಬಿರದಲ್ಲಿ ಸಂಭವಿಸಿರುವ ಚೆನ್ನೈನ ಮೂವತ್ತಮೂರು ವರ್ಷದ ಮಹಿಳೆಯ ದುರ್ಮರಣವು ಆಕಸ್ಮಿಕ ಘಟನೆ ಮಾತ್ರವಲ್ಲ; ಅದು, ವಾಣಿಜ್ಯ ಪ್ರವಾಸೋದ್ಯಮ, ಕಳಪೆ ಸುರಕ್ಷತಾ ಯೋಜನೆ ಹಾಗೂ ವನ್ಯಜೀವಿಗಳ ಅನೂಹ್ಯ ನಡವಳಿಕೆ ಒಟ್ಟುಗೂಡಿದಾಗ ಏನಾಗಬಹುದು ಎನ್ನುವುದರ ಗಂಭೀರ ಎಚ್ಚರಿಕೆಯೂ ಹೌದು. ಒಂದು ಕೈಯಲ್ಲಿ ಮಗುವನ್ನು ಅವುಚಿಕೊಂಡು, ಇನ್ನೊಂದು ಕೈಯಿಂದ ಆನೆಯ ಕೆಳಗೆ ಸಿಲುಕಿದ್ದ ಪತ್ನಿಯನ್ನು ಎಳೆದು ರಕ್ಷಿಸಲು ಪ್ರಯತ್ನಿಸುತ್ತಿದ್ದ ಪತಿಯ ಆಕ್ರಂದನದ ದೃಶ್ಯಗಳು ಮನಕಲಕುವಂತಿವೆ. ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದಾಗ ಕಂಜನ್ ಹೆಸರಿನ ಆನೆ ಇದ್ದಕ್ಕಿದ್ದಂತೆ ರೊಚ್ಚಿಗೆದ್ದು, ಮಾರ್ತಾಂಡ ಹೆಸರಿನ ಆನೆಯ ಮೇಲೆ ದಾಳಿ ನಡೆಸಿದಾಗ ಈ ದುರ್ಘಟನೆ ಸಂಭವಿಸಿದೆ. ಸಂಘರ್ಷದಲ್ಲಿ ಸಮತೋಲನ ಕಳೆದುಕೊಂಡು ಕೆಳಗೆಬಿದ್ದ ಮಾರ್ತಾಂಡನ ಕೆಳಗೆ ಸಿಲುಕಿದ ಮಹಿಳೆ ನಜ್ಜುಗುಜ್ಜಾಗಿದ್ದಾರೆ. ಕಂಜನ್ ದಂತದ ಇರಿತಕ್ಕೊಳಗಾಗಿದ್ದ ಮಾರ್ತಾಂಡನೂ ಸಾವಿಗೀಡಾಗಿದ್ದಾನೆ. ಈ ದುರಂತದಷ್ಟೇ ಕಳವಳಕಾರಿ ಸಂಗತಿ, ಅಪಾಯದ ಸಂದರ್ಭಗಳಲ್ಲಿ ನೆರವು ಒದಗಿಸಲು ಅಗತ್ಯವಾದ ತುರ್ತು ಸಿದ್ಧತೆಯ ಗೈರುಹಾಜರಿ. ನೂರಾರು ಪ್ರವಾಸಿಗರನ್ನು ಟನ್ಗಟ್ಟಲೆ ತೂಕದ ಆನೆಗಳ ಸಮೀಪಕ್ಕೆ ಕರೆದೊಯ್ಯುವ ಸ್ಥಳದಲ್ಲಿ ಗಟ್ಟಿಯಾದ ತಡೆಗೋಡೆಗಳಾಗಲೀ, ಜನಸಂದಣಿಯನ್ನು ನಿಯಂತ್ರಿಸುವ ಸಮರ್ಪಕ ವ್ಯವಸ್ಥೆಯಾಗಲೀ ಇಲ್ಲದಿರುವುದು ಆಶ್ಚರ್ಯಕರ. ತುರ್ತು ಚಿಕಿತ್ಸಾ ಸೌಲಭ್ಯ ಇಲ್ಲದಿರುವುದು, ಸ್ಥಳದಲ್ಲಿ ಆ್ಯಂಬುಲೆನ್ಸ್ ಲಭ್ಯವಿಲ್ಲದಿರುವುದು ಪ್ರವಾಸಿಗರ ಜೀವಗಳನ್ನು ವ್ಯವಸ್ಥೆ ಲಘುವಾಗಿ ಭಾವಿಸಿರುವ ಸಂಕೇತದಂತಿದೆ.</p>.<p>ಕಂಜನ್ ಆನೆ ಈ ಹಿಂದೆಯೂ ಆಕ್ರಮಣಕಾರಿಯಾಗಿ ವರ್ತಿಸಿರುವ ಉದಾಹರಣೆಗಳಿವೆ. ಇರಿತದಿಂದ ಗಾಯಗೊಂಡಿದ್ದ ಮಾರ್ತಾಂಡ ಮೃತಪಟ್ಟಿರುವುದು ಕಂಜನ್ ದಾಳಿ ಎಷ್ಟು ತೀವ್ರವಾಗಿತ್ತು ಎನ್ನುವುದನ್ನು ಹೇಳುವಂತಿದೆ. ಬಂಧಿಸಿದ ಆನೆಗಳಿಗೆ ತರಬೇತಿ ನೀಡಲಾಗಿದ್ದರೂ, ಅವು ಸ್ವಭಾವತಃ ವನ್ಯಜೀವಿಗಳ ಪ್ರವೃತ್ತಿಯನ್ನೇ ಹೊಂದಿರುತ್ತವೆ. ದುರಂತದ ನಂತರ ಸರ್ಕಾರ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಜಾರಿಗೊಳಿಸಲು ನಿರ್ಧರಿಸಿದೆ. ಆನೆಗಳಿಂದ ಪ್ರವಾಸಿಗರು ನೂರು ಅಡಿ ಅಂತರ ಕಾಪಾಡಿಕೊಳ್ಳುವುದು, ಅವುಗಳನ್ನು ಮುಟ್ಟುವುದಕ್ಕೆ ಹಾಗೂ ಆಹಾರ ನೀಡುವುದಕ್ಕೆ ನಿರ್ಬಂಧ, ಸಮೀಪದಿಂದ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ನಿಷೇಧ ಕ್ರಮಗಳು ಎಸ್ಒಪಿಯಲ್ಲಿ ಸೇರಿವೆ. ಈ ಕ್ರಮಗಳ ಮೂಲಕ ಈ ಮೊದಲಿನ ವ್ಯವಸ್ಥೆ ನಿರ್ಲಕ್ಷ್ಯದಿಂದ ಕೂಡಿತ್ತು ಎನ್ನುವುದನ್ನು ಒಪ್ಪಿಕೊಂಡಂತಾಗಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ನಾವು ಹೊಸತಾಗಿ ಏನನ್ನೂ ಅನ್ವೇಷಿಸಬೇಕಾಗಿಲ್ಲ. ಶ್ರೀಲಂಕಾದ ಪಿನ್ನಾವಾಲಾ ಆನೆಗಳ ಅನಾಥಾಶ್ರಮದಲ್ಲಿನ ನಿಯಮಾವಳಿಗಳನ್ನು ಪಠ್ಯದಂತೆ ಗಮನಿಸಬಹುದು. ಆನೆಗಳ ಸ್ನಾನದ ಸಮಯದಲ್ಲಿ ಪ್ರವಾಸಿಗರನ್ನು ಭೌತಿಕವಾಗಿ ದೂರವಿಡುವ ಹಾಗೂ ಆಕ್ರಮಣಕಾರಿ ಆನೆಗಳನ್ನು ಪ್ರತ್ಯೇಕವಾಗಿ ಇರಿಸುವ ಕ್ರಮಗಳನ್ನು ಅಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ದೊಡ್ಡ ಪ್ರಮಾಣದ ಸಿಬ್ಬಂದಿ ಹಾಗೂ ತುರ್ತು ರಕ್ಷಣಾ ವ್ಯವಸ್ಥೆಯೂ ಅಲ್ಲಿದೆ. ಅಲ್ಲಿ ಸುರಕ್ಷತೆಗೆ ಆದ್ಯತೆಯೇ ಹೊರತು ಪ್ರದರ್ಶನಕ್ಕಲ್ಲ.</p>.<p>ಪರಿಸರಸಂಬಂಧಿ ಮತ್ತು ನೈತಿಕತೆಗೆ ಸಂಬಂಧಿಸಿದ ಬಹು ಮುಖ್ಯ ಪ್ರಶ್ನೆಗಳನ್ನು ನಾವೀಗ ಎದುರಿಸಲೇಬೇಕಿದೆ. ಮನುಷ್ಯ ಮತ್ತು ವನ್ಯಜೀವಿ ಸಂಘರ್ಷದ ಘಟನೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸೆರೆ ಹಿಡಿದು ಬಂಧನದಲ್ಲಿ ಇರಿಸಿರುವ ಆನೆಗಳನ್ನು ಏನು ಮಾಡಬೇಕು? ಆನೆಗಳ ದಾಳಿಯು ಸಾಮಾನ್ಯವಾಗಿರುವ ಪ್ರದೇಶಗಳಲ್ಲಿ ಪ್ರವಾಸಿ ಆಕರ್ಷಣೆಯ ರೂಪದಲ್ಲಿ ಅಥವಾ ದೇವಸ್ಥಾನಗಳ ಆಸ್ತಿಯ ರೂಪದಲ್ಲಿ ಅವುಗಳನ್ನು ಬಳಸಿಕೊಳ್ಳಬೇಕೆ? ಅವುಗಳ ವಾಸಸ್ಥಳದ ಸಂರಕ್ಷಣೆ ಹಾಗೂ ಮನುಷ್ಯ–ವನ್ಯಜೀವಿ ಸಂಘರ್ಷವನ್ನು ವೈಜ್ಞಾನಿಕ ಕ್ರಮದಲ್ಲಿ ಶಮನಗೊಳಿಸಲು ಸರ್ಕಾರ ದೀರ್ಘಕಾಲೀನ ಹೂಡಿಕೆ ಮಾಡಬೇಕೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರ ಜೊತೆಗೆ, ಮರುಕಳಿಸುತ್ತಿರುವ ಕಹಿ ಘಟನೆಗಳಿಂದ ಕೊಡಗಿನ ವರ್ಚಸ್ಸಿಗೆ ಧಕ್ಕೆ ಆಗುತ್ತಿರುವುದನ್ನೂ ಗಮನಿಸಬೇಕಾಗಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಕೊಡಗಿನಲ್ಲಿ ಸಂಭವಿಸುತ್ತಿರುವ ಮೂರನೇ ದುರ್ಘಟನೆ ಇದಾಗಿದೆ. ಹೋಂಸ್ಟೇನಲ್ಲಿ ಅಮೆರಿಕದ ಪ್ರವಾಸಿಗರೊಬ್ಬರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಹಾಗೂ ತಡಿಯಾಂಡಮೋಳ್ ಪರ್ವತ ಚಾರಣದ ವೇಳೆ ಕೇರಳದ ಯುವತಿ ನಾಪತ್ತೆಯಾಗಿ, ಮೂರು ದಿನಗಳ ನಂತರ ಪತ್ತೆಯಾದ ಘಟನೆಗಳು ಕೊಡಗನ್ನು ಅನಪೇಕ್ಷಿತ ಘಟನೆಗಳಿಂದಾಗಿ ಸುದ್ದಿಯಲ್ಲಿರಿಸಿದ್ದವು. ಈಗ ದುಬಾರೆ ದುರಂತದ ಸರದಿ. ಇಂಥ ಘಟನೆಗಳಿಂದ ಕೊಡಗು ಮಾತ್ರವಲ್ಲ, ರಾಜ್ಯ ಹಾಗೂ ದೇಶದ ಪ್ರವಾಸೋದ್ಯಮಕ್ಕೂ ಹಿನ್ನಡೆ ಉಂಟಾಗುತ್ತದೆ. ಬದಲಾವಣೆಗೆ ಸಂಬಂಧಿಸಿದಂತೆ ದುಬಾರೆ ದುರಂತವನ್ನು ಸರ್ಕಾರ ಒಂದು ಸಂಕ್ರಮಣ ಬಿಂದುವನ್ನಾಗಿ ಪರಿಗಣಿಸಬೇಕು. ವನ್ಯಜೀವಿ ಪ್ರವಾಸೋದ್ಯಮವು ಅದೃಷ್ಟವನ್ನು ಆಧರಿಸಿ ನಡೆಯುವುದು ಸಾಧ್ಯವಿಲ್ಲ. ಪ್ರವಾಸಿಗರ ಸುರಕ್ಷತೆ ಹಾಗೂ ವನ್ಯಜೀವಿಗಳ ಹಿತಾಸಕ್ತಿ – ಎರಡಕ್ಕೆ ಸಂಬಂಧಿಸಿದಂತೆಯೂ ವೃತ್ತಿಪರತೆ, ವೈಜ್ಞಾನಿಕ ನಿರ್ವಹಣೆ ಹಾಗೂ ರಾಜಿಯಾಗದ ಸುರಕ್ಷತಾ ಮಾನದಂಡಗಳು ಅಪೇಕ್ಷಣೀಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>