ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ಎಂದರೆ ‘ಆಯೇಗಾ ತಬೀತೋ ಮಿಲೇಗಾ’!

ದೇಶದ ಪ್ರಸಕ್ತ ಅರ್ಥವ್ಯವಸ್ಥೆ ಕುರಿತು ಸಿಂದಿಯಾ ವ್ಯಂಗ್ಯ
Last Updated 5 ಮೇ 2018, 9:16 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಎಟಿಎಂ’ನ ಜನಪ್ರಿಯ ಅರ್ಥ ‘ಎನಿ ಟೈಂ ಮನಿ’. ಆದರೆ, ದೇಶದಲ್ಲಿ ಬಿಜೆಪಿ ಸರ್ಕಾರ ಎಟಿಎಂ ಅರ್ಥ
ಬದಲಿಸಿದ್ದು, ಈಗ ಎಟಿಎಂ ಅಂದರೆ,‘ಆಯೇಗಾ ತಬೀತೋ ಮಿಲೇಗಾ’ (ಬಂದಾಗಲೇ ಸಿಗಲಿದೆ) ಎಂಬಂತಾ
ಗಿದೆ’ ಎಂದು ಸಂಸದ ಜ್ಯೋತಿರಾದಿತ್ಯ ಸಿಂದಿಯಾ ದೇಶದ ಪ್ರಸಕ್ತ ಅರ್ಥವ್ಯವಸ್ಥೆ ಕುರಿತು ವ್ಯಂಗ್ಯವಾಡಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಚಿಕ್ಕೋಡಿ–ಸದಲಗಾ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗಣೇಶ ಹುಕ್ಕೇರಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ನ್ಯೂ–ಡಿಜಿಟಲ್ ಇಂಡಿಯಾ ಪರಿಕಲ್ಪನೆ ನೀಡಿದ ಕೇಂದ್ರ ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ಸರ್ಕಾರ ‘ಜಾನ್ ಜಾಯೇ, ಪರ್ ವಚನ್ ನ ಜಾಯೇ’ (ಪ್ರಾಣ ಹೋದರೂ ಮಾತು ತಪ್ಪದು) ಎಂಬಂತಹ ಸರ್ಕಾರ. ಆದರೆ, ಬಿಜೆಪಿ ಸರ್ಕಾರ ‘ವಚನ್ ಜಾಯೇ, ಪರ್ ಜಾನ್‌ ನ ಜಾಯೇ’ (ಮಾತು ತಪ್ಪಿದರೂ ಪ್ರಾಣ ಹೋಗಬಾರದು) ಎಂಬಂಥ ಸರ್ಕಾರ ಎಂದು ಲೇವಡಿ ಮಾಡಿದರು.

‘ಕರ್ನಾಟಕ ವಿಧಾನಸಭೆ ಚುನಾವಣೆ ದೇಶದ ದಿಕ್ಸೂಚಿಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ
ಅಧ್ಯಕ್ಷ ರಾಹುಲ್ ಗಾಂಧಿ ಜೋಡಿ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರಿಂದ ಪ್ರಧಾನಿ ಮೋದಿ ಗಾಬರಿಗೊಂಡಿದ್ದಾರೆ’ ಎಂದು ಹೇಳಿದರು.

‘ರೈತರ ಸರಣಿ ಆತ್ಮಹತ್ಯೆ, ಮಹಿಳೆ ಮತ್ತು ಮಕ್ಕಳ ಮೇಲಿನ ಬಲಾತ್ಕಾರ, ನಿರುದ್ಯೋಗದಿಂದ ಬಳಲುತ್ತಿರುವ ಯುವ ಜನಾಂಗ, ಗಗನಕ್ಕೇರುತ್ತಿರುವ ಪೆಟ್ರೋಲ್, ಡಿಸೆಲ್‌ ದರ ಹೆಚ್ಚಳ, ಕೃಷಿ ಉತ್ಪನ್ನಗಳಿಗೆ ದೊರಕದ ವೈಜ್ಞಾನಿಕ ಬೆಲೆ ಇವೇ ಕೇಂದ್ರ ಸರ್ಕಾರ ನ್ಯೂ ಇಂಡಿಯಾ ಪರಿಕಲ್ಪನೆಯೇ? ಎಂದು ಪ್ರಶ್ನಿಸಿದ ಸಿಂದಿಯಾ, ‘ದೇಶದಲ್ಲಿ ₹ 72 ಕೋಟಿ ಕೃಷಿ ಸಾಲ ಮನ್ನಾ ಮಾಡಿದ ಸೋನಿಯಾ ಗಾಂಧಿ ನೇತೃತ್ವದ ಸರ್ಕಾರ,
ಕರ್ನಾಟಕದಲ್ಲಿ ₹ 8,200 ಕೋಟಿ ಕೃಷಿ ಸಾಲಮನ್ನಾ ಮಾಡಿದ್ದ ಸಿದ್ದರಾಮಯ್ಯ ಸರ್ಕಾರ, ₹ 3 ಲಕ್ಷದವರೆಗೆ ಸೊನ್ನೆ ಬಡ್ಡಿ ದರದಲ್ಲಿ ಸಾಲ ನೀಡುವ ಕಾಂಗ್ರೆಸ್‌ ಸರ್ಕಾರದ ಜನಪರ ಆಡಳಿತ ವೈಖರಿಯನ್ನು ಬಿಜೆಪಿ ನೋಡಿ ತಿಳಿದುಕೊಳ್ಳಲಿ’ ಎಂದರು.

‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 1.5ಲಕ್ಷ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ನೀಡಿದೆ.
ವಿದೇಶಗಳಲ್ಲಿ ವ್ಯಾಸಾಂಗ ಮಾಡುವವರಿಗೆ ₹ 10 ಲಕ್ಷ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. ಇಂದಿರಾ ಕ್ಯಾಂಟಿನ್ ಸೇರಿ ಹಲವು ಬಡವರ ಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಚಿಕ್ಕೋಡಿ–ಸದಲಗಾ ವಿಧಾನಸಭೆ ಕ್ಷೇತ್ರ ಅಭಿವೃದ್ಧಿಯಲ್ಲಿ ಮಾದರಿ ಆಗಿದೆ. ಜನಪರ ಆಡಳಿತಕ್ಕಾಗಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬೆಂಬಲಿಸಬೇಕು’ ಎಂದು ಸಿಂದಿಯಾ ಮನವಿ ಮಾಡಿದರು.

ಸಂಸದ ಪ್ರಕಾಶ ಹುಕ್ಕೇರಿ,‘ ಚಿಕ್ಕೋಡಿ–ಸದಲಗಾ ವಿಧಾನಸಭೆ ಕ್ಷೇತ್ರದಲ್ಲಿ ರಸ್ತೆ, ಸಮುದಾಯ ಭವನ, ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ. ಆದರೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಆಸಕ್ತಿ ವಹಿಸಿಲ್ಲ ಎಂದು ವಿರೋಧ ಪಕ್ಷಗಳ ಮುಖಂಡರು ಆರೋಪಿಸುತ್ತಿದ್ದಾರೆ. ಕಳೆದ ಒಂದೇ ವರ್ಷದಲ್ಲಿ ಚಿಕ್ಕೋಡಿಯಲ್ಲಿ ಎರಡು ಕೇಂದ್ರಿಯ ವಿದ್ಯಾಲಯ ಮಂಜೂರು ಮಾಡಿಸಿದ್ದು ಯಾರು? ಹಿರೇಕೋಡಿ, ಯಕ್ಸಂಬಾ, ಮಲಿಕವಾಡ, ಸದಲಗಾ, ಪಟ್ಟಣಕುಡಿ ಗ್ರಾಮಗಳಲ್ಲಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಮೊರಾರ್ಜಿ ವಸತಿ ಶಾಲೆಗಳನ್ನು ಬಿಜೆಪಿಯವರು ಮಂಜೂರು ಮಾಡಿಸಿದ್ದಾ? ಚಿಕ್ಕೋಡಿಯಲ್ಲಿ 100 ಹಾಸಿಗೆಗಳ ಮಹಿಳೆ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸದಲಗಾ ಮತ್ತು ಯಕ್ಸಂಬಾಗಳಲ್ಲಿ 50 ಹಾಸಿಗೆಗಳ ಆಸ್ಪತ್ರೆ ಮಂಜೂರಾಗಿದೆ. ನಾವು ಯಾವ ವಲಯದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂಬ ಕುರಿತು ವಿರೋಧಿಗಳು ಬಹಿರಂಗ ಚರ್ಚೆಗೆ ಬರಲಿ. ಉತ್ತರ ನೀಡುತ್ತೇನೆ’ ಎಂದು ಬಹಿರಂಗ ಸವಾಲು ಹಾಕಿದರು.

ಮಾಜಿ ಸಂಸದ ಕಲ್ಲಪ್ಪಣ್ಣ ಆವಾಡೆ, ಅಭ್ಯರ್ಥಿ ಗಣೇಶ ಹುಕ್ಕೇರಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮಾಜಿ ಸಚಿವ ವೀರಕುಮಾರ ಪಾಟೀಲ, ದ್ರಾಕ್ಷಾರಸ ಮಹಾ ಮಂಡಳಿ ಅಧ್ಯಕ್ಷ ರವೀಂದ್ರ ಮಿರ್ಜೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT