ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ವಿಜ್ಞಾನಕ್ಕೆ ‘ಗಗನಯಾನ’ದಿಂದ ಹೊಸ ಶಕ್ತಿ

Last Updated 31 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ‘ಗಗನಯಾನ’, ಭಾರತದ ಮಹತ್ವಾಕಾಂಕ್ಷೆಯ ಯೋಜನೆ. ಇದಕ್ಕೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳ ದೊಡ್ಡ ಪಡೆಯೇ ಹಲವು ದಶಕಗಳಿಂದ ತಪಸ್ಸಿನಂತೆ ಶ್ರಮ ಹಾಕಿದೆ. ತಮ್ಮ ಶ್ರಮವನ್ನು ಸಾಕ್ಷಾತ್ಕಾರಗೊಳಿಸಲು ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಚಾತಕಪಕ್ಷಿಯಂತೆ ಕಾದು ಕುಳಿತಿತ್ತು. ‘ಗಗನಯಾನ’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಕೊನೆಗೂ ಒಪ್ಪಿಗೆ ನೀಡಿದೆ. ಇದರಿಂದ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ‘ಚಂದ್ರಯಾನ’ ಮತ್ತು ‘ಮಂಗಳಯಾನ’ದ ಯಶಸ್ಸು ಆಕಸ್ಮಿಕವಲ್ಲ. ಅಂತಹ ಪ್ರತಿಭೆ ಮತ್ತು ತಂತ್ರಜ್ಞಾನ ನಮ್ಮಲ್ಲೂ ಇದೆ ಎಂಬುದನ್ನು ಜಗತ್ತಿಗೆ ಮತ್ತೊಮ್ಮೆ ತೋರಿಸಲು ‘ಗಗನಯಾನ’ ಸಹಾಯಕವಾಗಬಲ್ಲದು. ಈ ಯಾನದಲ್ಲಿ ಮೂವರು ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ‘ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದರಿಂದ ದೇಶಕ್ಕೆ ಆಗುವ ಉಪಯೋಗವೇನು’ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವು ಯೋಜನೆಗೆ ಹಲವು ವರ್ಷಗಳಿಂದ ತಡೆ ನೀಡಿತ್ತು. ಆದರೆ, ಕಳೆದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಿದರು. ಡಿ.28 ರಂದು ಈ ಸಂಬಂಧ ಸಚಿವ ಸಂಪುಟದಲ್ಲೂ ಒಪ್ಪಿಗೆ ನೀಡಲಾಯಿತು. ಈ ನಿರ್ಣಯದಿಂದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರ ಮತ್ತೊಂದು ಆಯಾಮವನ್ನು ಪಡೆಯುವುದು ನಿಶ್ಚಿತ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರ ಈಗಾಗಲೇ ಸರ್ಕಾರದ ಪ್ರಭಾವಲಯವನ್ನು ಕಳಚಿಕೊಂಡು ಹೊರಗೆ ಬಂದಿದೆ. ಅಲ್ಲದೆ, ಉಪಗ್ರಹ, ರಾಕೆಟ್‌ಗಳ ನಿರ್ಮಾಣ ಹಾಗೂ ಅವುಗಳ ತಂತ್ರಜ್ಞಾನದಲ್ಲಿ ಬದಲಾವಣೆ, ಸಾಫ್ಟ್‌ವೇರ್‌ ಅಭಿವೃದ್ಧಿಯೂ ಸೇರಿ
ವೈವಿಧ್ಯಮಯ ಕ್ಷೇತ್ರಗಳಲ್ಲಿ ಖಾಸಗಿಯವರನ್ನು ತೊಡಗಿಸಿಕೊಳ್ಳಲು ಕೇಂದ್ರ ಸರ್ಕಾರವು ನಿಯಮಾವಳಿಗಳಿಗೆ ತಿದ್ದುಪಡಿ ಮಾಡಿದೆ. ಅನ್ಯಗ್ರಹಗಳಿಗೆ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಿ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುವುದರ ಜತೆಗೆ, ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೊ ಒಂದೂವರೆ ದಶಕದಿಂದಲೂ ತಯಾರಿ ನಡೆಸಿಕೊಂಡೇ ಬಂದಿದೆ. ಅದಕ್ಕೆ ಪೂರಕ ತಂತ್ರಜ್ಞಾನಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿಕೊಂಡು ಬಂದಿರುವುದು ಉಲ್ಲೇಖಾರ್ಹ. ವಿಶೇಷವಾಗಿ ಬಾಹ್ಯಾಕಾಶದಲ್ಲಿ ತನ್ನ ಕೆಲಸ ಮುಗಿಸಿದ ಬಳಿಕ ಮಾನವರನ್ನು ಸುರಕ್ಷಿತವಾಗಿ ಭೂಮಿಗೆ ಇಳಿಸಲು ‘ಕ್ರೂ ಕ್ಯಾಪ್ಸೂಲ್‌’ ಅಗತ್ಯ ಸಾಧನ. ಈ ಕ್ಯಾಪ್ಸೂಲ್‌ ಭೂಮಿಯನ್ನು ಪ್ರವೇಶಿಸುವಾಗ ಭೂವಾತಾವರಣದ ಜತೆ ಘರ್ಷಣೆಗೆ ಒಳಗಾಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಅಂತಹ ತಾಪಮಾನ ತಡೆಯುವ ಕವಚವನ್ನು ಅಳವಡಿಸಿ ಅದರ ಪರೀಕ್ಷೆ ನಡೆಸಲಾಯಿತು. ಒಂದು ವೇಳೆ ಅಪಘಾತವಾಗಿ ಕ್ಯಾಪ್ಸೂಲ್‌ ತೊಂದರೆಗೆ ಸಿಲುಕಿದರೆ, ಅಲ್ಲಿಂದ ಸುರಕ್ಷಿತವಾಗಿ ಗಗನಯಾತ್ರಿಗಳು ಪ್ರತ್ಯೇಕಗೊಳ್ಳುವ ಪರೀಕ್ಷೆಗಳೂ ಯಶಸ್ವಿಯಾಗಿವೆ. ನಭಕ್ಕೆ ಮಾನವರನ್ನು ಹೊತ್ತೊಯ್ಯುವ ಜಿಎಸ್‌ಎಲ್‌ವಿ ಮಾರ್ಕ್‌ (ಎಂಕೆ) 3 ರಾಕೆಟ್‌ ತನ್ನ ಶಕ್ತಿ– ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದೆ. ‘ಗಗನಯಾನ’ ಯಶಸ್ವಿಯಾದರೆ, ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಿದ ವಿಶ್ವದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಲಿದೆ. ಈ ಯೋಜನೆಗೆ ತಗಲುವ ವೆಚ್ಚ ₹10,000 ಕೋಟಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಏಳು ದಿನಗಳು ಇದ್ದು, ಭೂಮಿಗೆ ವಾಪಸಾಗಲಿದ್ದಾರೆ. ಇಸ್ರೊ ವಿಜ್ಞಾನಿಗಳು ಆರಂಭದಲ್ಲಿ ಈ ಯೋಜನೆಗೆ ₹12,500 ಕೋಟಿ ವೆಚ್ಚ ಆಗಬಹುದು ಎಂಬ ಅಂದಾಜು ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದರೆ, 2022ರೊಳಗೇ ಮೂವರು ಭಾರತೀಯರು ಬಾಹ್ಯಾಕಾಶದಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ಈ ಯೋಜನೆಗೆ ತಗಲುವ ವೆಚ್ಚ ಅಪಾರ. ಇಷ್ಟೊಂದು ಖರ್ಚು ಮಾಡಿ ಬಾಹ್ಯಾಕಾಶದಲ್ಲಿ ನಡೆಸುವ ಸಂಶೋಧನೆಗಳಾದರೂ ಯಾವುವು? ಅದರಿಂದ ಜನಸಾಮಾನ್ಯರಿಗಾಗುವ ಪ್ರಯೋಜನಗಳೇನು? ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ದುಬಾರಿ ಯೋಜನೆಗಳು ಬೇಕೇ ಎಂಬ ಪ್ರಶ್ನೆಗಳು ಏಳುವುದು ಸಹಜ. ಆದರೆ, ಇಸ್ರೊ ಸುಮ್ಮನೆ ದುಂದುವೆಚ್ಚ ಮಾಡುವ ಸಂಸ್ಥೆಯಲ್ಲ ಎಂಬ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸವಿದೆ. ಆ ವಿಶ್ವಾಸಕ್ಕೆ ಭಂಗ ತರದೇ ಮನುಕುಲಕ್ಕೆ ಒಳಿತಾಗುವ ಸಂಶೋಧನೆಗಳನ್ನು ನಡೆಸಬೇಕು ಎಂಬುದೇ ಸಾರ್ವಜನಿಕರ ಅಪೇಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT