ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಸುಕಿನಲ್ಲೇ ಆರಂಭವಾಗಲಿದೆ ಚುನಾವಣಾ ಹಬ್ಬ

ಇಂದು ಮತದಾನ: ಮತದಾರರಿಗೆ ನೆರವು, ನೆರಳು ಸೇರಿ ಈ ಬಾರಿ ಹಲವು ಸೌಲಭ್ಯ
Last Updated 12 ಮೇ 2018, 5:40 IST
ಅಕ್ಷರ ಗಾತ್ರ

ಮಂಗಳೂರು: ಈವರೆಗಿನ ಎಲ್ಲ ಚುನಾವಣೆಗಳಲ್ಲೂ ಬೆಳಕು ಮೂಡಿದ ನಂತರ ಮತಗಟ್ಟೆಗಳ ಬಾಗಿಲು ತೆರಯಲಾಗುತ್ತಿತ್ತು. ಆದರೆ, ಈ ಬಾರಿ ಶನಿವಾರ ನಸುಕಿನಲ್ಲೇ ಜಿಲ್ಲೆಯಾದ್ಯಂತ ಚುನಾವಣಾ ಹಬ್ಬ ಆರಂಭವಾಗಲಿದೆ.

ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಯುತ್ತಿದ್ದ ಮತದಾನ ಪ್ರಕ್ರಿಯೆಯನ್ನು ಒಂದು ಗಂಟೆ ವಿಸ್ತರಿಸಲಾಗಿದೆ. ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶವಿದೆ. ಬೆಳಿಗ್ಗೆ 5.45ಕ್ಕೆ ಮತಗಟ್ಟೆಗಳು ಬಾಗಿಲು ತೆರಯಲಿವೆ. ಒಂದೂ ಕಾಲು ಗಂಟೆಯ ಅವಧಿಯನ್ನು ಸಿದ್ಧತೆಗಾಗಿಯೇ ಮೀಸಲಿಡಲಾಗಿದೆ.

‘ಜಿಲ್ಲೆಯ ಎಲ್ಲ 1,858 ಮತಗಟ್ಟೆಗಳಲ್ಲೂ ಬೆಳಿಗ್ಗೆ 5.45ರಿಂದಲೇ ಮತದಾನದ ಪೂರ್ವಸಿದ್ಧತೆ ಆರಂಭಿಸಲಾಗುತ್ತದೆ. ಮತಗಟ್ಟೆ ಸಿಬ್ಬಂದಿ 5.45ಕ್ಕೆ ಸಿದ್ಧವಾಗಿರುತ್ತಾರೆ. 6 ಗಂಟೆಯವರೆಗೂ ವಿವಿಧ ಅಭ್ಯರ್ಥಿಗಳ ಮತಗಟ್ಟೆ ಏಜೆಂಟ್‌ಗಳಿಗಾಗಿ ಕಾಯಲಾಗುತ್ತದೆ. 6 ಗಂಟೆಗೆ ಪ್ರಾಯೋಗಿಕ ಮತದಾನ ಆರಂಭವಾಗುತ್ತದೆ. ಒಂದು ಗಂಟೆ ಈ ಪ್ರಕ್ರಿಯೆ ನಡೆಯಲಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್‌ ತಿಳಿಸಿದರು.

ಪ್ರಾಯೋಗಿಕ ಮತದಾನದ ಅವಧಿಯಲ್ಲಿ 50 ಮತಗಳನ್ನು ಚಲಾಯಿಸಲಾಗುವುದು. ವಿವಿಪ್ಯಾಟ್‌ ಯಂತ್ರದಲ್ಲಿ ದಾಖಲಾಗುವ ಮತ ಖಾತರಿ ಚೀಟಿಗಳನ್ನು ತೆಗೆದು ಕಟ್ಟು ಮಾಡಿ, ಮೊಹರು ಮಾಡಿ ಒಳಗೆ ಇರಿಸಲಾಗುತ್ತದೆ. ಈ ಅವಧಿಯಲ್ಲಿ ಮತಯಂತ್ರ ಮತ್ತು ವಿವಿಪ್ಯಾಟ್‌ ತಾಂತ್ರಿಕವಾಗಿ ಸರಿ ಇದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳಲಾಗುವುದು. ಬೆಳಿಗ್ಗೆ 7 ಗಂಟೆಯಿಂದ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ನೆರಳು, ನೀರು, ನೆರವು: ಮಹಿಳಾ ಮತದಾರರು ಹೆಚ್ಚಿರುವ 20 ಕಡೆಗಳಲ್ಲಿ ಸ್ಥಾಪಿಸಿರುವ ‘ಪಿಂಕ್‌’ ಮತಗಟ್ಟೆಗಳಿಗೆ ಕೆಲವು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಐದು ಕಡೆ ಬುಡಕಟ್ಟು ಜನರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಮಂಗಳೂರು ನಗರದಲ್ಲಿ ಎರಡು ಮಾದರಿ ಮತಗಟ್ಟೆಗಳಿದ್ದು, ಅಲ್ಲಿ ಸರದಿಯ ಬದಲಿಗೆ ಟೋಕನ್‌ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆ ಆವರಣದಲ್ಲಿ ಮತದಾರರಿಗೆ ಕುಳಿತುಕೊಳ್ಳಲು ಆಸನದ ಸೌಲಭ್ಯವನ್ನೂ ಒದಗಿಸಲಾಗಿದೆ.

ಮತಗಟ್ಟೆಗಳ ಆವರಣದಲ್ಲಿ ನೆರಳು ಇಲ್ಲದಿದ್ದರೆ ಜಿಲ್ಲಾಡಳಿತದ ವತಿಯಿಂದಲೇ ತಾತ್ಕಾಲಿಕ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಮತಗಟ್ಟೆಗಳಲ್ಲೂ ಚುನಾವಣಾ ಆಯೋಗದ ವತಿಯಿಂದ ಮತದಾರರ ನೆರವು ಕೇಂದ್ರ ತೆರೆಯಲಾಗಿದೆ. ಮತಗಟ್ಟೆ ಹಂತದ ಅಧಿಕಾರಿಗಳು ಅಲ್ಲಿ ಉಪಸ್ಥಿತರಿದ್ದು, ಮತದಾರರಿಗೆ ನೆರವು ಒದಗಿಸಲಿದ್ದಾರೆ. ಮತದಾರರ ಸ್ಲಿಪ್‌ಗಳ ವಿತರಣೆಯೂ ನಡೆಯಲಿದೆ.

ಬಸ್‌ ಸೌಕರ್ಯ: ಜಿಲ್ಲೆಯ 23 ಮಾರ್ಗಗಳಲ್ಲಿ ಮತದಾರರ ನೆರವಿಗಾಗಿ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ಸೌಲಭ್ಯ ಒದಗಿಸಲಿದೆ. ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತಗಟ್ಟೆ ಸಿಬ್ಬಂದಿಯನ್ನು ಕರೆದೊಯ್ಯಲು ಬಳಸುತ್ತಿರುವ ವಾಹನಗಳನ್ನು ಮತದಾರರ ಅನುಕೂಲಕ್ಕಾಗಿ ಉಚಿತವಾಗಿ ಓಡಿಸಲು ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

ಗುರುತಿನ ಚೀಟಿಗೆ ದಾಖಲೆಗಳು

ಮತದಾರರ ಚೀಟಿಯಲ್ಲಿ ಹೆಸರಿರುವ ಯಾವುದೇ ವ್ಯಕ್ತಿ ಚುನಾವಣಾ ಆಯೋಗದಿಂದ ನೀಡುವ ಮತದಾರರ ಗುರುತಿನ ಚೀಟಿ ಇಲ್ಲದೆಯೂ ಮತ ಚಲಾಯಿಸಲು ಅವಕಾಶವಿದೆ. ಇದಕ್ಕಾಗಿ ಈ ಕೆಳಗಿನ 12 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಅವಕಾಶ ಪಡೆಯಬಹುದು.

ಪಾಸ್‌ಪೋರ್ಟ್, ಚಾಲನಾ ಪರವಾನಗಿ ಪತ್ರ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ನೀಡಿದ ಗುರುತಿನ ಚೀಟಿ, ಅಂಚೆ ಕಚೇರಿ ಅಥವಾ ಬ್ಯಾಂಕ್‌ ಖಾತೆಯ ಭಾವಚಿತ್ರ ಸಹಿತ ಪಾಸ್‌ ಪುಸ್ತಕ, ಪಾನ್‌ ಕಾರ್ಡ್‌, ಆರ್‌ಜಿಐ ಎನ್‌ಪಿಆರ್‌ ಸ್ಮಾರ್ಟ್‌ ಕಾರ್ಡ್‌, ಎನ್ಆರ್‌ಇಜಿಎ ಜಾಬ್‌ ಕಾರ್ಡ್, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯಿಂದ ನೀಡಿರುವ ವಿಮಾ ಯೋಜನೆಯ ಭಾವಚಿತ್ರ ಸಹಿತ ಸ್ಮಾರ್ಟ್‌ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಚುನಾವಣಾ ಆಯೋಗದಿಂದ ವಿತರಿಸಿರುವ ಭಾವಚಿತ್ರ ಸಹಿತ ವೋಟರ್ಸ್‌ ಸ್ಲಿಪ್, ಸಂಸದರು ಮತ್ತು ಶಾಸಕರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT