ಕಳೆದ ಗುರುವಾರ ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಾಲಯದಲ್ಲಿ ವಿಜಯದಶಮಿ ಭಾಷಣ ಮಾಡಿದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಪ್ರಸ್ತಾಪ ಮಾಡಿದರು. ‘ರಾಮಮಂದಿರ ನಿರ್ಮಾಣದಲ್ಲಿ ಈಗಾಗಲೇ ಬಹಳ ವಿಳಂಬ ಆಗಿದ್ದು, ಸಮಾಜದ ಸಹನೆಯನ್ನು ವಿನಾಕಾರಣ ಪರೀಕ್ಷಿಸುವುದರಿಂದ ಯಾರ ಹಿತವೂ ಸಾಧನೆ ಆಗುವುದಿಲ್ಲ. ದೇಶದಲ್ಲಿ ಸದ್ಭಾವನೆ ಮತ್ತು ಒಮ್ಮತದ ವಾತಾವರಣ ನೆಲೆಸಬೇಕಿದ್ದರೆ ಶೀಘ್ರದಲ್ಲೇ ರಾಮಮಂದಿರ ಸಾಕಾರಗೊಳ್ಳಬೇಕು. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ವಿಶೇಷ ಕಾನೂನು ರೂಪಿಸಬೇಕು’ ಎಂಬ ಅವರ ಮಾತುಗಳು ಏಕಕಾಲಕ್ಕೆ ಹಲವು ಉದ್ದೇಶ ಸಾಧನೆಯತ್ತ ಕೈ ಚಾಚಿವೆ. ಆರ್ಎಸ್ಎಸ್ ಕಾರ್ಯಸೂಚಿಯನ್ನು ಜಾರಿಗೆ ತರಲು ಕೇಂದ್ರದಲ್ಲಿ ಬಲಿಷ್ಠ ಬಿಜೆಪಿ ಸರ್ಕಾರ ಇರುವುದು ನಿರ್ಣಾಯಕ ಎಂಬುದನ್ನು ಭಾಗವತ್ ಬಲ್ಲರು. ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಅತಿ ಮಹತ್ವದ ಸೆಮಿಫೈನಲ್ ಸಮರ ಜರುಗಿದೆ. ಲೋಕಸಭಾ ಚುನಾವಣೆಗಳು ಸಮೀಪಿಸಿವೆ. ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದದ ಜಾಗಯಾರಿಗೆ ಸೇರಬೇಕೆಂಬ ಕುರಿತ ವ್ಯಾಜ್ಯದ ವಿಚಾರಣೆ ಸುಪ್ರೀಂ ಕೋರ್ಟ್ ಮುಂದಿದೆ. ಲೋಕಸಭಾ ಚುನಾವಣೆಗೆ ಮುನ್ನವೇ ತೀರ್ಪು ಹೊರಬೀಳುವ ದಟ್ಟ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಕೋಮುವಾದಿ ಧ್ರುವೀಕರಣದ ಕೊಪ್ಪರಿಗೆಯ ಬಿಸಿಯನ್ನು ಕುದಿ ಬಿಂದುವಿಗೆ ಏರಿಸುವ ಲಾಭ ಯಾರ ಪಾಲಾಗಲಿದೆ ಎಂಬುದು ಗೋಡೆಯ ಮೇಲಿನ ಬರಹದಷ್ಟೇ ನಿಚ್ಚಳ. ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣ ಕ್ಲಿಷ್ಟ ಕಾನೂನು ವಿಷಯ. ಆದರ ರಾಜಕೀಯ ಸಾಧಕ ಬಾಧಕಗಳು ಅಪಾರ. ಈ ವಿಷಯ ಸದ್ಯಕ್ಕೆ ಸುಪ್ರೀಂ ಕೋರ್ಟ್ ವಿಚಾರಣಾಧೀನ. ಈ ನ್ಯಾಯಪ್ರಕ್ರಿಯೆಯನ್ನು ಬದಿಗೆ ಸರಿಸಿ ರಾಮಮಂದಿರ ನಿರ್ಮಾಣಕ್ಕೆ ದಾರಿ ಮಾಡುವ ವಿಶೇಷ ಕಾನೂನು ಜಾರಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಜಬರಿಸುವ ಯಾವುದೇ ಬಗೆಯ ಅಧಿಕಾರ ಯಾರಿಗೂ ಇಲ್ಲ. ಬಿಜೆಪಿಯ ದೂರನಿಯಂತ್ರಕ ಶಕ್ತಿ ಎನ್ನಲಾದ ಆರ್ಎಸ್ಎಸ್ ಕೂಡ ಈ ಮಾತಿಗೆ ಹೊರತಲ್ಲ. ದೇಶದ ಅತ್ಯುನ್ನತ ನ್ಯಾಯಾಲಯ ವಿಚಾರಣೆ ನಡೆಸುತ್ತಿರುವ ವಿಷಯ ಕುರಿತು ಬಹುಸಂಖ್ಯಾತ ಜನಸಮೂಹದ ಭಾವನೆಗಳನ್ನು ಕೆದಕಿ ಉತ್ತೇಜಿಸುವುದು ತರವಲ್ಲ. ನ್ಯಾಯಪ್ರಕ್ರಿಯೆಗೆ ಗೌರವ ನೀಡುವ ವಿಧಾನವೂ ಅಲ್ಲ. ನ್ಯಾಯಾಲಯದ ತೀರ್ಪಿಗೆ ಕಾಯುವುದೇ ಸರಿ ದಾರಿ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ದೆಹಲಿಯ ಆಹ್ವಾನಿತ ಅತಿಥಿಗಣವನ್ನು ಉದ್ದೇಶಿಸಿ ಸಂಘದ ಕುರಿತು ಮೂರು ದಿನಗಳ ಕಾಲ ಮಾತಾಡಿದರು. ಪ್ರಶ್ನೆಗಳಿಗೆ ಉತ್ತರವನ್ನೂ ನೀಡಿದರು. ಒಂದು ಕಾಲದಲ್ಲಿ ಟೀಕೆಗೆ ಗುರಿ ಮಾಡಿದ್ದ ಭಾರತ ಸಂವಿಧಾನವನ್ನು ದೇಶದ ಸಾಕ್ಷಿಪ್ರಜ್ಞೆ ಎಂದು ಕರೆದರು. ಹಿಂದುತ್ವವು ಸಂವಿಧಾನಕ್ಕೆ ಹೊರತಾದ ವಿಚಾರ ಅಲ್ಲ ಎಂದು ಮನವರಿಕೆ ಮಾಡಿಸಲು ಪ್ರಯತ್ನಿಸಿದರು. ಅವರ ಭಾಷಣಗಳನ್ನು ‘ಗ್ಲಾಸ್ನಾಸ್ತ್’ (ಪಾರದರ್ಶಕ- ಮುಕ್ತ) ಮತ್ತು ‘ಪೆರೆಸ್ತ್ರೋಯಿಕ’ (ಸುಧಾರಣಾ ಆಂದೋಲನ) ಎಂಬುದಾಗಿ ಆರ್ಎಸ್ಎಸ್ನ ಮಾಜಿ ವಕ್ತಾರ ಮತ್ತು ಬಿಜೆಪಿಯ ಹಾಲಿ ಪ್ರಧಾನ ಕಾರ್ಯದರ್ಶಿ ರಾಮಮಾಧವ್ ದೀರ್ಘ ಲೇಖನ ಬರೆದು ಪ್ರಶಂಸಿಸಿದರು. ಸಂಘಪರಿವಾರದ ಸಂಕುಚಿತ ಸಾಂಸ್ಕೃತಿಕ ರಾಷ್ಟ್ರವಾದಕ್ಕೆ ಭಾಗವತ್ ಭಾಷಣಗಳು ವಿದಾಯ ಹೇಳಿವೆ ಎಂಬ ವ್ಯಾಖ್ಯಾನವೂ ನಡೆಯಿತು. ಆದರೆ ತಿಂಗಳೊಪ್ಪತ್ತಿನಲ್ಲೇ ಈ ವ್ಯಾಖ್ಯಾನಗಳು ಉತ್ಪ್ರೇಕ್ಷಿತ ಕಥನಗಳಾಗಿ ಅನಾವರಣಗೊಂಡಿವೆ. ಸೋಲು-ಗೆಲುವುಗಳ ಚುನಾವಣಾ ರಾಜಕಾರಣಕ್ಕಿಂತ ಎತ್ತರದಲ್ಲಿ ನಿಂತು ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗುವ ಸಂಘಟನೆ ಎಂದು ಮೋಹನ್ ಭಾಗವತ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಇತ್ತೀಚಿನ ದಿನಗಳಲ್ಲಿ ಬಣ್ಣಿಸಿದ್ದರು. ಆದರೆ ಅವರ ವಿಜಯದಶಮಿ ಭಾಷಣ ಈ ಮಾತುಗಳಿಂದ ಹಿಂದೆ ಸರಿದಿದೆ. ಸರ್ವರನ್ನೂ ಒಳಗೊಳ್ಳುವ ‘ಯುಕ್ತ’ ಭಾರತವನ್ನು ನಂಬುತ್ತದೆಯೇ ವಿನಾ ಯಾರನ್ನಾದರೂ ಹೊರಗಿಡುವ ‘ಮುಕ್ತ’ ಭಾರತದಲ್ಲಿ ಆರ್ಎಸ್ಎಸ್ಗೆ ವಿಶ್ವಾಸ ಇಲ್ಲ ಎಂಬ ಅವರ ಇತ್ತೀಚಿನ ಭಾಷಣಗಳು ಮುಖಮೌಲ್ಯಕ್ಕೆ ಮಾತ್ರ ಸೀಮಿತವೇ ವಿನಾ ಅವುಗಳಿಗೆ ಆಂತರಿಕ ಮೌಲ್ಯ ಇರಲಿಲ್ಲ ಎಂಬ ಅನುಮಾನಕ್ಕೆ ದಾರಿ ಮಾಡಿವೆ. ಚುನಾವಣೆಗಳು ಮತ್ತು ಭವ್ಯ ರಾಮಮಂದಿರ ನಿರ್ಮಾಣದ ಮಾತುಗಳ ನಂಟನ್ನು ಸರಸಂಘಚಾಲಕರು ಮತ್ತು ಸಂಘಪರಿವಾರದ ತಲೆಯಾಳುಗಳು ಮತ್ತೊಮ್ಮೆ ನಿಜವಾಗಿಸಿದ್ದಾರೆ. ಆರ್ಎಸ್ಎಸ್ ತನ್ನ ಮೂಲ ಚಹರೆಯನ್ನು ಬಲು ಶೀಘ್ರ ಮರಳಿ ಧರಿಸಿದೆ. ಓನಾಮದ ಪ್ರಾಥಮಿಕಗಳಿಗೇ ಹಿಂದಿರುಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.