ನವದೆಹಲಿ, ಆ. 22– ಕಾಂಗ್ರೆಸ್ ಪಕ್ಷವು ಇಬ್ಭಾಗವಾಗಿ ಒಡೆದರೆ ಪಕ್ಷದ ಸಂಕೇತವಾದ ಜೋಡೆತ್ತುಗಳಿಗೆ ಯಾರು ಒಡೆಯರಾಗುತ್ತಾರೆ?
ಇಂದು ಇಲ್ಲಿ ಈ ಪ್ರಶ್ನೆಯನ್ನು ಸುದ್ದಿಗಾರರು ಕೇಳಿದಾಗ, ‘ಕಾಂಗ್ರೆಸ್ ಪಕ್ಷ’ ಎಂದು ಉತ್ತರವಿತ್ತರು ಕಾಂಗ್ರೆಸ್ ಅಧ್ಯಕ್ಷಶ್ರೀ ಎಸ್. ನಿಜಲಿಂಗಪ್ಪ.
‘ಎರಡು ಗುಂಪುಗಳೂ ತಲಾ ಒಂದೊಂದು ಎತ್ತು ಪಡೆಯಬಹುದು’ ಎಂದು ಸುದ್ದಿಗಾರರೊಬ್ಬರು ಸೂಚಿಸಿದರು.‘ಇದು ಒಳ್ಳೆಯ ಸಲಹೆ’ ಎಂದು ನಗೆಯ ನಡುವೆ ನುಡಿದರು ಕಾಂಗ್ರೆಸ್ ಅಧ್ಯಕ್ಷರು.
ಭೂಸುಧಾರಣೆ ಶಾಸನದ ಯಶಸ್ವಿ ಜಾರಿ: ರಾಜ್ಯಗಳಿಗೆ ಪತ್ರ
ನವದೆಹಲಿ, ಆ. 22– ಹೆಚ್ಚುವರಿ ಜಮೀನನ್ನು ಭೂರಹಿತ ರೈತರಿಗೆ ಹಂಚುವ ಹಾಗೂ ಭೂಹಿಡುವಳಿ ಮಿತಿ ನಿಗದಿಗೊಳಿಸುವ ಶಾಸನವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳಬೇಕೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಎಲ್ಲ ರಾಜ್ಯ ಸರ್ಕಾರಗಳನ್ನು ಒತ್ತಾಯಪಡಿಸಿದ್ದಾರೆ.
ಭೂ ಹಿಡುವಳಿಗಳ ಸಂಘಟನೆಗೆ ಕಾಲಮಿತಿ ನಿಗದಿಗೊಳಿಸಬೇಕೆಂದೂ ಮುಖ್ಯಮಂತ್ರಿಗಳಿಗೆ ಪತ್ರಮುಖೇನ ತಿಳಿಸಿದ್ದಾರೆ.