ನವದೆಹಲಿ, ಆ. 8– ಕಾಂಗ್ರೆಸ್ ಸ್ಪರ್ಧಿಶ್ರೀ ಎಸ್. ಧಿಲ್ಲಾನ್ ಅವರು ಲೋಕಸಭೆಯ ಅಧ್ಯಕ್ಷರಾಗಿ ಇಂದು ಸರ್ವಾನುಮತದಿಂದ ಆಯ್ಕೆಯಾದರು.ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವುದಕ್ಕಾಗಿ ರಾಜೀನಾಮೆ ಇತ್ತ ಶ್ರೀ ಎನ್. ಸಂಜೀವರೆಡ್ಡಿ ಅವರ ಉತ್ತರಾಧಿಕಾರಿಯಾಗಿ ಶ್ರೀ ಧಿಲ್ಲಾನ್ ಆಯ್ಕೆಯಾಗಿದ್ದಾರೆ.
ಬ್ಯಾಂಕ್ ಮಸೂದೆಗೆ ರಾಜ್ಯಸಭೆ ಅಸ್ತು
ನವದೆಹಲಿ, ಆ. 8– ಪ್ರಧಾನಮಂತ್ರಿಯವರು ಜುಲೈ 19ರಂದು ಪ್ರಕಟಿಸಿದ ಬ್ಯಾಂಕ್ ರಾಷ್ಟ್ರೀಕರಣದ ಕ್ರಮಕ್ಕೆ ಸಂಸತ್ತು ಇಂದು ತನ್ನ ಅಂಗೀಕಾರದ ಮುದ್ರೆ ಒತ್ತಿತು.
ಲೋಕಸಭೆಯು ಕಳೆದ ವಾರ ಅಂಗೀಕರಿಸಿದ ಬ್ಯಾಂಕಿಂಗ್ ಸಂಸ್ಥೆಗಳ (ಉದ್ಯಮಗಳ ಸ್ವಾಧೀನತೆ ಹಾಗೂ ವರ್ಗಾವಣೆ) ಮಸೂದೆಯು ಇಂದು ರಾತ್ರಿ 8.47ರ ಸಮಯದಲ್ಲಿ ಹರ್ಷೋದ್ಗಾರ ಹಾಗೂ ಮುಕ್ತ ಕಂಠದ ಕೂಗುಗಳ ನಡುವೆ ರಾಜ್ಯಸಭೆಯ ಅಂಗೀಕಾರವನ್ನು ಪಡೆಯಿತು.
ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಎರಡೇ ಎರಡು ಪಕ್ಷಗಳ ಪೈಕಿ ಸ್ವತಂತ್ರ ಪಕ್ಷದ ಸದಸ್ಯರು ಲೋಕನಾಥ್ ಮಿಶ್ರ ಅವರ ನಾಯಕತ್ವದಲ್ಲಿ ಮೊದಲೇ ಸಭಾತ್ಯಾಗ ಮಾಡಿದುದರಿಂದ ಹಾಗೂ ಜನಸಂಘದ ಸದಸ್ಯರಾರೂ ಸಭೆಯಲ್ಲಿ ಹಾಜರಿರಲಿಲ್ಲವಾದ್ದರಿಂದ, ಮಸೂದೆಯನ್ನು ಅಂತಿಮವಾಗಿ ಮತಕ್ಕೆ ಹಾಕಿದಾಗ ಯಾರೂ ವಿರೋಧಿಸಲಿಲ್ಲ.