ಶ್ರೀಮಂತ ಮತ್ತು ಬಡರಾಷ್ಟ್ರಗಳ ನಡುವೆ ಅಧಿಕಗೊಳ್ಳುತ್ತಿರುವ ಅಂತರ: ರಾಷ್ಟ್ರಪತಿ ಕಳವಳ ನವದೆಹಲಿ, ಮಾರ್ಚ್ 8– ಶ್ರೀಮಂತ ಮತ್ತು ಬಡರಾಷ್ಟ್ರಗಳ ನಡುವಣ ಅಂತರ ದಿನೇ ದಿನೇ ಅಧಿಕಗೊಳ್ಳುತ್ತಿರುವ ಬಗ್ಗೆ ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಅವರು ಇಂದು ಇಲ್ಲಿ ತಮ್ಮ ತೀವ್ರ ಕಳವಳವನ್ನು ವ್ಯಕ್ತಪಡಿಸಿದರು.
ಈ ಅಂತರವು ವಿಶ್ವಶಾಂತಿಗೆ ವಿಪತ್ಕಾರಿ ಎಂದು ಅವರು ವಿಶ್ವರಾಷ್ಟ್ರ ಸಂಸ್ಥೆಯ ರಜತ ಮಹೋತ್ಸವವನ್ನು ಉದ್ಘಾಟಿಸುತ್ತಾ ಹೇಳಿದರು.
ವಿಶ್ವಸಂಸ್ಥೆ ಸಂಘಗಳ ಭಾರತೀಯ ಫೆಡರೇಷನ್ ಏರ್ಪಡಿಸಿರುವ ಈ ಸಮಾರಂಭದಲ್ಲಿ ಭಾರತದಲ್ಲಿನ ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆಗಳ ಪ್ರತಿನಿಧಿ ಡಾ. ಜಾನ್ ಮೋಡಿಯಾರ್ಮಿಡ್ ಮತ್ತು ನಾನಾ ರಾಷ್ಟ್ರಗಳ ರಾಜತಾಂತ್ರಿಕ ಪ್ರತಿನಿಧಿಗಳು ಭಾಗವಹಿಸಿದ್ದರು.
ಕೊಂಪೆಗಳ ನಿರ್ಮೂಲನ: 12 ಕೋಟಿ ರೂ. ಯೋಜನೆ ಪರಿಶೀಲನೆಯಲ್ಲಿ ಬೆಂಗಳೂರು, ಮಾರ್ಚ್ 8– ಬೆಂಗಳೂರು ನಗರದಲ್ಲಿ ಕೊಂಪೆಗಳ ನಿರ್ಮೂಲನಕ್ಕೆ ಹನ್ನೆರಡು ಕೋಟಿ ರೂಪಾಯಿಯ ಯೋಜನೆಯೊಂದು ರಾಜ್ಯ ಸರ್ಕಾರದ ಪರಿಶೀಲನೆಯಲ್ಲಿದೆ.
ಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಅಸಿಸ್ಟೆಂಟ್ ಡೈರೆಕ್ಟರ್ ಶ್ರೀ ಪಿ.ಜಿ ಮುತ್ತಪ್ಪನವರು ತಾವು ಸಲ್ಲಿಸಿರುವ ಯೋಜನೆಯು ಕೊಂಪೆಗಳ ನಿರ್ಮೂಲನಾ ಕಾರ್ಯ ಕೈಗೊಳ್ಳಲು ಶಾಸನಬದ್ಧ ಪ್ರತ್ಯೇಕ ಮಂಡಲಿಯ ನಿರ್ಮಾಣವನ್ನೂ ಒಳಗೊಂಡಿದೆ ಎಂದು ತಿಳಿಸಿದರು.