ನವದೆಹಲಿ, ಜೂನ್ 23– ಸದ್ಯದ ಚಳವಳಿ ನಿಲ್ಲಿಸುವುದಕ್ಕೆ ಪೂರ್ವಭಾವಿಯಾಗಿ ರಾಷ್ಟ್ರಪತಿ ಆಡಳಿತ ವಿಧಿಸಬೇಕೆಂಬ ಷರತ್ತಿನಿಂದ ಭಿನ್ನಮತೀಯ ತೆಲಂಗಾಣ ಕಾಂಗ್ರೆಸ್ ನಾಯಕರಾದ ಡಾ. ಎಂ.ಚೆನ್ನಾರೆಡ್ಡಿ ಮತ್ತಿತರರು ಕದಲದಿದ್ದುದರಿಂದ ಅವರೊಡನೆ ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ನಡೆಸಿದ ಸುದೀರ್ಘ ಮಾತುಕತೆಗಳು ವಿಫಲವಾದವು.
ಶ್ರೀ ದೇಸಾಯಿ ಅವರು ಡಾ. ಚೆನ್ನಾರೆಡ್ಡಿ, ಶ್ರೀ ಎನ್. ರಾಮಚಂದ್ರ ರೆಡ್ಡಿ, ಶ್ರೀ ಕೊಂಡಾಲಕ್ಷ್ಮಣ ಬಾಪೂಜಿ ಮತ್ತು ಶ್ರೀ ಚೊಕ್ಕಾರಾವ್ ಅವರೊಡನೆ ಇಂದು ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಅವರು ಸಭೆಯ ಕೊನೆಯಲ್ಲಿ ಆಗಮಿಸಿದರು.
ಹೈದರಾಬಾದಿಗೆ ತಾವು ಭೇಟಿ ಕೊಡಲು ಶ್ರೀ ದೇಸಾಯಿ ಅವರು ಸೂಚಿಸಿದ ಸಿದ್ಧತೆಯಾಗಲಿ, ಪೂರ್ವಭಾವಿ ಷರತ್ತುಗಳಿಲ್ಲದೆ ಚಳವಳಿ ನಿಲ್ಲಿಸಬೇಕೆಂಬ ಅವರ ಮನವಿಯಾಗಲಿ ಫಲಪ್ರದವಾಗಲಿಲ್ಲ.
ಇಂದಿರಾಗೆ ಟೋಕಿಯೋ ಭವ್ಯ ಸ್ವಾಗತ
ಟೋಕಿಯೋ, ಜೂನ್ 23– ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಐದು ದಿನಗಳ ಭೇಟಿಗಾಗಿ ಇಂದು ಇಲ್ಲಿಗೆ ಬಂದಾಗ ಭವ್ಯ ಸ್ವಾಗತ ದೊರೆಯಿತು.