ಆರ್ಥಿಕ ಸ್ಥಿತಿ: ಪ್ರಧಾನಿ ಸಲಹೆಗೆ ಕಾರ್ಯಕಾರಿ ಸಮಿತಿ ಸ್ವಾಗತ ಬೆಂಗಳೂರು, ಜುಲೈ 11– ಆರ್ಥಿಕ ಹಾಗೂ ಸಾಮಾಜಿಕ ನೀತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಕಳುಹಿಸಿದ್ದ ಸಲಹೆಗಳನ್ನು ಇಂದು ರಾತ್ರಿ ಅನುಮೋದಿಸಿತು.
ಅಲ್ಲದೆ ‘ಶೀಘ್ರವಾಗಿ’ ಅವನ್ನು ಕಾರ್ಯರೂಪಕ್ಕೆ ತರಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಕರೆ ನೀಡಿದೆ.
ಶ್ರೀಮತಿ ಗಾಂಧಿ, ಶ್ರೀ ಕಾಮರಾಜ್ ಮತ್ತು ಸುಬ್ರಹ್ಮಣ್ಯಂ ಅವರುಗಳೊಡನೆ ಸಮಾಲೋಚನೆ ನಡೆಸಿ ಶ್ರೀ ಚವಾಣ್ ಅವರು ಕರಡು ನಿರ್ಣಯವನ್ನು ಸಿದ್ಧ ಮಾಡಿದರು.
ಇಂದಿರಾಗೆ ಭಾರಿ ವಿಜಯ ಬೆಂಗಳೂರು, ಜುಲೈ 11– ಪ್ರಧಾನಿ ಅವರು ತಮ್ಮ ಪತ್ರದಲ್ಲಿ ಸೂಚಿಸಿರುವ ಹೊಸ ಆರ್ಥಿಕ ನೀತಿಯನ್ನು ಎ.ಐ.ಸಿ.ಸಿ.ಗೆಶಿಫಾರಸು ಮಾಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಈ ರಾತ್ರಿ ಇಲ್ಲಿ ನಿರ್ಧರಿಸಿದ್ದು ಪ್ರಧಾನಿ ಹಾಗೂ ಅವರ ಬೆಂಬಲಿಗರಿಗೆ ಭಾರಿ ವಿಜಯ ದೊರಕಿದಂತೆ ಕಂಡು ಬಂದಿದೆ.
ವಾಣಿಜ್ಯ ಬ್ಯಾಂಕುಗಳ ಮೇಲೆ ಉಗ್ರ ಸಾಮಾಜಿಕ ಹತೋಟಿ ಇಲ್ಲವೇ ರಾಷ್ಟ್ರೀಕರಣವೂ ಸೇರಿ ಅನೇಕ ಕ್ರಮಗಳನ್ನು ಪ್ರಧಾನಿ ಅವರು ತಮ್ಮ ಪತ್ರದಲ್ಲಿ ಸೂಚಿಸಿದ್ದರು.
ಉಭಯತ್ರರಿಗೂ ಒಪ್ಪಿಗೆ ಆಗುವಂತೆ ಗಡಿ ಪ್ರಶ್ನೆ ಇತ್ಯರ್ಥ: ಪ್ರಧಾನಿ ಭರವಸೆ ಬೆಂಗಳೂರು, ಜುಲೈ 11– ಮೈಸೂರು ಹಾಗೂ ಮಹಾರಾಷ್ಟ್ರಗಳಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ಗಡಿ ವಿವಾದವನ್ನು ಬೇಗ ಇತ್ಯರ್ಥ ಮಾಡುವ ತಮ್ಮ ತೀವ್ರಾಸಕ್ತಿಯನ್ನು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ವ್ಯಕ್ತಪಡಿಸಿದ್ದಾರೆ.