ಪ್ರಧಾನಿ ಹಠಾತ್ ನಿರ್ಧಾರ, ಅರ್ಥಖಾತೆ ಬದಲಾವಣೆ; ಮುರಾರಜಿ ರಾಜೀನಾಮೆ
ನವದೆಹಲಿ, ಜುಲೈ 16– ಉಪಪ್ರಧಾನ ಮಂತ್ರಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಮಂತ್ರಿಮಂಡಲಕ್ಕೆ ರಾಜೀನಾಮೆ ಸಲ್ಲಿಸಿದರು.
ಸದ್ಯಕ್ಕೆ ಪ್ರಧಾನಮಂತ್ರಿಗಳೇ ಅರ್ಥಶಾಖೆಯನ್ನೂ ವಹಿಸಿಕೊಂಡಿದ್ದಾರೆ.
ಅರ್ಥಶಾಖೆಯಿಂದ ಬಿಡುಗಡೆ ಮಾಡಿರುವುದಾಗಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಮಧ್ಯಾಹ್ನದ ನಂತರ ಪತ್ರ ಬರೆದು ತಿಳಿಸಿದ ಪರಿಣಾಮವಾಗಿ ಶ್ರೀ ದೇಸಾಯಿ ರಾಜೀನಾಮೆ ಸಲ್ಲಿಸಿದರು.
ಅರ್ಥಶಾಖೆಯಿಂದ ವಿಮುಕ್ತಗೊಳಿಸಿದ್ದರೂ, ಉಪ ಪ್ರಧಾನ ಮಂತ್ರಿಯಾಗಿಯೇ ಮುಂದುವರೆಯುತ್ತಾರೆಂದು ಪ್ರಧಾನಮಂತ್ರಿ ತಿಳಿಸಿದ್ದುದನ್ನೂ ಶ್ರೀ ಮುರಾರಜಿ ದೇಸಾಯಿ ವ್ಯಾಖ್ಯಾನ ಮಾಡುತ್ತಾ, ಕಪಾಳಕ್ಕೆ ಈ ಹೊಡೆತ ಬಿದ್ದ ಮೇಲೆ ನಾನು ಹೇಗೆ ಮುಂದುವರಿಯಲಿ ಎಂದು ವರದಿಗಾರರನ್ನು ಪ್ರಶ್ನಿಸಿದರು.
ಚಂದ್ರಗ್ರಹಕ್ಕೆ ಮಾನವ, ಅಪೊಲೊ–11 ಹಂತ ಯಶಸ್ವಿ: ಭೂ ಪಥಕ್ಕೆ ಪ್ರವೇಶ
ಕೇಪ್ಕೆನಡಿ, ಜುಲೈ 16– ಕನಸೊಂದನ್ನು ನನಸು ಮಾಡುವ ಯತ್ನದಲ್ಲಿ ಅಪೊಲೊ– 11 ಅಂತರಿಕ್ಷ ನೌಕೆ ಇಂದು ತನ್ನ ಯಾತ್ರೆಯ ಮೊದಲ ಹಂತವಾಗಿ ಯಶಸ್ವಿಯಾಗಿ ಭೂ ಪಥ ಪ್ರವೇಶಿಸಿತು.
ಚಂದ್ರನ ಮೇಲೆ ಮಾನವನನ್ನು ಇಳಿಸುವ ಪ್ರಯತ್ನದಲ್ಲಿ ಇದು ಪ್ರಥಮ ಕಠಿಣ ಹೆಜ್ಜೆ.