ಅಹ್ಮದಾಬಾದಿನಲ್ಲಿ ಸೈನ್ಯಕ್ಕೆ ಕರೆ: ಘರ್ಷಣೆ, ಗೋಲಿಬಾರ್- 28 ಸಾವು
ಅಹ್ಮದಾಬಾದ್, ಸೆ. 20– ಗಲಭೆಪೀಡಿತ ಅಹ್ಮದಾಬಾದ್ ನಗರದಲ್ಲಿ ಇಂದು ಹಿಂಸಾಚಾರ, ಲೂಟಿ ಹಾಗೂ ಬೆಂಕಿ ಹಚ್ಚುವ ಪ್ರಕರಣಗಳು ಮಿತಿಮೀರಿದ ಪ್ರಮಾಣದಲ್ಲಿ ಸಂಭವಿಸಿ, ಪರಿಸ್ಥಿತಿ ಉಲ್ಬಣಿಸಿದುದರಿಂದ ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಗಾಗಿ ಸೈನ್ಯವನ್ನು ಕರೆಸಲು ಗುಜರಾತ್ ಸರ್ಕಾರ ರಾತ್ರಿ ನಿರ್ಧರಿಸಿತು.
ಎರಡು ಪಂಗಡಗಳ ನಡುವೆ ಘರ್ಷಣೆಗಳು ಸಂಭವಿಸಿದ ಪರಿಣಾಮವಾಗಿ ಪ್ರಾರಂಭವಾದ ಹಿಂಸಾಚಾರಗಳಲ್ಲಿ ಹಾಗೂ ಅದನ್ನು ಹತ್ತಿಕ್ಕಲು ನಡೆಸಿದ ಗೋಲಿಬಾರ್ಗಳಲ್ಲಿ ಇಂದು ಮಧ್ಯರಾತ್ರಿಯವರೆಗೆ ಸತ್ತವರ ಸಂಖ್ಯೆ ಇಪ್ಪತ್ತೆಂಟು ಮತ್ತು ಗಾಯಗೊಂಡವರ ಸಂಖ್ಯೆ 200ಕ್ಕಿಂತ ಹೆಚ್ಚು.
ಇಂದಿರಾ– ಕಾಮರಾಜ್ ಭೇಟಿ
ನವದೆಹಲಿ, ಸೆ. 20– ಮದ್ರಾಸಿನಿಂದ ಇಂದು ಇಲ್ಲಿಗೆ ಆಗಮಿಸಿದ ಕಾಮರಾಜ್ ಅವರು ಪ್ರಧಾನಿ ಇಂದಿರಾ ಗಾಂಧಿಯವರೊಡನೆ ಸಂಜೆ ಒಂದು ಗಂಟೆ ಕಾಲ ಮಾತುಕತೆ ನಡೆಸಿದರು.
ಆರ್ಥಿಕ, ರಾಜಕೀಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಉಭಯ ನಾಯಕರೂ ಚರ್ಚಿಸಿದರೆಂದು ಗೊತ್ತಾಗಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಕಳೆದ ತಿಂಗಳು ಒಗ್ಗಟ್ಟಿನ ಬಗ್ಗೆ ನಿರ್ಣಯ ಅಂಗೀಕರಿಸಿದ ತರುವಾಯ ಈ ಇಬ್ಬರು ನಾಯಕರು ಭೇಟಿಯಾಗಿದ್ದು ಇದೇ ಮೊದಲು. ಇವರ ಭೇಟಿಯ ಬಗ್ಗೆ ಇಲ್ಲಿನ ವೀಕ್ಷಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.