ಅಹ್ಮದಾಬಾದ್, ಸೆ. 21– ದೊಂಬಿ, ಗಲಭೆಗಳಿಂದ ಛಿದ್ರವಿಚ್ಛಿದ್ರವಾಗಿರುವ ಅಹ್ಮದಾಬಾದ್ ನಗರದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಅಗ್ನಿಸ್ಪರ್ಶ, ಲೂಟಿ ಮತ್ತು ಹಿಂಸಾಕೃತ್ಯಗಳು ಇಂದೂ ಅವ್ಯಾಹತವಾಗಿ ಸಾಗಿದ ಕಾರಣ ನಾಳೆ ಏಳು ಗಂಟೆಯವರೆಗೆ ವಿಧಿಸಲಾಗಿದ್ದ ಕರ್ಫ್ಯೂವನ್ನು ಮತ್ತೆ ಇಪ್ಪತ್ನಾಲ್ಕು ಗಂಟೆಗಳ ಕಾಲ ವಿಸ್ತರಿಸಲಾಗಿದೆ.
ನಗರದಾದ್ಯಂತ ತಾಂಡವ ನಡೆಸಿದ ಹಿಂಸಾತ್ಮಕ ಘಟನೆಗಳಿಗೆ ಇದುವರೆಗೆ ತೊಂಬತ್ನಾಲ್ಕು ಪ್ರಾಣಗಳು ಆಹುತಿಯಾಗಿವೆ ಎಂದು ಮೂಲಗಳು ಹೇಳಿವೆ.
ಅಹ್ಮದಾಬಾದ್ ನಗರದಲ್ಲಿ ತೀವ್ರ ಗಲಭೆ ಪೀಡಿತ ಪ್ರದೇಶಗಳಾದ ರಾಖಿಯಾಲ್ ಖಾಡಿಯಾ, ಈದ್ಗಾಚೌಕಿ, ಗೋಮ್ಟಿಪುರ್, ಸರಸ್ಪುರ್, ಜಕಾರಿಯಾ ಮಸೀದಿ ಮತ್ತು ಬೆಹ್ರಾಂಪುರ ಪ್ರದೇಶಗಳಲ್ಲಿ ಪೊಲೀಸರ ನೆರವಿಗೆ ಸೇನೆಯನ್ನು ಇಂದು ಬೆಳಿಗ್ಗೆ ಕಳುಹಿಸಲಾಯಿತು.
ಆಚಾರ್ಯ ವಿನೋಬಾಗೆ ನೊಬೆಲ್ ಶಾಂತಿ ಬಹುಮಾನ?
ಓಸ್ಲೋ, ಸೆ. 20– ಈ ವರ್ಷದ ನೊಬೆಲ್ ಶಾಂತಿ ಪಾರಿತೋಷಕಕ್ಕೆ ಆಚಾರ್ಯ ವಿನೋಭಾ ಭಾವೆ ಅವರ ಹೆಸರನ್ನೂ ಸೂಚಿಸಲಾಗಿದೆ.
ಆಚಾರ್ಯ ಭಾವೆ ಅವರು ಬಹುಶಃ ಪಾಶ್ಚಿಮಾತ್ಯ ಜಗತ್ತಿಗೆ ನೇರ ಅಪರಿಚಿತರು.
ಭಾರತೀಯರೊಬ್ಬರಿಗೆ ಶಾಂತಿ ಪಾರಿತೋಷಕ ಕೊಡಬೇಕೆಂಬುದು ನೊಬೆಲ್ ಸಮಿತಿಯ ತೀವ್ರ ಅಭಿಪ್ರಾಯವಾಗಿದೆ.
ನೊಬೆಲ್ ಸಮಿತಿಯು, ಬಹುಮಾನ ನೀಡುವುದಕ್ಕಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಕೂಡಿದ 45 ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡುವುದಕ್ಕೆ ಮುಂದಿನ ತಿಂಗಳ ಮಧ್ಯ ಭಾಗದಲ್ಲಿ ಸಭೆ ಸೇರುವುದು.