ರಾಷ್ಟ್ರಗಳ ನಡುವಣ ವಿವಾದ ಇತ್ಯರ್ಥಕ್ಕೆ ಬಲಪ್ರಯೋಗ ಸಲ್ಲ: ಭಾರತ–ರುಮೇನಿಯ ನಿಲುವು
ನವದೆಹಲಿ, ಅ. 20– ರಾಷ್ಟ್ರೀಯ ಗಡಿಗಳಿಗೆ ಸಂಬಂಧಿಸಿದ ವಿವಾದಗಳೂ ಸೇರಿ ರಾಷ್ಟ್ರ–ರಾಷ್ಟ್ರಗಳ ನಡುವಣ ಎಲ್ಲ ವಿವಾದಗಳನ್ನೂ ಬಲಪ್ರಯೋಗ ಮಾಡದೆ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕೆಂಬ ತಮ್ಮ ನಿಲುವನ್ನು ಭಾರತ ಮತ್ತು ರುಮೇನಿಯಾಗಳು ದೃಢಪಡಿಸಿವೆ.
ರುಮೇನಿಯಾದ ಅಧ್ಯಕ್ಷ ನಿಕೋಲ್ ಚೆಸೆಸ್ಕು ಮತ್ತು ಪ್ರಧಾನಿ ಜಾರ್ಜ್ ಮೌರರ್ ಅವರು ಭಾರತಕ್ಕೆ ನೀಡಿದ ಒಂದು ವಾರದ ಭೇಟಿ ಭಾನುವಾರ ಮುಕ್ತಾಯವಾದಾಗ ಈ ಸಂಬಂಧ ಸಂಯುಕ್ತ ಪ್ರಕಟಣೆ ಹೊರಡಿಸಲಾಯಿತು.
ಮೈಸೂರಿನಲ್ಲಿ ವೈಭವದ ಜಂಬೂಸವಾರಿ
ಮೈಸೂರು, ಅ. 20– ಜಗತ್ಪ್ರಸಿದ್ಧ, ವೈವಿಧ್ಯಪೂರ್ಣ, ವರ್ಣರಂಜಿತ ಜಂಬೂಸವಾರಿ ಮೆರವಣಿಗೆಯನ್ನು ಇಂದು ಮೂರು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿ, ಆನಂದಿಸಿದರು.
ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿದು, ದಸರಾ ಕ್ರೀಡೆಗಳಿಗೆ ತಡೆಯೊಡ್ಡಿದ್ದ ಮಳೆ ಇಂದು ದಸರಾ ಮೆರವಣಿಗೆ ಆರಂಭವಾಗುವುದಕ್ಕೆ ಸ್ವಲ್ಪ ಮುಂಚೆ ನಿಂತು, ಬಿಸಿಲು ಬಂತು. ಭಾರತದ ವಿವಿಧ ಭಾಗಗಳಿಂದ ಜಂಬೂಸವಾರಿ ನೋಡಲು ಬಂದಿದ್ದ ಜನರಿಗೆ ಪ್ರಕೃತಿ ಒದಗಿಸಿಕೊಟ್ಟ ಈ ಸೌಲಭ್ಯ ಮಹದಾನಂದವನ್ನುಂಟು ಮಾಡಿತು.