ನವದೆಹಲಿ, ನ. 27– ಮೈಸೂರು ಪ್ರದೇಶ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಆಡಳಿತ ಕಾಂಗ್ರೆಸ್ ಪಕ್ಷದ ತಾತ್ಕಾಲಿಕ ಅಧ್ಯಕ್ಷ ಶ್ರೀ ಸಿ. ಸುಬ್ರಹ್ಮಣ್ಯಂ ಇಂದು ಸಸ್ಪೆಂಡ್ ಮಾಡಿದರು. ಶ್ರೀ ಡಿ. ದೇವರಾಜ ಅರಸ್ ಅವರ ಸಂಚಾಲಕತ್ವದಲ್ಲಿ ತಾತ್ಕಾಲಿಕ ಸಮಿತಿಯೊಂದನ್ನು ಅದರ ಸ್ಥಾನದಲ್ಲಿ ಅವರು ನೇಮಿಸಿದರು.
ಪ್ರದೇಶ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗಳ ವಿರುದ್ಧ ಶ್ರೀ ಸುಬ್ರಹ್ಮಣ್ಯಂ ಕ್ರಮ ಕೈಗೊಂಡಿರುವುದರಲ್ಲಿ ಮೈಸೂರು ರಾಜ್ಯದ್ದು ಎರಡನೆಯದು. ಮೊದಲಿಗೆ ಸಸ್ಪೆಂಡ್ ಆದ ಪ್ರದೇಶ ಕಾಂಗ್ರೆಸ್ ಕಾರ್ಯಸಮಿತಿಯೆಂದರೆ ಬಂಗಾಳದ್ದು.
ರಾಜ್ಯದಲ್ಲಿ ಎರಡು ಕಾಂಗ್ರೆಸ್ಗೆ ನಾಂದಿ
ಬೆಂಗಳೂರು, ನ. 27– ಪ್ರಧಾನಿ ಬೆಂಬಲಿಗರ ಕಾಂಗ್ರೆಸ್ ಅಧ್ಯಕ್ಷರು ಪ್ರದೇಶ ಕಾಂಗ್ರೆಸ್ ಕಾರ್ಯಸಮಿತಿಯನ್ನು ಸಸ್ಪೆಂಡ್ ಮಾಡಿ, ಅದರ ಸ್ಥಾನದಲ್ಲಿ ಅಡ್ಹಾಕ್ ಸಮಿತಿ ರಚಿಸಿರುವುದರಿಂದ ರಾಜ್ಯದಲ್ಲಿ ಎರಡು ಕಾಂಗ್ರೆಸ್ ಅರಂಭಿಸಿದಂತಾಗಿದೆ.
ಪ್ರದೇಶ ಕಾಂಗ್ರೆಸ್ ಹಾಗೂ ಶಾಸನಸಭೆ ಕಾಂಗ್ರೆಸ್ ಪಕ್ಷದಲ್ಲಿ ಶ್ರೀ ನಿಜಲಿಂಗಪ್ಪ ಗುಂಪಿನ ಕಾಂಗ್ರೆಸ್ಸಿಗೆ ಅತ್ಯಂತ ಬಹುಮತವಿರುವ ಕಾರಣ, ಈ ಘಟನೆಯಿಂದ ರಾಜ್ಯದಲ್ಲಿ ಏನೂ ಪರಿಣಾಮವಾಗದೆಂದು ಈ ವಲಯಗಳಲ್ಲಿ ಹೇಳಲಾಗುತ್ತಿದೆ.
‘ನಮ್ಮ ಸರ್ಕಾರದ ಭದ್ರತೆಯ ಬಗ್ಗೆ ನಮಗೆ ಚಿಂತೆಯಿಲ್ಲ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಹೇಳಿರುವುದು ಅವರಿಗಿರುವ ವಿಶ್ವಾಸದ ಸೂಚಕವೆಂದು ಈ ವಲಯಗಳಲ್ಲಿ ಭಾವಿಸಲಾಗಿದೆ.