ಬಿಹಾರದಲ್ಲಿ ಸರ್ವಪಕ್ಷ ಸರ್ಕಾರ ರಚಿಸಲು ಬಹುಮಟ್ಟಿಗೆ ಒಮ್ಮತ
ಪಟನಾ, ಜ. 12– ಎಲ್ಲ ರಾಜಕೀಯ ಪಕ್ಷಗಳೂ ಭಾಗವಹಿಸಿ ಬಿಹಾರದಲ್ಲಿ ಜನತಾ ಸರ್ಕಾರವನ್ನು ರಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ವೋದಯ ನಾಯಕ ಶ್ರೀ ಜಯಪ್ರಕಾಶ್ ನಾರಾಯಣ್ ಅವರು ಕರೆದಿದ್ದ ಎರಡು ದಿನಗಳ ಸರ್ವಪಕ್ಷ ಸಮ್ಮೇಳನದ ಕೊನೇ ದಿನವಾದ ಇಂದು ಹೆಚ್ಚು ಕಡಿಮೆ ಒಂದು ಒಟ್ಟು ಅಭಿಪ್ರಾಯಕ್ಕೆ ಬರಲಾಯಿತು.
ಪಕ್ಷರಹಿತ ಸರ್ಕಾರಕ್ಕಾಗಿ ಮಾರ್ಗಸೂಚಿಗಳನ್ನು ತಿಳಿಸಿದ ಶ್ರೀ ಜಯಪ್ರಕಾಶ್ ನಾರಾಯಣ್ ಅವರು, ರಾಜ್ಯದಲ್ಲಿನ ಎಲ್ಲ ರಾಜಕೀಯ ಪಕ್ಷಗಳು ಸಂಯುಕ್ತ ಶಾಸಕ ಪಕ್ಷವೊಂದನ್ನು ರಚಿಸಿಕೊಳ್ಳಬೇಕು ಮತ್ತು ಏಕ ವರ್ಗಾಭಿಮತದಿಂದ ನಾಯಕರೊಬ್ಬರನ್ನು ಆಯ್ಕೆ ಮಾಡಬೇಕು ಎಂದರು.
ನಗರದ ಅತ್ಯಂತ ಎತ್ತರದ ‘ನಾಗರಿಕ ಸೌಧ’ಕ್ಕೆ ಸಿದ್ಧತೆ
ಬೆಂಗಳೂರು, ಜ. 12– ನಗರ ಕಾರ್ಪೊರೇಷನ್ ಮಹಾತ್ಮ ಗಾಂಧಿ ರಸ್ತೆಯ ಮೇಯೋಹಾಲ್ ಬಳಿ ಒಂದೂಕಾಲು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಬೇಕೆಂದಿರುವ ‘ಜನೋಪಯೋಗಿ’ ಕಟ್ಟಡ ಯೋಜನೆಗೆ ಸರ್ಕಾರದ ಒಪ್ಪಿಗೆ ದೊರೆತಿದೆ.
ನಗರದ ಅತಿ ಎತ್ತರದ ಕಟ್ಟಡವಾಗಲಿರುವ ಈ ಭವನ 20ಕ್ಕೂ ಹೆಚ್ಚು ಅಂತಸ್ತುಗಳನ್ನೊಳಗೊಂಡು ಮೇಲೆ 50 ಅಡಿ ಎತ್ತರದಲ್ಲಿ ತಿರುಗುವ ಗೋಪುರ ಹೊಂದಲಿದೆ. ಕಟ್ಟಡದ ಒಟ್ಟು ಎತ್ತರ 315 ಅಡಿಗಳು. ಅಂಗಡಿಗಳು (ಷೋರೂಮ್ಸ್), ಬ್ಯಾಂಕುಗಳು, ಕಚೇರಿಗಳು, ಸಮ್ಮೇಳನಾಂಗಣಗಳು ಮತ್ತಿತರ ಸೌಕರ್ಯಗಳು ಈ ಕಟ್ಟಡದಲ್ಲಿ ಇರಲಿವೆ.