ಗಡಿ ಸಮಸ್ಯೆಗೆ ಪ್ರಧಾನಿ ಪರಿಹಾರ: ಶಹಪುರ ಮಹಾರಾಷ್ಟ್ರಕ್ಕೆ, ಬೆಳಗಾವಿ ಭಾಗ ರಾಜ್ಯದಲ್ಲೇ? ಬೆಂಗಳೂರು, ಫೆ. 20: ಮೈಸೂರು ಹಾಗೂ ಮಹಾರಾಷ್ಟ್ರಗಳ ನಡುವೆ ಬೆಳಗಾವಿ ನಗರವನ್ನು ಭಾಗ ಮಾಡಿ ಹಂಚುವುದು ಪ್ರಧಾನಿ ಗಡಿ ವಿವಾದದ ಪರಿಹಾರಕ್ಕೆ ಸೂಚಿಸಿರುವ ಸಲಹೆ ಎಂದು ತಿಳಿದುಬಂದಿದೆ.
ಬೆಳಗಾವಿಯ ಭಾಗವಾದ ಶಹಪುರ ಮಹಾರಾಷ್ಟ್ರಕ್ಕೆ ಹೋಗುವುದೂ ಬೆಳಗಾವಿಯ ಬಹುಭಾಗ ಮೈಸೂರಿನಲ್ಲಿ ಉಳಿಯುವುದೂ ಈ ಸಲಹೆಯ ಸ್ವರೂಪವೆಂದು ಗೊತ್ತಾಗಿದೆ.
ಈ ಸೂಚನೆಯು ಪ್ರಧಾನಿ ಮಾಡಿರುವ ಸಲಹೆಗಳಲ್ಲಿ ಒಂದೆಂದೂ ಒಂದು ವರದಿ ತಿಳಿಸುತ್ತದೆ. ಪ್ರಧಾನಿ ಅವರ ಸಲಹೆಗಳೇನೆಂಬುದು ನಿರ್ದಿಷ್ಟವಾಗಿ ತಿಳಿದುಬಂದಿಲ್ಲ.
ಈಗಲೇ ತೀರ್ಪಿಲ್ಲ: ಸಂಧಾನಕ್ಕೆ ಆಧಾರ ನವದೆಹಲಿ, ಫೆ. 20: ಮೈಸೂರು– ಮಹಾರಾಷ್ಟ್ರ ಗಡಿ ವಿವಾದ ಕುರಿತ ಕೇಂದ್ರದ ಸಲಹೆಗಳ ಸ್ವರೂಪವನ್ನು ತುಂಬಾ ರಹಸ್ಯವಾಗಿ ಇಡಲಾಗಿದೆ. ಆದರೆ ಅವು ಹಂಗಾಮಿ ಸಲಹೆಗಳು ಮಾತ್ರವೆಂದೂ ಸಂಧಾನಗಳ ಮೂಲಕ ಅವುಗಳನ್ನು ಮಾರ್ಪಡಿಸಬಹುದೆಂದೂ ಹೇಳಲಾಗಿದೆ.
ಸಾಮಾಜಿಕ ವ್ಯವಸ್ಥೆ ಸಾಧನೆಗೆ ಸರ್ಕಾರದ ದೃಢ ಸಂಕಲ್ಪ: ರಾಷ್ಟ್ರಪತಿ ನವದೆಹಲಿ, ಫೆ. 20: ‘ನ್ಯಾಯವಾದ ಸಾಮಾಜಿಕ ವ್ಯವಸ್ಥೆ ಸಾಧನೆ ದಿಸೆಯಲ್ಲಿ ತ್ವರಿತಗತಿಯಿಂದ ಮುನ್ನಡೆಯಲು ಸರ್ಕಾರ ಸ್ಥಿರ ಸಂಕಲ್ಪ ಮಾಡಿದೆ’ ಎಂದು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ತಿಳಿಸಿದರು.
ಇಂದು ಆರಂಭವಾದ ಮೂರು ತಿಂಗಳ ಕಾಲದ ಸಂಸತ್ ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.