ಬೆಂಗಳೂರು, ಮೇ 17– ರಾಜ್ಯದ ಕಾವೇರಿ ಯೋಜನೆಗಳಿಗೆ ಮೂರು ತಿಂಗಳಲ್ಲಿ ಮಂಜೂರಾತಿ ಸಿಕ್ಕುವ ಆಶಯವನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ರವರು ಇಂದು ಇಲ್ಲಿ ವ್ಯಕ್ತಪಡಿಸಿದರು.
ಮೈಸೂರಿನ ಯೋಜನೆಗಳಿಗೆ ಕೇಂದ್ರದ ಮಂಜೂರಾತಿ ದೊರಕಿದ ನಂತರ ತಾವು ಒಪ್ಪಂದಕ್ಕೆ ಸಹಿ ಹಾಕುವುದಾಗಿ ಶ್ರೀ ಪಾಟೀಲರು ವರದಿಗಾರರೊಡನೆ ಮಾತನಾಡುತ್ತಾ ತಿಳಿಸಿದರು.
ನಿನ್ನೆ ಮದರಾಸಿನಲ್ಲಿ ನಡೆದ ಕಾವೇರಿ ಜಲ ವಿವಾದ ಕುರಿತ ಸಮ್ಮೇಳನದಲ್ಲಿ ಭಾಗವಹಿಸಿ ಮುಖ್ಯಮಂತ್ರಿಯವರು ಇಂದು ನಗರಕ್ಕೆ ಹಿಂತಿರುಗಿದರು.
ಕೋಮುಭಾವನೆ ವಿರುದ್ಧ ಹೋರಾಡಲು ದೇಶದಾದ್ಯಂತ ಸಾಮೂಹಿಕ ಚಳವಳಿ
ನವದೆಹಲಿ, ಮೇ 17– ಕೋಮು ಗಲಭೆಗಳ ಭೀಕರತೆ ಮತ್ತು ಕೆಡುಕಿನ ವಿರುದ್ಧ ಹೋರಾಡುವುದಕ್ಕಾಗಿ ಸರ್ವ ಪಕ್ಷಗಳ ಜಂಟಿ ಸಾಮೂಹಿಕ ಚಳವಳಿಯನ್ನು ಶೀಘ್ರದಲ್ಲೇ ರಾಷ್ಟ್ರದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಈ ತಿಂಗಳು 22ರಂದು ನವದೆಹಲಿಯಲ್ಲಿ ನಡೆಯಲಿರುವ ನಾನಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಕೂಡಿದ ವ್ಯವಸ್ಥಾಪಕ ಸಮಿತಿಯ ಸಭೆಯಲ್ಲಿ ಚಳವಳಿಯ ವಿವರ ಕುರಿತು ಚರ್ಚಿಸಲಾಗುವುದು. ಪ್ರಧಾನಿ ಇಂದಿರಾ ಗಾಂಧಿ ಅವರು ಈ ಸಭೆಯ ಅಧ್ಯಕ್ಷತೆ ವಹಿಸುವರು.