ಬೆಂಗಳೂರು, ಜೂನ್ 19– ಸಂಜೆಯ ಮಳೆಯಿಂದಾಗಿ ಹೆಪ್ಪುಗಟ್ಟತೊಡಗಿದ್ದ ಚಳಿಯಲ್ಲಿ ಗಾಢ ನಿದ್ದೆಯನ್ನು ಅನುಭವಿಸಬೇಕಾಗಿದ್ದ ಸುಮಾರು ಎರಡು ಲಕ್ಷ ಜನರು ಬೀದಿ ಬೀದಿಗಳುದ್ದಕ್ಕೂ ನಿಂತು, ಇಂದು ರಾತ್ರಿ ನಗರಕ್ಕೆ ಆಗಮಿಸಿದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಅದ್ಭುತ ಸ್ವಾಗತ ನೀಡಿದರು.
ಯಶವಂತಪುರ ಸರ್ಕಲ್ನಿಂದ ರಾಜಭವನದವರೆಗಿನ ಸುಮಾರು ನಾಲ್ಕು ಮೈಲಿಗಳುದ್ದದ ದಾರಿಯಲ್ಲಿ, ಸಂದುಮೂಲೆಗಳಲ್ಲಿ ಕಾರು, ಲಾರಿಗಳ ಅಟ್ಟಗಳ ಮೇಲೆ ಮನೆ ಮಹಡಿಗಳಲ್ಲಿ ಕಿಕ್ಕಿರಿದು ನೆರೆದ ಜನಸ್ತೋಮ, ಸಂಭ್ರಮದ ಭರದಲ್ಲಿ ತಮಗೆ ತೋರಿದ ಜಯಘೋಷಗಳನ್ನು ಕೂಗಿ ಪ್ರಧಾನಿಯವರನ್ನು ಬರಮಾಡಿಕೊಂಡರು.
ಕೇಂದ್ರ ಸರ್ಕಾರ ಉರುಳಿಸಲು ಮಹಾಮೈತ್ರಿ– ಸಂಸ್ಥಾ ಕಾಂಗ್ರೆಸ್ಸಿನ ಹೀನ ಯತ್ನ: ಇಂದಿರಾ
ಬಳ್ಳಾರಿ, ಜುಲೈ 19– ತಮ್ಮ ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಸಂಸ್ಥಾ ಕಾಂಗ್ರೆಸ್ ರಚಿಸಲು ಪ್ರಯತ್ನಿಸುತ್ತಿರುವ ‘ಮಹಾಮೈತ್ರಿ’ಯನ್ನು ಕಡಿಮೆ ದರ್ಜೆಯದು ಹಾಗೂ ಅಗೌರವಯುತವಾದುದು ಎಂದು ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಟೀಕಿಸಿದರು.
ಮಧ್ಯಾಹ್ನ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಮತಿ ಗಾಂಧಿ ಅವರು ಈ ಮಹಾಮೈತ್ರಿಯಲ್ಲಿ ಮಹತ್ವವಾದುದೇನೂ ಇಲ್ಲವೆಂದು ಅಲ್ಲಗಳೆದರು.
ಇಂಥಾ ಮೈತ್ರಿ ರಚಿಸಲು ಅವರಿಗೆನಾಚಿಕೆಯಾಗಬೇಕು ಎಂದು ಟೀಕಿಸಿದರು.