ನವದೆಹಲಿ, ಆ. 4– ಪಶ್ಚಿಮ ಬಂಗಾಳ ಸರ್ಕಾರವನ್ನು ವಜಾ ಮಾಡಬೇಕೆಂಬ ಆಗ್ರಹವನ್ನು ಗೃಹ ಸಚಿವ ಶ್ರೀ ಚವಾಣರು ಲೋಕಸಭೆಯಲ್ಲಿ ತಿರಸ್ಕರಿಸಿ ‘ಈ ವಿಷಯವನ್ನು ಹಗುರವಾಗಿ ಕಾಣಬಾರದು’ ಎಂದರು.
ರಾಜ್ಯ ವಿಧಾನ ಸಭೆಯಲ್ಲಿ ಈಚಿನ ‘ಪೊಲೀಸರ ಪುಂಡಾಟಿಕೆ’ಯಿಂದ ಅಲ್ಲಿ ಶಾಂತಿ, ಶಿಸ್ತು ಭಗ್ನವಾಗಿ ಸಂವಿಧಾನ ವ್ಯವಸ್ಥೆ ಕುಸಿದು ಬಿದ್ದಿದೆಯೆಂದು ವ್ಯಕ್ತಪಡುವುದಾಗಿ ಜನಸಂಘದ ಶ್ರೀ ಕೆ.ಎಲ್. ಗುಪ್ತಾ ವಾದಿಸಿ ಅಲ್ಲಿನ ಸರ್ಕಾರವನ್ನು ವಜಾ ಮಾಡುವಂತೆ ಒತ್ತಾಯ ಮಾಡಿದ್ದರು.
ಮಾವೊ ಶುದ್ಧ ಬಡಾಯಿಕೋರ!
ವಾಷಿಂಗ್ಟನ್, ಆ. 4– ಸ್ಟಾಲಿನ್ ದೃಷ್ಟಿಯಲ್ಲಿ ಮಾವೊ ಶುದ್ಧ ‘ಬಡಾಯಿಕೋರ’. ಚೀನೀಯರೇ ಹಾಗೆ, ಶುದ್ಧ ಬಡಾಯಿಕೋರರು. ತಮ್ಮ ಬಲವನ್ನು ಅವರು ಉತ್ಪ್ರೇಕ್ಷಿಸಿ ಹೇಳುವರಲ್ಲದೆ ಶತ್ರುಗಳ ಬಲವನ್ನೂಉತ್ಪ್ರೇಕ್ಷಿಸಿ ಹೇಳುತ್ತಾರೆ.
ಅಮೆರಿಕದ ಗೋಪ್ಯ ದಾಖಲೆಗಳು ಈ ವಿಷಯಗಳನ್ನು ಹೊರಗೆಡಹಿವೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕದ ದಂಡನಾಯಕರಾಗಿದ್ದ ದಿವಂಗತ ಜನರಲ್ ಜಾರ್ಜ್ ಸಿ. ಮಾರ್ಷಲ್ ಅವರು ‘ರಷ್ಯನ್ನರ ಆಲೋಚನಾ ವಿಧಾನಗಳೇ ಭಿನ್ನ’ ಎಂದು ಭಾವಿಸಿದ್ದಾರೆ.