ನವದೆಹಲಿ, ಡಿ. 24– ಮಹಾತ್ಮ ಗಾಂಧಿ ಜೀವನಾರಭ್ಯ ಶ್ರಮಿಸಿ, ಕಡೆಗೆ ಅದಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸತ್ಯ, ಅಹಿಂಸೆ ಮತ್ತು ರಾಷ್ಟ್ರಸೇವೆ ಹಾಗೂ ಮಾನವ ಸೇವೆಗಳ ಮಹಾನ್ ಆದರ್ಶ ಸಾಧನೆಗೆ ಶ್ರಮಿಸಲು ಸಂಸತ್ತಿನ ಎರಡು ಸದನಗಳೂ ಇಂದು ಮತ್ತೊಮ್ಮೆ ದೀಕ್ಷೆ ತೊಟ್ಟವು.
ಎರಡು ಸದನಗಳ ಪ್ರಸಕ್ತ ಅಧಿವೇಶನದ ಕಡೇ ದಿನವಾದ ಇಂದು ಸ್ಪೀಕರ್ ಧಿಲ್ಲೋನ್ ಮತ್ತು ರಾಜ್ಯಸಭೆ ಅಧ್ಯಕ್ಷ ಪಾಠಕ್ ಮಂಡಿಸಿದ ಏಕರೀತಿಯ ನಿರ್ಣಯದಲ್ಲಿ ರಾಷ್ಟ್ರಪಿತನ ಜನ್ಮಶತಾಬ್ದಿಯ ಗೌರವಾರ್ಥ, ಶ್ರದ್ಧಾಂಜಲಿ ಅರ್ಪಿಸಲಾಯಿತು.
ರಾಜಧನ ರದ್ದು ನಿರ್ಧಾರ ಸ್ಥಿರ: ಶೀಘ್ರವೇ ಮಸೂದೆ
ನವದೆಹಲಿ, ಡಿ. 24– ರಾಜಧನ ರದ್ದುಪಡಿಸುವ ಸರ್ಕಾರದ ನಿರ್ಧಾರ ‘ಸ್ಥಿರ’ವೆಂದು ಮಾಜಿ ಸಂಸ್ಥಾನಾಧೀಶರು ಗಳಿಗೆ ಇಂದು ಕೇಂದ್ರ ಗೃಹ ಸಚಿವ ಚವಾಣ್ರವರು ಸ್ಪಷ್ಟವಾಗಿ ತಿಳಿಸಿದರು.
ಧಿರಂಗಧರ ಮಹಾರಾಜರು, ಬರೋಡದ ಗಾಯಕವಾಡರು ಮತ್ತು ಭೋಪಾಲದ ಬೇಗಂ ಮುಂತಾದವರು ಭಾಗವಹಿಸಿದ್ದ ಸಭೆಯಲ್ಲಿ ಚವಾಣ್ರು ಈ ವಿಚಾರವನ್ನು ಪ್ರಕಟಿಸಿದರು.
ರೂಡ್ಗಿ ದುರಂತದ ಖಟ್ಲೆ ತೀರ್ಪು:14 ಮಂದಿಗೆ ಗಲ್ಲು
ಬಿಜಾಪುರ, ಡಿ. 24– ರಾಜ್ಯದಲ್ಲಿ ಅತ್ಯಂತ ಕುತೂಹಲ ಕೆರಳಿಸಿದ್ದ ಮುದ್ದೇಬಿಹಾಳ ತಾಲ್ಲೂಕಿನ ರೂಡ್ಗಿ ಗ್ರಾಮದ ಸಾಮೂಹಿಕ ಕೊಲೆ ಮೊಕದ್ದಮೆಯ ವಿಚಾರಣೆ ನಡೆಸಿದ ಅಡಿಷನಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಶ್ರೀ ನಾಗರಾಜ್ ಅವರು ಈ ದಿನ ತೀರ್ಪಿತ್ತು 14 ಮಂದಿಗೆ ಮರಣದಂಡನೆ, 38 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.