ಮೈಸೂರು, ಫೆ. 24: ರಂಗನತಿಟ್ಟು ಪಕ್ಷಿಧಾಮದಲ್ಲಿ ಅಪರೂಪದ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಳಿದಿರುವ ಈ ಸಂದರ್ಭದಲ್ಲಿ ಅವುಗಳನ್ನು ನೋಡ ಬರುವ ವಿದೇಶಿ ಪ್ರವಾಸಿಗರು ದುಬಾರಿ ಪ್ರವೇಶ ಶುಲ್ಕದಿಂದ ಬೇಸತ್ತು ವಾಪಸು ಮರಳುತ್ತಿದ್ದಾರೆ ಎಂದು ವರದಿಗಳಿವೆ.
ದುಬಾರಿ ಪ್ರವೇಶ ದರದ ಬಗ್ಗೆ ವಿದೇಶಿ ಪ್ರವಾಸಿಗರು ಮೊದಲು ಗೊಣಗುಟ್ಟಿದರೂ ಕ್ರಮೇಣ ಹೊಂದಿಕೊಂಡಿದ್ದರು.
ಈಚಿನ ದಿನಗಳಲ್ಲಿ ವಿದೇಶಿ ಪ್ರವಾಸಿಗರು ದೇಶೀಯ ಪ್ರವಾಸಿಗರ ಜತೆ ಬಂದಾಗ ಪ್ರವೇಶ ದರದಲ್ಲಿ ಇರುವ ಅಜಗಜಾಂತರ (ದೇಶೀಯ ಪ್ರವಾಸಿಗರಿಗೆ 2 ರೂಪಾಯಿ, ವಿದೇಶಿ ಪ್ರವಾಸಿಗರಿಗೆ 100 ರೂಪಾಯಿ) ಉಭಯತ್ರರನ್ನೂ ದಂಗುಬಡಿಸಿದೆ.
ಆದ್ದರಿಂದಲೇ ವಿದೇಶಿ ಪ್ರವಾಸಿಗರು ದುಬಾರಿ ಪ್ರವೇಶ ದರ ಕೊಡಲು ತಕರಾರು ಮಾಡುತ್ತಿರುವುದು ನಿತ್ಯದ ದೃಶ್ಯವಾಗಿದೆ.
ಬೊಫೋರ್ಸ್: ಸ್ವೀಡನ್ಗೆ ಶೀಘ್ರ ವಿವರ ರವಾನೆ
ನವದೆಹಲಿ, ಫೆ. 24 (ಯುಎನ್ಐ): ಬೊಫೋರ್ಸ್ ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಹೆಸರನ್ನು ಬಹಿರಂಗ ಪಡಿಸುವುದಕ್ಕೆ ಸಂಬಂಧಿಸಿ ಎಲ್ಲ ವಿವರಗಳನ್ನು ಭಾರತ ಸರ್ಕಾರ ಸದ್ಯದಲ್ಲೇ ಸ್ವೀಡನ್ಗೆ ರವಾನಿಸಲಿದೆ.
ಇಂದು ರಾತ್ರಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ, ಸ್ವೀಡನ್ನ ಹೊಸ ಸರ್ಕಾರದ ಒಡೆತನದಲ್ಲಿರುವ ಬೊಫೋರ್ಸ್ ಎ.ಬಿ. ಸಂಸ್ಥೆಯ ಉಪಾಧ್ಯಕ್ಷ ಸೊರೇನ್ ಜಿಂದಾಲ್, ಹಗರಣದಲ್ಲಿ ಶಾಮೀಲಾಗಿರುವ ಎಲ್ಲರ ಹೆಸರೂ ಬಹಿರಂಗಗೊಳ್ಳುವುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.