ಮದ್ರಾಸ್, ಮೇ 16: ಕಾವೇರಿ ನದಿ ನೀರು ಹಂಚಿಕೆಯಲ್ಲಿ ತಮಿಳುನಾಡು, ಮೈಸೂರು ಮತ್ತು ಕೇರಳ ರಾಜ್ಯಗಳ ಮಧ್ಯೆ ತಲೆಹಾಕಿರುವ ವಿವಾದವು ಪರಿಹಾರದ ಹೊಸ್ತಿಲಿಗೆ ತಲುಪಿದ್ದು, ಮುಂದಿನ ಮೂರು ತಿಂಗಳಲ್ಲಿ ಅಂತಿಮ ಒಪ್ಪಂದ ಕಾಣುವ ಸಾಧ್ಯತೆ ಇದೆ.
ಅಂತಿಮ ಒಪ್ಪಂದ ಮಾಡಿಕೊಳ್ಳಲು ಸಹಾಯವಾಗುವಂತೆ ಆಯಾ ರಾಜ್ಯಗಳಿಗೆ ಸೇರಿದ ಎಂಜಿನಿಯರುಗಳು ಅಗತ್ಯವಿರುವ ಅಂಕಿ–ಅಂಶಗಳನ್ನು ಮೂರು ತಿಂಗಳೊಳಗಾಗಿ ಸಂಗ್ರಹಿಸುವ ಸಲಹೆಗೆ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಇಂದು ಇಲ್ಲಿ ಸಮ್ಮತಿ ಇತ್ತರು.
ಚರ್ಚೆ ಸೌಹಾರ್ದ ವಾತಾವರಣದಲ್ಲಿ ನಡೆದು ಬಿಕ್ಕಟ್ಟು ಸಾಕಷ್ಟು ಸಡಿಲಗೊಂಡಿರುವುದಾಗಿ ಏಳು ಗಂಟೆಗಳ ಮಾತುಕತೆ ನಂತರ ಕೇಂದ್ರ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸಚಿವ ಕೆ.ಎಲ್.ರಾವ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.