ಬೆಂಗಳೂರು, ಜೂನ್ 23– ‘ಕಾರ್ಯಕ್ರಮದಂತೆ ಎಲ್ಲವೂ ಸುಗಮವಾಗಿ ನಡೆದರೆ’ ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡುವ ಯೋಜನೆ ಮುಂದಿನ ಮೂರು ಅಥವಾ ಮೂರೂವರೆ ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ನಿನ್ನೆ ಇಲ್ಲಿ ಈ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ ನಗರ ಜಲಮಂಡಳಿಯ ಅಧ್ಯಕ್ಷ ಶ್ರೀ ಐ.ಎಂ.ಮಗ್ದುಂ ಅವರು ‘30 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆ ನಗರದ ನೀರು ಪೂರೈಕೆ ಪ್ರಮಾಣವನ್ನು ದಿನವೊಂದಕ್ಕೆ 30 ದಶಲಕ್ಷ ಗ್ಯಾಲನ್ಗಳಷ್ಟು ಹೆಚ್ಚಿಸುವುದು’ ಎಂದರು.
ನಗರಗಳ ಅಭಿವೃದ್ಧಿ ಕಾರ್ಪೊರೇಷನ್ ಮುಂದಿನ ತಿಂಗಳು ಅಸ್ತಿತ್ವಕ್ಕೆ
ಬೆಂಗಳೂರು, ಜೂನ್ 23– ರಾಜ್ಯದ ಪಟ್ಟಣಗಳಿಗೆ ಸಾಲದ ರೂಪದಲ್ಲಿ ಹಣ ಒದಗಿಸುವ ಉದ್ದೇಶಕ್ಕಾಗಿ ನಿರ್ಮಿಸಲಾಗುವ ಪಟ್ಟಣಗಳ ಅಭಿವೃದ್ಧಿ ಕಾರ್ಪೊರೇಷನ್ನ ರೂಪುರೇಷೆಗಳು ಸಿದ್ಧವಾಗಿದ್ದು ಮುಂದಿನ ತಿಂಗಳು ಕಾರ್ಪೊರೇಷನ್ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ.
ಪುರಸಭೆಗಳು ತಾವೇ ಸಾಲವೆತ್ತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿಲ್ಲವಾದ್ದರಿಂದ ಪಟ್ಟಣ ಅಭಿವೃದ್ಧಿ ಕಾರ್ಪೊರೇಷನ್, ಡಿಬೆಂಚರ್ ಸಾಲಗಳ ಮೂಲಕ ಹಣ ಸಂಗ್ರಹಿಸಿ ಪುರಸಭೆಗಳಿಗೆ ಸಾಲವಾಗಿ ನೀಡುವುದು.