ನವದೆಹಲಿ, ಜುಲೈ 28– ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆಯೆಂದೂ ಪ್ರಜಾಸತ್ತೆ ಹಾಗೂ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕಲು ಶಾಸನವೊಂದನ್ನು ಶೀಘ್ರವೇ ತರಲಾಗುವುದೆಂದೂ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ರಾಜ್ಯಸಭೆಗೆ ತಿಳಿಸಿದರು.
ಗೆರಿಲ್ಲಾ ಸಮರ ಪ್ರಾರಂಭಿಸಿ ಚೀನಾದ ನೆರವಿನೊಡನೆ ಭಾರತವನ್ನು ವಿಮೋಚನೆ ಗೊಳಿಸಲು ತಾನು ನಿರ್ಧರಿಸಿರುವುದಾಗಿ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷವು ಘೋಷಿಸಿರುವುದರ ಬಗ್ಗೆ ಪ್ರಶ್ನೋತ್ತರ ಕಾಲದಲ್ಲಿ ಕೋಲಾಹಲಯುಕ್ತ ಚರ್ಚೆ ನಡೆದಾಗ ಪ್ರಧಾನಮಂತ್ರಿಗಳು ಈ ರೀತಿ ತಿಳಿಸಿದರು.
ಧರ್ಮತೇಜ ಬಂಧನ
ನವದೆಹಲಿ, ಜುಲೈ 28– ಜಯಂತಿ ನೌಕಾ ಸಾರಿಗೆ ಕಾರ್ಪೊರೇಷನ್ ಮಾಜಿ ಅಧ್ಯಕ್ಷ ಧರ್ಮತೇಜ ಅವರನ್ನು ಅಂತರ ರಾಷ್ಟ್ರೀಯ ಪೊಲೀಸರು ಕಳೆದ ಶುಕ್ರವಾರ ಲಂಡನ್ನಿನಲ್ಲಿ ಬಂಧಿಸಿದರು.
ಲಕ್ಷಾಂತರ ರೂಪಾಯಿ ಹಣ ದುರುಪಯೋಗದ ಸಂಬಂಧದಲ್ಲಿ ಭಾರತದ ಪೊಲೀಸರಿಗೆ ಬೇಕಾಗಿರುವ ಡಾ. ತೇಜ ಅವರನ್ನು ಇಂದು ಮಧ್ಯಾಹ್ನ ಲಂಡನ್ನಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ತಿಂಗಳ 31ರವರೆಗೆ ಡಾ. ತೇಜ ಅವರನ್ನು ಕಸ್ಟಡಿಯಲ್ಲಿಟ್ಟುಕೊಳ್ಳುವಂತೆ ಮ್ಯಾಜಿಸ್ಟ್ರೇಟರು ಆಜ್ಞೆ ಮಾಡಿದ್ದಾರೆ.