ಬೆಂಗಳೂರು, ಅ. 1 – ಬ್ಯಾಂಕಿಗೆ ಹೋಗಿ ಚೆಕ್ ಬರೆದುಕೊಟ್ಟರೆ, ಲೋಹದ ಒಂದು ‘ಟೋಕನ್’ ಕೂಡುತ್ತಾರೆ. ಆ ಟೋಕನ್ ಮೇಲೆ ಒಂದು ನಂಬರು ಇರುತ್ತದೆ. ಕೆಲವು ನಿಮಿಷಗಳ ನಂತರ ಕೌಂಟರ್ ಒಳಗಿರುವ ಕ್ಯಾಷಿಯರ್ ನಂಬರ್ ‘ಕೂಗು’ತ್ತಾರೆ. ಟೋಕನ್ ಒಳಗೆ ಸರಿಸಿದಾಗ ಹಣ ಕೈ ಸೇರುತ್ತದೆ.
ಗಾಂಧಿ ನಗರದಲ್ಲಿರುವ ಸಿಂಡಿಕೇಟ್ ಬ್ಯಾಂಕಿನಲ್ಲಿ ಇನ್ನು ಮುಂದೆ ಈ ‘ಕೂಗು’ ಇಲ್ಲ. ಅದರ ಬದಲು ಚೆಕ್ಕು ನಗದಿಗೆ ಸಿದ್ಧವಾದಾಗ ಕೌಂಟರ್ ಮೇಲೆ ಟೋಕನ್ನಲ್ಲಿರುವ ಅಂಕಿಗಳು ಕಾಣಿಸಿಕೊಳ್ಳುತ್ತವೆ. ಇದೊಂದು ಎಲೆಕ್ಟ್ರಾನಿಕ್ ಉಪಕರಣದ ಸಾಧನ. ಭಾರತದಲ್ಲಿಯೇ ಪ್ರಥಮ.
ವಿದ್ಯಾರ್ಥಿ ಚಳವಳಿ ಅಂತ್ಯ: ತನಿಖೆಗೆ ರಾಜ್ಯಪಾಲರ ಸಮ್ಮತಿ
ಬೆಂಗಳೂರು, ಅ. 1– ನಾಗರಿಕ ಶಾಂತಿ ಸಮಿತಿಯ ಪ್ರಯತ್ನ, ಸರ್ಕಾರ ಹಾಗೂ ವಿದ್ಯಾರ್ಥಿ ನಾಯಕರ ಸಹಕಾರದ ಫಲವಾಗಿ ಎಕ್ಸ್ಪೊ ನಿಯೋಗದ ಆಯ್ಕೆ ವಿರುದ್ಧ ಆಗಸ್ಟ್ 31ರಂದು ಆರಂಭವಾದ ಕಾಲೇಜ್ ವಿದ್ಯಾರ್ಥಿ ಚಳವಳಿ ಇಂದು ಮುಕ್ತಾಯವಾಯಿತು.
ಎಲ್ಲ ಸ್ವರೂಪದ ಚಳವಳಿಯನ್ನು ತತ್ಕ್ಷಣ ನಿಲ್ಲಿಸಿ, ತರಗತಿಗಳಿಗೆ ಹಿಂತಿರುಗಬೇಕೆಂದು ರಾಜ್ಯದಾದ್ಯಂತ ಇರುವ ಕಾಲೇಜ್ ವಿದ್ಯಾರ್ಥಿ ವೃಂದಕ್ಕೆ ಬೆಂಗಳೂರು ವಿದ್ಯಾರ್ಥಿ ಕ್ರಿಯಾ ಸಮಿತಿ ಸರ್ವಾನುಮತದಿಂದ ಪ್ರಾರ್ಥಿಸಿದೆ.