ಶ್ರೇಷ್ಠ ಚಿತ್ರವೆಂದು ‘ಗೆಜ್ಜೆಪೂಜೆಗೆ’ 50 ಸಹಸ್ರ ರೂ ಬಹುಮಾನ
ಬೆಂಗಳೂರು, ಸೆ. 15– ‘ಚಿತ್ರಜ್ಯೋತಿ’ ಅವರ ‘ಗೆಜ್ಜೆಪೂಜೆ’ 1969–70ನೇ ಸಾಲಿನ ಶ್ರೇಷ್ಠ ಚಿತ್ರವೆಂದು ರಾಜ್ಯ ಸರ್ಕಾರದಿಂದ 50 ಸಹಸ್ರ ರೂ ನಗದು ಬಹುಮಾನ ಪಡೆದಿದೆ.
‘ಭಾರತ ಎಂಟರ್ಪ್ರೈಸಸ್’ ಅವರ ‘ಉಯ್ಯಾಲೆ’, ‘ನವೋದಯ’ ಅವರ ‘ಮುಕ್ತಿ’ ಚಿತ್ರಗಳು ಶ್ರೇಷ್ಠ ಚಿತ್ರಗಳೆಂದು ತಲಾ 12,500 ರೂ, ದ್ವಿತೀಯ ನಗದು ಬಹುಮಾನ ಪಡೆದಿವೆ.
‘ಚಿತ್ರಶ್ರೀ ಇಂಟರ್ನ್ಯಾಷನಲ್’ ಅವರ ‘ಎರಡು ಮುಖ’ ಚಿತ್ರ ತೃತೀಯ ಶ್ರೇಷ್ಠ ಚಿತ್ರ ಎಂದು 10 ಸಹಸ್ರ ರೂ ನಗದು ಬಹುಮಾನ ಪಡೆದಿದೆ.
‘ಆತ್ಮಸಾಕ್ಷಿ ವಿರುದ್ಧ ಇಂದಿರಾ ಸಂಪುಟ’
ಕೊಚ್ಚಿ, ಸೆ. 15– ‘ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನು ಶ್ರೀಮತಿ ಇಂದಿರಾ ಗಾಂಧಿ ಸಂಪುಟ ಸೇರಿದೆ. ಈ ತಪ್ಪಿಗಾಗಿ ದಂಡವನ್ನು ತೆತ್ತೆ’ ಎಂದು ಮಾಜಿ ಉಪಪ್ರಧಾನಮಂತ್ರಿ ಮುರಾರಜಿ ದೇಸಾಯಿಯವರು ಇಂದು ಇಲ್ಲಿ ತಿಳಿಸಿದರು.
‘ಶ್ರೀಮತಿ ಗಾಂಧಿಯವರು ನನ್ನಿಂದ ಅರ್ಥಸಚಿವ ಖಾತೆಯನ್ನು ಕಿತ್ತುಕೊಂಡ ಬಗೆ, ಅಂಥ ಪ್ರಕರಣ ಪ್ರಜಾಸತ್ತೆಯ ಇತಿಹಾಸದಲ್ಲೇ ಮತ್ತೊಂದಿಲ್ಲ’ ಎಂದು ಅವರು ನುಡಿದರು.