ಬೀಜಿಂಗ್: ಭಾರತ-ಚೀನಾ ಗಡಿ ವಿವಾದವನ್ನು ಪ್ರಚೋದಿಸಬಾರದು ಮತ್ತು ಅಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎರಡೂ ದೇಶಗಳು ಬದ್ಧವಾಗಿರಬೇಕು ಎಂದು ಚೀನಾ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.
ಅರುಣಾಚಲ ಪ್ರದೇಶದ ಅಸಫಿಲಾ ಪ್ರದೇಶದಲ್ಲಿ ಭಾರತದ ಪಡೆಗಳು ನಿಯಮ ಉಲ್ಲಂಘಿಸಿ ಗಸ್ತು ತಿರುಗಿವೆ ಎಂದು ಚೀನಾ ಆರೋಪಿಸಿದೆ. ಆದರೆ, ಈ ಆರೋಪವನ್ನು ಭಾರತ ತಳ್ಳಿಹಾಕಿದೆ.
ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುವಾಂಗ್, ‘ಗಡಿ ವಿವಾದ ಕುರಿತ ನಿರ್ಣಯದ ಪ್ರಕಾರ, ಭಾರತವು ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಗೆಗಿನ ಒಪ್ಪಂದದ ನಿಯಮಾವಳಿಗೆ ಬದ್ಧವಾಗಿರುತ್ತದೆ. ಎಲ್ಒಸಿ ಬಗ್ಗೆ ಗೌರವ ಹೊಂದಿದೆ’ ಎಂಬ ವಿಶ್ವಾಸವಿದೆ ಎಂದಿದ್ದಾರೆ.
‘ಗಡಿವಿವಾದದ ಬಗ್ಗೆ ಚೀನಾ ಖಚಿತ ಮತ್ತು ಸ್ಪಷ್ಟ ನಿಲುವು ಹೊಂದಿದೆ. ಅರುಣಾಚಲ ಪ್ರದೇಶವನ್ನು ಭಾರತದ ಭಾಗ ಎಂದು ಪರಿಗಣಿಸಿಲ್ಲ. ಈ ವಿವಾದಕ್ಕೆ ಎರಡೂ ದೇಶಗಳು ಪರಸ್ಪರ ಒಪ್ಪಿಗೆಯಾಗುವ ಪರಿಹಾರ ಸೂತ್ರ ಕಂಡುಕೊಳ್ಳಲಿವೆ’ ಎಂದು ಅವರು ತಿಳಿಸಿದ್ದಾರೆ.