ಮೈಸೂರು, ನ. 21– ‘ತಮ್ಮದೇ ಆದ ಭಾಷೆಯಲ್ಲಿ ವಿಶ್ವಕೋಶ ಬೇಕು’ ಎಂಬ ಕನ್ನಡಿಗರ ಅನೇಕ ವರ್ಷಗಳ ಕನಸು ಇಂದು ನನಸಾಗಿ ಅವರ ಹಂಬಲ ಈಡೇರಿತು.
ರಾಜ್ಯದ ಶಿಕ್ಷಣ ಸಚಿವ ಶ್ರೀ ಕೆ.ವಿ.ಶಂಕರಗೌಡ ಅವರು ಇಂದು 14 ಸಂಪುಟಗಳ ವಿಶ್ವಕೋಶದ ಪ್ರಥಮ ಸಂಪುಟವನ್ನು ಬಿಡುಗಡೆ ಮಾಡಿದರು.
ರಾಷ್ಟ್ರಕವಿ ‘ಕುವೆಂಪು’ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದು,
ಕಳೆದ ಕೆಲವು ತಿಂಗಳುಗಳ ಹಿಂದೆ ಅಪೊಲೊ–11ರ ಗಗನಯಾತ್ರಿಗಳು ಚಂದ್ರಗ್ರಹವನ್ನು ತಲಪಿದ ಸುದ್ದಿ
ಕೇಳಿದಾಗ ಆದಷ್ಟೇ ರೋಮಾಂಚನ ವಿಶ್ವಕೋಶದ ಬಿಡುಗಡೆಯಿಂದ ಇಂದು ತಮಗುಂಟಾಗಿದೆಯೆಂದು ತಿಳಿಸಿದರು.
ಎಸ್ಸೆನ್ ಪದಚ್ಯುತಿ, ಹೊಸ ಅಧ್ಯಕ್ಷರ ಆಯ್ಕೆ ಖಚಿತ
ನವದೆಹಲಿ, ನ. 21– ಶ್ರೀ ಎಸ್.ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರ್ಣಯವನ್ನು ನಾಳೆ ಇಲ್ಲಿ ಸಮಾವೇಶಗೊಳ್ಳಲಿರುವ ಎ.ಐ.ಸಿ.ಸಿ. ಅಧಿವೇಶನ ಅಂಗೀಕರಿಸುವುದು ಖಂಡಿತ.
ಒಂದು ತಿಂಗಳ ನಂತರ ನಡೆಯಲಿರುವ ಪ್ರತಿನಿಧಿಗಳ ಪೂರ್ಣಾಧಿವೇಶನವು
ಸ್ಥಿರೀಕರಿಸುವವರೆಗೆ ಮಾತ್ರ ನೂತನ ಅಧ್ಯಕ್ಷರು ತಾತ್ಕಾಲಿಕವಾಗಿ ಅಧಿಕಾರದಲ್ಲಿರುವರೇ ಅಥವಾ ಇನ್ನೂ ಒಂದು ಇಲ್ಲವೇ ಎರಡು ವರ್ಷ ಕಾಲ ಅಧಿಕಾರದಲ್ಲಿ ಮುಂದುವರಿಯುವರೇ ಎಂಬುದು
ಇನ್ನೂ ಖಚಿತವಾಗಿಲ್ಲ.
ಕೇಂದ್ರ ನೌಕರರ ವೇತನ ಪರಿಷ್ಕಾರಕ್ಕಾಗಿ ಆಯೋಗ
ನವದೆಹಲಿ, ನ. 21– ಕೇಂದ್ರ ಸರ್ಕಾರದ ನೌಕರರಿಗಾಗಿ ಮೂರನೇ ವೇತನ ಆಯೋಗವನ್ನು ನೇಮಕ ಮಾಡಲು
ಕೇಂದ್ರ ಸರ್ಕಾರವು ತತ್ವಶಃ ನಿರ್ಧರಿಸಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ
ಅವರು ಇಂದು ಲೋಕಸಭೆಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.