ಬ್ಯಾಂಕ್ ರಾಷ್ಟ್ರೀಕರಣದಂಥ ಕ್ರಮಗಳು ಸರ್ಕಾರಕ್ಕೆ ಅಪಾಯ: ದೇಸಾಯಿ ಎಚ್ಚರಿಕೆ
ನವದೆಹಲಿ, ಜೂನ್ 19– ಬ್ಯಾಂಕ್ ರಾಷ್ಟ್ರೀಕರಣದಂಥ ಮತ್ತಷ್ಟು ಕ್ರಮಗಳನ್ನು ಕೈಗೊಂಡಲ್ಲಿ ಅದರಿಂದ ‘ಅಪಾಯ’ ಉಂಟಾಗುತ್ತದೆಂದು ಮಾಜಿ ಉಪಪ್ರಧಾನಿ ಮುರಾರಜಿ ದೇಸಾಯಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಟೋಕಿಯೊದಿಂದ ಪ್ರಕಟವಾಗುವ ತ್ರೈಮಾಸಿಕ ಪತ್ರಿಕೆ ‘ಪೆಸಿಫಿಕ್ ಕಮ್ಯುನಿಟಿ’ಯ ಇತ್ತೀಚಿನ ಸಂಚಿಕೆಯಲ್ಲಿ ಬರೆದ ಲೇಖನದಲ್ಲಿ ಅವರು ಈ ರೀತಿ ತಿಳಿಸಿದ್ದಾರೆ.
ರಾಜಕೀಯ ಉದ್ದೇಶಕ್ಕಾಗಿ ಆತುರಾತುರವಾಗಿ ಕೈಗೊಂಡ ಈ ಬ್ಯಾಂಕ್ ರಾಷ್ಟ್ರೀಕರಣ ಕ್ರಮವು ಷೇರುಪೇಟೆಯಲ್ಲಿ ಭೀತಿಯನ್ನು ಹುಟ್ಟಿಸಿದೆ ಎಂದೂ ಅವರು ಒತ್ತಿ ಹೇಳಿದ್ದಾರೆ.
ಬ್ರಿಟನ್ನಿಗೆ ಮತ್ತೆ ಟೋರಿ ಸರ್ಕಾರ: ಲೇಬರ್ ಪಕ್ಷಕ್ಕೆ ಅನಿರೀಕ್ಷಿತ ಸೋಲು
ಲಂಡನ್, ಜೂನ್ 19– ಬ್ರಿಟಿಷ್ ಮಹಾಚುನಾವಣೆಗಳಲ್ಲಿ ಅತ್ಯಂತ ಅನಿರೀಕ್ಷಿತ ಫಲಿತಾಂಶ ಇಂದು ಪ್ರಕಟವಾಗಿದೆ.
ಈ ಚುನಾವಣೆಯಲ್ಲಿ ಎಡ್ವರ್ಡ್ ಹೀತ್ ನಾಯಕತ್ವದ ಕನ್ಸರ್ವೆಟಿವ್ (ಟೋರಿ) ಪಕ್ಷವು ಹೆರಾಲ್ಡ್ ವಿಲ್ಸನ್ರ ಲೇಬರ್ ಸರ್ಕಾರವನ್ನು ಪದಚ್ಯುತಗೊಳಿಸಿ ಮತ್ತೆ ಅಧಿಕಾರಕ್ಕೆ ಬಂದಿತು.
ಕಾಮನ್ಸ್ ಸಭೆಯ 630 ಸ್ಥಾನಗಳಲ್ಲಿ 316ನೇ ಸ್ಥಾನವನ್ನು ಕನ್ಸರ್ವೆಟಿವ್ ಪಕ್ಷ ಗೆದ್ದಾಗ, ಈ ಶತಮಾನದಲ್ಲಿ ಬ್ರಿಟನ್ನಿನ ಪ್ರಥಮ ಅವಿವಾಹಿತ ಪ್ರಧಾನಿಯಾಗಿ ಎಡ್ವರ್ಡ್ ಹೀತ್ ಅಧಿಕಾರಕ್ಕೆ ಬರುವುದು ಖಚಿತವಾಯಿತು.