ನಿರುದ್ಯೋಗ ಪರಿಸ್ಥಿತಿ ಅಧ್ಯಯನಕ್ಕೆ ಶೀಫ್ರವೇ ತಜ್ಞರ ಸಮಿತಿ ನೇಮಕ
ನವದೆಹಲಿ, ಆ. 27– ರಾಷ್ಟ್ರದಲ್ಲಿರುವ ನಿರುದ್ಯೋಗ ಪರಿಸ್ಥಿತಿಯ ಅಧ್ಯಯನಕ್ಕಾಗಿ ತಜ್ಞರ ಸಮಿತಿಯೊಂದನ್ನು ಸರ್ಕಾರ ಶೀಘ್ರದಲ್ಲೇ ನೇಮಕ ಮಾಡಲಿದೆ.
ಕಾರ್ಮಿಕ ಶಾಖೆಯ ಸ್ಟೇಟ್ ಸಚಿವ ಭಗವತ್ ಝಾ ಆಜಾದ್ರವರು ಇಂದು ಲೋಕಸಭೆಯ ಪ್ರಶ್ನೋತ್ತರ ಕಾಲದಲ್ಲಿ ಭೂಪೇಶ ಗುಪ್ತರಿಗೆ ಈ ವಿಷಯ ತಿಳಿಸಿದರು.
ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಾಗಿ ಸರ್ಕಾರ ಈಗ ಹುಡುಕುತ್ತಿದೆ ಯೆಂದೂ ಉಳಿದ ವಿವರಗಳನ್ನು ಈಗಾಗಲೇ ಆಖೈರುಗೊಳಿಸಲಾಗಿದೆ ಎಂದೂ ಸಚಿವರು ಹೇಳಿದರು.
ಅಣ್ವಸ್ತ್ರ ಸ್ಫೋಟಕ್ಕೆ ರಹಸ್ಯ ಸಿದ್ಧತೆ ಇಲ್ಲ: ಇಂದಿರಾ
ನವದೆಹಲಿ, ಆ. 27– ಅಣ್ವಸ್ತ್ರ ಸಾಧನವೊಂದನ್ನು ಸ್ಫೋಟಿಸಲು ರಹಸ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆಯೆಂಬ ವರದಿಗಳನ್ನು ಪ್ರಧಾನಿ ಇಂದಿರಾ ಗಾಂಧಿಯವರು ಇಂದು ರಾಜ್ಯಸಭೆಯಲ್ಲಿ ನಿರಾಕರಿಸಿದರು.
ಆಡಳಿತ ಪಕ್ಷದ ಪರವಾಗಿ ಮತಗಳನ್ನು ಪಡೆಯುವ ಉದ್ದೇಶದಿಂದ ಈ ಬಗೆಗೆ ಅಧಿಕೃತ ಪ್ರಕಟಣೆಯನ್ನು ಚುನಾವಣೆಗೆ ಮುನ್ನ ಹೊರಡಿಸಲಾಗುವುದೆಂಬ ಮಾತುಗಳನ್ನು ಅವರು ‘ನಿಜವಲ್ಲ’ವೆಂದು ಕರೆದರು.