ತುಮಕೂರು: ಸ್ಮಾರ್ಟ್ ಸಿಟಿ ಕಂಪನಿ ವತಿಯಿಂದ ನಗರದ ಅಮಾನಿಕೆರೆಯಲ್ಲಿ ಕೊಳಚೆ ನೀರು ಸಂಸ್ಕರಣೆ ಘಟಕ ಸ್ಥಾಪಿಸುವುದನ್ನು ಮಹಾನಗರ ಪಾಲಿಕೆಯ ಆರು ಸದಸ್ಯರು ತೀವ್ರವಾಗಿ ವಿರೋಧಿಸಿದ್ದಾರೆ.
ಪಾಲಿಕೆ ಸದಸ್ಯರಾದ ಲಲಿತಾ ರವೀಶ್, ಟಿ.ಎಚ್.ವಾಸುದೇವ, ಟಿ.ಎಚ್.ಬಾಲಕೃಷ್ಣ, ಹನುಮಂತರಾಯಪ್ಪ, ರಾಜಣ್ಣ, ವೆಂಕಟಪ್ಪ ಅವರು ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಸ್ಮಾರ್ಟ್ ಸಿಟಿ ಸಲಹಾ ಮಂಡಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಅಮಾನಿಕೆರೆಯಲ್ಲಿ ಶುಕ್ರವಾರ ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷ ವಾಸುದೇವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಲಹಾ ಮಂಡಳಿ ಸದಸ್ಯ ಕುಂದರನಹಳ್ಳಿ ರಮೇಶ್ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಸಭೆಯಲ್ಲಿ ಹಾಜರಿದ್ದ ಸದಸ್ಯರು, ‘ಸಂಸ್ಕರಣ ಘಟಕ ಸ್ಥಾಪನೆಯನ್ನು ವಿರೋಧಿಸುತ್ತೇವೆ. ಈ ಯೋಜನೆ ಕುರಿತು ಈ ತಿಂಗಳ 30ರೊಳಗೆ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಭೆ ಕರೆದು ಸಂಪೂರ್ಣ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.
ಅಮಾನಿಕೆರೆಗೆ ಹೇಮಾವತಿ ನೀರು ಹರಿಸಲು ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದ ಅವರು, ನಿಗದಿತ ದಿನಾಂಕದೊಳಗೆ ಸಭೆ ಕರೆಯದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.